ಟಿಕೆಟ್ಗಾಗಿ ಮಾಜಿ ಸಚಿವ ಎ.ಮಂಜು ಜೆಡಿಎಸ್ ಜತೆಗೆ ರಾಜಿಯಾಗಿದ್ದರೂ ಅವರು ನಮ್ಮ ಜತೆಗೂ ಸಂಪರ್ಕದಲ್ಲಿದ್ದಾರೆ. ಶಾಸಕ ಎ.ಟಿ.ರಾಮಸ್ವಾಮಿ, ಹಾಸನದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್ ಅವರ ಜತೆಗೂ ಮಾತನಾಡಿದ್ದೇವೆ.
ಹಾಸನ (ಮಾ.02): ಟಿಕೆಟ್ಗಾಗಿ ಮಾಜಿ ಸಚಿವ ಎ.ಮಂಜು ಜೆಡಿಎಸ್ ಜತೆಗೆ ರಾಜಿಯಾಗಿದ್ದರೂ ಅವರು ನಮ್ಮ ಜತೆಗೂ ಸಂಪರ್ಕದಲ್ಲಿದ್ದಾರೆ. ಶಾಸಕ ಎ.ಟಿ.ರಾಮಸ್ವಾಮಿ, ಹಾಸನದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್ ಅವರ ಜತೆಗೂ ಮಾತನಾಡಿದ್ದೇವೆ. ಹಾಸನ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಮಾ.8ರ ನಂತರ ಘೋಷಣೆ ಮಾಡಲಾಗುವುದು ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿ, ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಕೇಸ್ ಹೈಕೋರ್ಚ್ನಲ್ಲಿರುವುದರಿಂದ ಎ.ಮಂಜುಗೆ ಜೆಡಿಎಸ್ನವರು ಟಿಕೆಟ್ ಘೋಷಿಸಿದ್ದಾರೆ. ರೇವಣ್ಣ ಮತ್ತು ಅವರ ಕುಟುಂಬ, ಮಕ್ಕಳು ಎ.ಮಂಜು ಜೊತೆ ಮಾತನಾಡುತ್ತಿದ್ದಾರೆ. ಎ.ಮಂಜು ಟಿಕೆಟ್ಗಾಗಿ ಈ ಕೇಸಲ್ಲಿ ರಾಜಿಯಾಗಿದ್ದಾರೆ. ಆದರೂ ಅಧಿಕೃತವಾಗಿ ಆ ಕೇಸ್ ವಾಪಸ್ ಪಡೆಯಲು ಆಗುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ರಾಜ್ಯ ಸರಕಾರಕ್ಕೆ ಕಿವಿ, ಕಣ್ಣು, ಹೃದಯ ಏನೂ ಇಲ್ಲ: ಡಿ.ಕೆ.ಶಿವಕುಮಾರ್
ಎ.ಮಂಜು ನನ್ನ ಸ್ನೇಹಿತ. ನಾನು ಪಕ್ಷದ ಅಧ್ಯಕ್ಷಾಗಿ ಅವರ ಜೊತೆ ಮಾತನಾಡಿದ್ದೇನೆ. ರಾಜಕೀಯದಲ್ಲಿ ಚರ್ಚೆ ಸಾಮಾನ್ಯ. ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಕೂಡ ಮಾತನಾಡಿದ್ದಾರೆ. ಅವರ ಪಕ್ಷ ಸೇರ್ಪಡೆ ಬಗ್ಗೆಯೂ ನಿರ್ಧಾರ ಮಾಡಲಾಗುತ್ತದೆ. ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಅವರು ಸೇರ್ಪಡೆಗೊಳ್ಳಲಿದ್ದಾರೆ. ಹಾಸನ ಕ್ಷೇತ್ರದ ಜೆಡಿಎಸ್ ಮುಖಂಡ ಎಚ್.ಪಿ.ಸ್ವರೂಪ್ ಜೊತೆ ಕೂಡ ಮಾತುಕತೆ ನಡೆಸುತ್ತಿದ್ದೇವೆ. ಅವರು ಕೂಡ ಶೀಘ್ರ ನಿರ್ಧಾರ ತಿಳಿಸಲಿದ್ದಾರೆ. ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಇದೇ ತಿಂಗಳು 7 ಮತ್ತು 8ರಂದು ಸ್ಕ್ರೀನಿಂಗ್ ಕಮಿಟಿ ಸಭೆ ಇದೆ. ಸಭೆ ಬಳಿಕ ಪಟ್ಟಿಬಿಡುಗಡೆ ಮಾಡಲಾಗುವುದು ಎಂದರು.
