* ಮುನಿಸು ಶಮನಗೊಳಿಸುವಲ್ಲಿ ಯಶಸ್ವಿಯಾದ ಸಿಎಂ ಬೊಮ್ಮಾಯಿ* ಖಾತೆ ಕ್ಯಾತೆ ತೆಗೆದವರನ್ನ ಸಮಾಧಾನ ಮಾಡಿದ ಸಿಎಂ* ಎಂಟಿವಿ, ಆನಂದ್ ಸಿಂಗ್ ಮುನಿಸು ತಾತ್ಕಾಲಿಕ ಶಮನ

ಬೆಂಗಳೂರು, (ಆ.08): ಖಾತೆ ಹಂಚಿಕೆ ಬೆನ್ನಲ್ಲೆ ಭುಗಿಲೆದ್ದಿದ್ದ ಅಸಮಾಧಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾತ್ಕಾಲಿಕ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು.... ಖಾತೆ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ಸಚಿವರಾದ ಎಂಟಿಬಿ ನಾಗರಾಜ್ ಹಾಗೂ ಆನಂದ್ ಸಿಂಗ್ ಅವರ ಮನವೊಲಿಸುವಲ್ಲಿ ಬೊಮ್ಮಾಯಿ ಸಕ್ಸಸ್ ಆಗಿದ್ದು, ಈ ಮೂಲಕ ಬೀಸೋ ದೊಣ್ಣೆಯಿಂದ ಪಾರಾದಂತಾಗಿದೆ.

2-3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ, ಸಂಚಲನ ಮೂಡಿಸಿದ ಎಂಟಿಬಿ ಹೇಳಿಕೆ

ಖಾತೆ ಸಂಬಂಧ ಬೇಸರಗೊಂಡಿದ್ದ ಎಂಟಿಬಿ ನಾಗರಾಜ್ ಹಾಗೂ ಆನಂದ್ ಸಿಂಗ್ ಅವರು ಇಂದು (ಭಾನುವಾರ) ಪ್ರತ್ಯೇಕವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿ ಮಾತುಕತೆ ಮಾಡಿದರು. ಈ ವೇಳೆ ಬೊಮ್ಮಾಯಿ ಇಬ್ಬರಿಗೂ ಭರವಸೆ ನೀಡುವ ಮೂಲಕ ಸಮಧಾನಪಡಿಸಿದ್ದಾರೆ.

ಇನ್ನು ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ, ನನಗೆ ಎ ಗ್ರೇಡ್ ನಿಂದ ಬಿ ಗ್ರೇಡ್ ಗೆ ತಂದಿದಾರೆ. ಖಾತೆ ಬದಲಾವಣೆ ಮಾಡಲು ಕೇಳಿದ್ದೇನೆ. ವರಿಷ್ಠರ ಜತೆ ಚರ್ಚಿಸಿ ಹೇಳ್ತೀನಿ ಅಂತ ಸಿಎಂ ಹೇಳಿದಾರೆ. ಖಾತೆ ಬದಲಾಯಿಸೋವರೆಗೂ ಈಗ ಕೊಟ್ಟಿರೋ ಖಾತೆಯಲ್ಲೇ ಮುಂದುವರೀತೇನೆ ಎಂದು ಸ್ಪಷ್ಟಪಡಿಸಿದರು.

ಖಾತೆ ಕ್ಯಾತೆ: ಸಿಎಂ ಬೊಮ್ಮಾಯಿಗೆ ರಾಜೀನಾಮೆ ಎಚ್ಚರಿಕೆ ಕೊಟ್ಟ ಸಚಿವ

ವಸತಿಗಿಂತ ಒಳ್ಳೆ ಖಾತೆ ಕೇಳಿದ್ದೇನೆ. ಇಂಧನ, ಲೋಕೋಪಯೋಗಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಸಾರಿಗೆ ಇಲಾಖೆಗಳಲ್ಲಿ ಒಂದು ಕೊಡಲಿ. ಜನರ ಕೆಲಸ, ಬಡವರ ಕೆಲಸ ಮಾಡುವ ಖಾತೆ ಬೇಕು ಎಂದರು.

ಎರಡು ಮೂರು ದಿನಗಳಲ್ಲಿ ನಿರ್ಧಾರ ಪ್ರಕಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಂಟಿಬಿ, ಈಗಲೇ ಆ ನಿರ್ಧಾರ ಪ್ರಕಟ ಮಾಡಿದ್ದೇನೆ. ಬೇರೆ ಖಾತೆ ಕೊಡೋವರೆಗೂ ಈಗಿರುವ ಖಾತೆ ನಿಭಾಯಿಸ್ತೇನೆ ಎಂದು ಹೇಳಿದರು.

ಇನ್ನು ಆನಂದ್ ಸಿಂಗ್ ಮಾತನಾಡಿದ, ಮಾಧ್ಯಮಗಳ ಮುಂದೆ ಯಾವುದೇ ಬಹಿರಂಗ ಹೇಳಿಕೆ ಕೊಡಬೇಡಿ. ನಮ್ಮ-ನಿಮ್ಮ ಚರ್ಚೆ ನಾಲ್ಕು ಗೋಡೆಗಳ ಮಧ್ಯೆಯೇ ಇರಬೇಕು ಎಂದು ಹೇಳಿದ್ದಾರೆ. ಹಾಗಾಗಿ ಅವರ ಮಾತನ್ನು ಪಾಲಿಸುತ್ತೇನೆ ಎಂದು ಹೇಳಿ ಹೋದರು.

ಒಟ್ಟಿನಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾತೆ ಕ್ಯಾತೆ ತೆಗೆದವರನ್ನ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದಂತೂ ಸತ್ಯ.