ಕಾಂಗ್ರೆಸ್‌ ಪಕ್ಷ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಪಟ್ಟಣದ ಒಕ್ಕಲಿಗರ ಸಮುದಾಯ ಭವನದ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದರು.

ಸಕಲೇಶಪುರ (ಮಾ.01): ಕಾಂಗ್ರೆಸ್‌ ಪಕ್ಷ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಪಟ್ಟಣದ ಒಕ್ಕಲಿಗರ ಸಮುದಾಯ ಭವನದ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಜನಪರವಾಗಿ ಅನೇಕ ಯೋಜನೆಗಳನ್ನು ತಂದಿದೆ. ಅಧಿಕಾರಕ್ಕೆ ಬಂದರೆ ಉತ್ತಮ ಆಡಳಿತ ನೀಡುತ್ತದೆ. ರಾಜ್ಯ ಸರಕಾರಕ್ಕೆ ಕಿವಿ, ಕಣ್ಣು, ಹೃದಯ ಏನೂ ಇಲ್ಲ. ಆದಾಯ ವೃದ್ಧಿಮಾಡುವುದಾಗಿ ಹೇಳಿ ಜನಸಾಮಾನ್ಯರ ಜೀವನವನ್ನು ಸಂಕಷ್ಟಕ್ಕೆ ತಳ್ಳಿದರು. 

Add Asianetnews Kannada as a Preferred SourcegooglePreferred

ಈ ಕ್ಷೇತ್ರದ ಅಭಿವೃದ್ಧಿಗೆ, ಜನರ ಜೀವನದ ಬದಲಾವಣೆಗೆ, ಅಧಿ​ಕಾರದ ಬದಲಾವಣೆ ಅಗತ್ಯವಾಗಿದೆ. ಈ ಬಾರಿ ಕಾಂಗ್ರೆಸ್‌ಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ಕೆಪಿಸಿಸಿ ಉಪಾಧ್ಯಕ್ಷ ಧ್ರುವ ನಾರಾಯಣ್‌ ಮಾತನಾಡಿ, 30 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಧಿ​ಕಾರ ಕಳೆದು ಕೊಂಡಿದೆ. ಒಮ್ಮೆ ಅವಕಾಶ ನೀಡಿ. ಕಾಂಗ್ರೆಸ್‌ ದೇಶದಲ್ಲಿ ಕ್ರಾಂತಿಕಾರಿ ಕೆಲಸವನ್ನು ಮಾಡಿದೆ ಎಂದರು. ಮಾಜಿ ಸಚಿವ ಯು.ಟಿ ಖಾದರ್‌ ಮಾತನಾಡಿ, ಸಕಲೇಶಪುರ ಪ್ರವಾಸಿ ತಾಣವಾಗಿದ್ದರು, ಅದು ದೇಶದ ಜನರನ್ನು ಆಕರ್ಷಿಸಲು ವಿಫಲವಾಗಿದೆ. ಇದಕ್ಕೆ ಇಲ್ಲಿಯ ಜನ ಪ್ರತಿನಿ​ಗಳು ಕಾರಣ ಎಂದರು. 

ಸರ್ಕಾರ ನಡೆಸುವ ಬಗ್ಗೆ ಸಿದ್ದು ಕಡೆ ಬೊಮ್ಮಾಯಿ ಪಾಠ ಕೇಳಲಿ: ಜಮೀರ್‌ ಅಹ್ಮದ್‌

ಕಾರ್ಯಕ್ರಮದಲ್ಲಿ, ತಾಲೂಕು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಬೈರಮುಡಿ ರಾಮಚಂದ್ರ, ಸಂಸದ ಡಿ. ಕೆ.ಸುರೇಶ್‌, ಕಾಂಗ್ರೆಸ್‌ ಪಕ್ಷದ ಮುಖಂಡರು ಎಚ್‌.ಎಮ್‌ ರೇವಣ್ಣ, ಮೋಟಮ್ಮ, ನಿವೃತ್ತ ಅಧಿ​ಕಾರಿ ಬಾವ, ಜಿ.ಸಿ ಚಂದ್ರಶೇಖರ, ಜಿಲ್ಲಾಧ್ಯಕ್ಷ ಲಕ್ಷ್ಮಣ್‌, ಜಿಲ್ಲಾ ಮುಖಂಡರುಗಳಾದ ಎಚ್‌. ಕೆ. ಮಹೇಶ್‌ ಜವರೇಗೌಡ ಹಾಗೂ ಟಿಕೆಟ್‌ ಆಕಾಂಕ್ಷಿಗಳಾದ ಮುರುಳಿ ಮೋಹನ್‌, ಮಾಜಿ ಶಾಸಕ ಡಿ.ಮಲ್ಲೇಶ್‌, ಡಿ.ಸಿ.ಸಣ್ಣಸ್ವಾಮಿ, ಯುವ ಮುಖಂಡ ಭುವನಾಕ್ಷ ವೇದಿಕೆಯಲ್ಲಿ ಇದ್ದರು. 

ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್‌ ಸಮ್ಮದ್‌, ಮುಖಂಡರುಗಳಾದ ಬನವಾಸಿ ರಂಗಸ್ವಾಮಿ, ಮಾಜಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾನುಬಾಳು ಭಾಸ್ಕರ್‌, ವಿದ್ಯಾಶಂಕರ್‌, ಲೋಹಿತ್‌ ಕೌಡಳ್ಳಿ, ಸಯ್ಯದ್‌ ಮುಪೀಜ್‌, ಕೆಪಿಸಿಸಿ ಸದಸ್ಯ ಸಲೀಂ ಕೊಲ್ಲಹಳ್ಳಿ, ಎಡೆಹಳ್ಳಿ ಆರ್‌.ಮಂಜುನಾಥ್‌, ಫಾರೂಖ್‌, ಹಸೀನ ಹುರುಡಿ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆ ಮತ್ತು ತಾಲೂಕಿನ ಹಲವು ಮುಖಂಡರುಗಳು ಭಾಗವಹಿಸಿದ್ದರು.

ಬೃಹತ್‌ ಸೇಬಿನ ಹಾರ, ಹೂವಿನ ಸುರಿಮಳೆ: ಪಟ್ಟಣದ ಹೇಮಾವತಿ ಸೇತುವೆ ಬಳಿಯಿಂದ ಬೈಕ್‌ ರಾರ‍ಯಲಿ ಮುಖಾಂತರ ಸ್ವಾಗತಿಸಿ, ಹಳೆ ಬಸ್‌ ನಿಲ್ದಾಣದಲ್ಲಿ ಕ್ರೇನ್‌ ಮೂಲಕ ಸೇಬಿನ ಹಾರ ಹಾಕಿ, ಜೆಸಿಬಿ ಮೂಲಕ ಹೂವಿನ ಮಳೆ ಸುರಿಸಲಾಯಿತು. ನಂತರ ಪಟ್ಟಣದ ಮಿನಿ ವಿಧಾನ ಸೌಧದ ಬಳಿ ಇರುವ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆಗೆ ಡಿ.ಕೆ.ಶಿವಕುಮಾರ್‌ ಮಾಲಾರ್ಪಣೆ ಮಾಡಿ ವೇದಿಕೆ ಕಾರ್ಯಕ್ರಮಕ್ಕೆ ಬಂದರು.

ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಕಿಮ್ಮತ್ತಿಲ್ಲ: ಸಚಿವ ಅಶ್ವತ್ಥ ನಾರಾಯಣ

ಅದ್ಧೂರಿ ಸ್ವಾಗತ: ಎರಡನೇ ಸುತ್ತಿನ ಪ್ರಜಾಧ್ವನಿ ಯಾತ್ರೆಯಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಅವರು ಆಲೂರಿಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಹಾಸನದ ರಿಂಗ್‌ ರಸ್ತೆ, ಬಿಟ್ಟಗೌಡನಹಳ್ಳಿ ವೃತ್ತದಲ್ಲಿ ಕೆಲ ಸಮಯ ವಾಹನ ನಿಲ್ಲಿಸಿದ ಹಿನ್ನಲೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡರಾದ ಬನವಾಸೆ ರಂಗಸ್ವಾಮಿ ನೇತೃತ್ವದಲ್ಲಿ ನೂರಾರು ಜನ ಕಾರ್ಯಕರ್ತರು ಸೇರಿ ಸನ್ಮಾನಿಸಿ ಗೌರವಿಸುವುದರ ಮೂಲಕ ಜಿಲ್ಲೆಗೆ ಸ್ವಾಗತಿಸಿದರು. ವಿಧಾನಸಭಾ ಚುನಾವಣೆ ಸಮೀಪದಲ್ಲಿದ್ದು, ಪಕ್ಷದ ಕಾರ್ಯಕರ್ತರು ಸೇರಿ ಪಕ್ಷವನು ಬಲಪಡಿಸುವಂತೆ ಡಿ.ಕೆ. ಶಿವಕುಮಾರ್‌ ಅವರು ಕರೆ ನೀಡಿದರು. ಇದೆ ವೇಳೆ ಬನವಾಸೆ ರಂಗಸ್ವಾಮಿ ಅವರ ಭಾವಚಿತ್ರವನ್ನು ಹಿಡಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.