ಭಾವನಾತ್ಮಕ ಮಾತು ನಿಲ್ಲಿಸಲಿ: ಪ್ರಧಾನಿ ಮೋದಿ ಅವರು ನಿಜಲಿಂಗಪ್ಪ ವಿಚಾರವಾಗಿ ಮತನಾಡುವುದಕ್ಕಿಂತ ಮೊದಲು ಆಡ್ವಾಣಿ, ಮುರುಳಿ ಮನೋಹರ ಜೋಷಿ ಯಾರು? ಅವರಿಂದ ಮೇಲೆ ಬಂದು ಕೊನೆಗೆ ಅವರಿಗೆ ಏನು ಮಾಡಿದೆ ಎಂಬುದನ್ನು ಮೊದಲು ತಿಳಿದು ಮಾತನಾಡಲಿ. ವೀರೇಂದ್ರ ಪಾಟೀಲ್ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷ ಸಹಕಾರ ಮಾಡಿದೆ ಎಂದ ಡಿ.ಕೆ.ಶಿವಕುಮಾರ್, ವೀರಶೈವ ಲಿಂಗಾಯತ ಮತ ಪಡೆಯುವ ದೃಷ್ಟಿಯಿಂದ ಪ್ರಧಾನಿ ಪಾಟೀಲ್, ನಿಜಲಿಂಗಪ್ಪ ಕುರಿತು ಹೇಳಿಕೆ ಕೊಡುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಉದ್ಯೋಗ, ಆದಾಯ ಹೆಚ್ಚಳದ ಬಗ್ಗೆ ಮಾತನಾಡಲಿ. ಭಾವನಾತ್ಮಕ ಮಾತುಗಳನ್ನು ನಿಲ್ಲಿಸಲಿ ಎಂದರು.
ಮೋದಿಯಿಂದ ದಲಿತ ಮುಖಂಡನಿಗೆ ಅವಮಾನ: ಪ್ರಧಾನಿ ಮೋದಿ ಅವರು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆ ಅವರನ್ನು ರಬ್ಬರ್ ಸ್ಟ್ಯಾಂಪ್ ಎಂದು ಕರೆದು ಒಬ್ಬ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿಗೆ ಅವಹೇಳನ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಡಿ.ಕೆ.ಶಿವಕುಮಾರ್ ಹೇಳಿಕೆಗೆ ಕಿಮ್ಮತ್ತಿಲ್ಲ: ಸಚಿವ ಅಶ್ವತ್ಥ ನಾರಾಯಣ
ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಇನ್ನಿತರ ಮಹಾನ್ ನಾಯಕರು ಕೂತ ಜಾಗದಲ್ಲಿ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಈಗ ಆಸೀನರಾಗಿದ್ದಾರೆæ. ದಲಿತ ನಾಯಕರಾಗಿ, ಗುಲ್ಬರ್ಗ ಮುನ್ಸಿಪಲ್ ಸದಸ್ಯರಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, 9 ಬಾರಿ ಶಾಸಕರು, 2 ಬಾರಿ ಸಂಸದರಾಗಿ, ಪ್ರಸ್ತುತ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಸ್ವಂತ ಸಾಮರ್ಥ್ಯದಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಖರ್ಗೆ ಅವರು ವರ್ಚಸ್ಸಿನಲ್ಲಿ ತಮಗೆ ಪೈಪೋಟಿ ನೀಡುತ್ತಿದ್ದಾರೆಂಬ ಕಾರಣಕ್ಕಾಗಿ ಅವರ ವಿರುದ್ಧ ಮಾತನಾಡಿರುವುದು ಖಂಡನೀಯ ಎಂದರು.
