Asianet Suvarna News Asianet Suvarna News

ಗ್ಯಾರಂಟಿ ಯೋಜನೆಗಳ ಜಾರಿಗೆ ಬಂತು ಪ್ರಾಧಿಕಾರ..!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಸಾಂಸ್ಥಿಕ ಕಾರ್ಯವಿಧಾನಗಳ ಬಗ್ಗೆ ಆದೇಶ ಹೊರಡಿಸಿದೆ.

Authority to be Implement Congress Government's Guarantee Schemes in Karnataka grg
Author
First Published Jan 28, 2024, 6:32 AM IST

ಬೆಂಗಳೂರು(ಜ.28):  ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ 'ರಾಜ್ಯಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, 'ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ, 'ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ', ಬಿಬಿಎಂಪಿ ಮಟ್ಟದಲ್ಲಿ 'ಬಿಬಿಎಂಪಿ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ' ರಚನೆಗೆ ರಾಜ್ಯ ಸರ್ಕಾರ ಆದೇಶಿಸಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಸಾಂಸ್ಥಿಕ ಕಾರ್ಯವಿಧಾನಗಳ ಬಗ್ಗೆ ಆದೇಶ ಹೊರಡಿಸಿದೆ.

ಇದರಂತೆ ರಾಜ್ಯಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಸಚಿವ ಸಂಪುಟ ದರ್ಜೆಯ ಒಬ್ಬರು ಅಧ್ಯಕ್ಷರು, ರಾಜ್ಯ ಸಚಿವ ಸ್ಥಾನಮಾನದೊಂದಿಗೆ 5 ಮಂದಿ ಉಪಾಧ್ಯಕ್ಷರು, ಜಿಲ್ಲಾ ಪ್ರಾತಿನಿಧ್ಯಕ್ಕಾಗಿ 31 ಜಿಲ್ಲೆಗಳಿಂದ 31 ಮಂದಿಯನ್ನು ಸದಸ್ಯರನ್ನಾಗಿ ಹಾಗೂ ಒಬ್ಬರು ಹಿರಿಯ ಅಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಸಿದ್ದರಾಮಯ್ಯ ಸಿಎಂ ಆಗದೆ ಇದ್ದಿದ್ರೆ ಗ್ಯಾರಂಟಿ ಜಾರಿ ಅಸಾಧ್ಯ: ಸಚಿವ ಬೈರತಿ ಸುರೇಶ್‌

ಐದು ವಿಭಾಗಗಳಾಗಿ ವಿಂಗಡಣೆ: 

ಇನ್ನು ರಾಜ್ಯದಜಿಲ್ಲೆಗಳನ್ನು ಐದು ವಿಭಾಗಗಳನ್ನಾಗಿ ವಿಂಗಡಿಸಿ ರಾಜ್ಯ ಮಟ್ಟದ ಅನುಷ್ಠಾನ ಪ್ರಾಧಿಕಾರದ ಐದು ಮಂದಿ ಉಪಾಧ್ಯಕ್ಷರುಗಳಿಗೆ ತಲಾ ಒಂದೊಂದು ವಿಭಾಗಗಳ ಜವಾಬ್ದಾರಿಯನ್ನು ಹಂಚಿಕೆ ಮಾಡಬೇಕು. ಸದಸ್ಯ ಕಾರ್ಯದರ್ಶಿಯು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಇತರೆ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಲ್ಲಿ ಒಬ್ಬರನ್ನು ರಾಜ್ಯಮಟ್ಟದ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ತಿಳಿಸಲಾಗಿದೆ.

ಜಿಲ್ಲಾ ಮಟ್ಟದ ಪ್ರಾಧಿಕಾರ: 

