ಲಿಂಬಾವಳಿ, ರಾಮದಾಸ್‌ಗೆ ಟಿಕೆಟ್‌ ಸಿಗೋದು ಡೌಟು, ಮಹದೇವಪುರ, ಕೃಷ್ಣರಾಜಕ್ಕೆ ಹೊಸ ಮುಖಗಳಿಗೆ ಮಣೆ ಸಾಧ್ಯತೆ, ನಿವೃತ್ತ ಐಎಎಸ್‌ ಶಿವರಾಂ, ರಾಜೀವ್‌ ಹೆಸರು ಮುಂಚೂಣಿಯಲ್ಲಿ.  

ಬೆಂಗಳೂರು(ಏ.16):  ಬಿಜೆಪಿಯ ಹಾಲಿ ಶಾಸಕರಾದ ಅರವಿಂದ್‌ ಲಿಂಬಾವಳಿ ಮತ್ತು ಎಸ್‌.ಎ.ರಾಮದಾಸ್‌ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಕ್ಷೀಣಿಸಿದೆ. ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ ಕ್ಷೇತ್ರ ಮತ್ತು ರಾಮದಾಸ್‌ ಪ್ರತಿನಿಧಿಸುವ ಕೃಷ್ಣರಾಜ ಕ್ಷೇತ್ರದಿಂದ ಹೊಸಬರಿಗೆ ಅವಕಾಶ ಕಲ್ಪಿಸಲು ಪಕ್ಷ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ನಡುವೆ ರಾಮದಾಸ್‌ ಅವರು ಶನಿವಾರ ಪಕ್ಷದ ಕಚೇರಿಗೆ ಆಗಮಿಸಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ಟಿಕೆಟ್‌ ನೀಡುವ ಸಾಧ್ಯತೆ ಇಲ್ಲ ಎಂಬ ಅಂಶವನ್ನು ಹಿರಿಯ ನಾಯಕರು ಗಮನಕ್ಕೆ ತಂದಿದ್ದಾರೆ. ಹೀಗಾಗಿ ಅವರು ನಿರಾಸೆಯಿಂದಲೇ ಮೈಸೂರಿಗೆ ನಿರ್ಗಮಿಸಿದರು ಎನ್ನಲಾಗಿದೆ.

ಕಟ್ಟಿದ ಮನೆಯಿಂದ ಹೊರಹೋಗಲು ದುಃಖವಾಗ್ತಿದೆ: ಜಗದೀಶ ಶೆಟ್ಟರ್ ಭಾವುಕ ಮಾತು

ಮಹದೇವಪುರ ಕ್ಷೇತ್ರದಿಂದ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಂ ಮತ್ತು ಕೃಷ್ಣರಾಜ ಕ್ಷೇತ್ರದಿಂದ ಪಕ್ಷದ ಮುಖಂಡ ರಾಜೀವ್‌ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿವೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.