ಎರಡು ವರ್ಷಗಳ ಸಾರ್ವಜನಿಕ ಮೌನದ ನಂತರ, ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭಟ್ಕಳದಲ್ಲಿ ನಡೆದ 'ಹಿಂದೂ ಸಂಗಮ' ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಭಾಷಣದಲ್ಲಿ ರಾಜಕೀಯ ಪ್ರಸ್ತಾಪಿಸದೆ, ಕೇವಲ ಸಂಘ ಮತ್ತು ಹಿಂದುತ್ವದ ಬಗ್ಗೆ ಮಾತನಾಡಿದ ಅವರು, ಹಿಂದೂ ಐಕ್ಯತೆಯ ಮಹತ್ವವನ್ನು ಒತ್ತಿ ಹೇಳಿದರು.

 ಭಟ್ಕಳ (ಮಾ.9): ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಸಾರ್ವಜನಿಕವಾಗಿ ಮೌನಕ್ಕೆ ಶರಣಾಗಿದ್ದ ಮಾಜಿ ಕೇಂದ್ರ ಸಚಿವ, ಪ್ರಖರ ವಾಗ್ಮಿ ಅನಂತಕುಮಾರ ಹೆಗಡೆ ಬರೋಬ್ಬರಿ ಎರಡು ವರ್ಷಗಳ ಬಳಿಕ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಯಿತು.

Add Asianetnews Kannada as a Preferred SourcegooglePreferred

ಆರ್‌ಎಸ್‌ಎಸ್‌ ಶತಮಾನೋತ್ಸವ ಅಂಗವಾಗಿ ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ಭಾನುವಾರ ನಡೆದ ‘ಹಿಂದೂ ಸಂಗಮ ಕಾರ್ಯಕ್ರಮ’ದಲ್ಲಿ ಪಾಲ್ಗೊಂಡು ಅವರು ದಿಕ್ಸೂಚಿ ಭಾಷಣ ಮಾಡಿದರು. 35 ವರ್ಷದ ಹಿಂದೆ ಜಿಲ್ಲಾ ಹಿಂದೂ ಜಾಗರಣಾ ವೇದಿಕೆ ಸಂಚಾಲಕರಿದ್ದ ಸಂದರ್ಭದಲ್ಲಿ ಅವರು ಇದೇ ಸ್ಥಳದಲ್ಲಿ ಭಾಷಣ ಮಾಡಿ ಗಮನ ಸೆಳೆದಿದ್ದರು. ಇದೀಗ ಅವರು ಮತ್ತೆ ಅದೇ ಸ್ಥಳದಲ್ಲಿ ಹಿಂದುತ್ವದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು.

ಆದರೆ, ತಮ್ಮ ಒಂದು ತಾಸಿನ ಭಾಷಣದಲ್ಲಿ ಅವರು ಎಲ್ಲಿಯೂ ರಾಜಕೀಯದ ಪ್ರಸ್ತಾಪ ಮಾಡಲಿಲ್ಲ. ಕೇವಲ ಸಂಘ ಮತ್ತು ಹಿಂದುತ್ವದ ಬಗ್ಗೆ ಮಾತ್ರ ಮಾತನಾಡಿದರು.

ಜಾತಿಗಿಂತ ಯೋಗ್ಯತೆ ಮುಖ್ಯ, ಜಾತ್ಯತೀತತೆ ಎಂದರೆ ಹಿಂದುತ್ವ ಎಂದು ಪ್ರತಿಪಾದಿಸಿದ ಹೆಗಡೆ, ಹಿಂದೂ ಐಕ್ಯತೆ ಇಲ್ಲದಿದ್ದರೆ ವಿನಾಶ ಖಂಡಿತ ಎಂದರು. ಆರ್‌ಎಸ್‌ಎಸ್‌ ಮುಗಿಸಲು ಯಾರಿಗೂ ಸಾಧ್ಯವಿಲ್ಲ ಎಂದ ಹೆಗಡೆ, ಭಾರತೀಯ ಸಂಸ್ಕೃತಿ ಇಂದು ಇಡೀ ಜಗತ್ತನ್ನೇ ಆಕರ್ಷಿಸುತ್ತಿದೆ. ಹೀಗಾಗಿ, ಸಂಸ್ಕಾರಯುತ ಬದುಕಿಗೆ ಒತ್ತು ನೀಡಿ ಎಂದು ಕರೆ ನೀಡಿದರು.

ಈ ಮಧ್ಯೆ, ಕಾರ್ಯಕ್ರಮ ಮುಗಿಸಿ ಅವರು ವಾಪಸ್‌ ಹೋಗುವ ಸಂದರ್ಭದಲ್ಲಿ ‘ಅನಂತಕುಮಾರ ಮುಂದಿನ ಮುಖ್ಯಮಂತ್ರಿ, ಅನಂತ ಕುಮಾರ ಹಿಂದೂ ಹುಲಿ’ ಎಂಬ ಘೋಷಣೆಗಳು ಮೊಳಗಿದವು. ಎರಡು ವರ್ಷಗಳ ಬಳಿಕ ಹೆಗಡೆ ಅವರು ಭಟ್ಕಳಕ್ಕೆ ಬಂದಿದ್ದರಿಂದ ಕಾರ್ಯಕರ್ತರು, ಅಭಿಮಾನಿಗಳು ಅವರನ್ನು ಮಾತನಾಡಿಸಲು ಮುಗಿಬಿದ್ದರು.