ಇನ್ನು ಜಿಲ್ಲಾ ಮಟ್ಟದ ಪ್ರಾಧಿಕಾರಕ್ಕೆ ರಾಜ್ಯಮಟ್ಟದ ಪ್ರಾಧಿಕಾರದ ಸದಸ್ಯರೊಬ್ಬರನ್ನು ಅಧ್ಯಕ್ಷರಾಗಿ, ಐದು ಉಪಾಧ್ಯಕ್ಷರು, 15 ಸದಸ್ಯರನ್ನು ನೇಮಿಸಬೇಕು. ತಾಲ್ಲೂಕು ಮಟ್ಟದ ಅನುಷ್ಠಾನದ ಸಮಿತಿಗೆ ಜಿಲ್ಲಾ ಪ್ರಾಧಿಕಾರದ ಸದಸ್ಯರೊಬ್ಬರನ್ನು ಅಧ್ಯಕ್ಷರು ಹಾಗೂ 15 ಮಂದಿ ಸದಸ್ಯರನ್ನು ನೇಮಿಸಬೇಕು. ಎಲ್ಲಾ ಪ್ರಾಧಿಕಾರ ಹಾಗೂ ಸಮಿತಿಗಳಿಗೂ ಅಧಿಕಾರಿಯೊಬ್ಬರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಬೇಕು ಎಂದು ತಿಳಿಸಲಾಗಿದೆ.

ಬಿಬಿಎಂಪಿ ಮಟ್ಟದ ಸಮಿತಿಗೆ ರಾಜ್ಯಮಟ್ಟದ ಪ್ರಾಧಿಕಾರದ ಸದಸ್ಯರೊಬ್ಬರನ್ನು ಅಧ್ಯಕ್ಷರನ್ನಾಗಿ, 28 ಕ್ಷೇತ್ರಗಳಿಗೆ ತಲಾ ಒಬ್ಬರಂತೆ 28 ಮಂದಿ ಸದಸ್ಯರು, ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಬೇಕು ಎಂದು ಹೇಳಲಾಗಿದೆ.

ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರದಿಂದ ಜನರ ಕಿವಿಗೆ ಹೂವು: ವಿಜಯೇಂದ್ರ ಟೀಕೆ

ಪ್ರಾಧಿಕಾರ, ಸಮಿತಿಗಳ ರಚನೆಗೆ ಸಮರ್ಥನೆ

ಪ್ರಾಧಿಕಾರ ಹಾಗೂ ಸಮಿತಿಗಳ ಅನಿವಾರ್ಯತೆಯನ್ನೂ ವಿವರಿಸಿದ್ದು, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಮತ್ತು ಯುವನಿಧಿ ಯೋಜನೆಗಳನ್ನು ಸರ್ಕಾರ ಜಾರಿ ಮಾಡಿದೆ. ಈ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಮೇಲ್ವಿಚಾರಣೆಗೆ ರಾಜ್ಯ ಮಟ್ಟದ ಕಾರ್ಯ ವ್ಯವಸ್ಥೆಗೆ ಜಾರಿಗೆ ತರುವುದು ಅವಶ್ಯಕತೆ ಇರುವುದರಿಂದ ಅನುಷ್ಠಾನದ ನೀತಿ ಸುಧಾರಣೆ, ಅನುಷ್ಠಾನದ ವಿಧಾನಗಳಲ್ಲಿ ಸರಳೀಕರಣ ತರಲು ಹಾಗೂ ತಳಮಟ್ಟದಲ್ಲಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರಾಧಿಕಾರ ಹಾಗೂ ಸಮಿತಿಗಳನ್ನು ರಚನೆ ಮಾಡಿರುವುದಾಗಿ ಆದೇಶದಲ್ಲಿ ಸಮರ್ಥನೆ ನೀಡಲಾಗಿದೆ.

• ರಾಜ್ಯ ಮಟ್ಟದ ಪ್ರಾಧಿಕಾರಕ್ಕೆ ಒಬ್ಬರು ಸಂಪುಟ ದರ್ಜೆ ಅಧ್ಯಕ್ಷ
• 31 ಜಿಲ್ಲೆಗಳಿಗೆ 31 ಸದಸ್ಯರು ಮತ್ತು ಒಬ್ಬ ಹಿರಿಯ ಅಧಿಕಾರಿ
• ಜಿಲ್ಲೆಗಳನ್ನು 5 ವಿಭಾಗ ಮಾಡಿ 5 ಮಂದಿ ಉಪಾಧ್ಯಕ್ಷರು, 15 ಮಂದಿ ಸದಸ್ಯರ ನೇಮಕ
• ತಾಲೂಕು ಮಟ್ಟದ ಸಮಿತಿಗೂ ಒಬ್ಬ ಅಧ್ಯಕ್ಷ ಹಾಗೂ 15 ಮಂದಿ ಸದಸ್ಯರ ನೇಮಕ

Latest Videos
Follow Us:
Download App:
  • android
  • ios