ರಾಜ್ಯದಲ್ಲಿ ಆಪರೇಷನ್‌ ಕಮಲದ ಅನೈತಿಕ ಕೂಸು ಬಿಜೆಪಿ ಸರ್ಕಾರ ಹುಟ್ಟುಕೊಂಡ ದಿನದಿಂದ ಬಡಜನರಿಗೆ ಸಾವಿನ ಭಾಗ್ಯ, ಭ್ರಷ್ಟರಿಗೆ ಸಂಪತ್ತಿನ ಭಾಗ್ಯ ಬಂದು ವಿಧಾನಸೌಧವೇ ಕಮಿಷನ್‌ ಅಡ್ಡೆಯಾಗಿ ಬದಲಾಗಿದೆ: ಸಿದ್ದರಾಮಯ್ಯ

ಬೆಂಗಳೂರು(ಡಿ.31): ಮುಖ್ಯಮಂತ್ರಿ ಹುದ್ದೆಯನ್ನೇ 2 ಸಾವಿರ ಕೋಟಿ ರು.ಗಳಿಗೆ ಮಾರಾಟಕ್ಕೆ ಇಟ್ಟಿರುವ ರಾಜಕೀಯ ವ್ಯಾಪಾರಿ ಗೃಹಸಚಿವ ಅಮಿತ್‌ ಶಾ, ಕಾಂಗ್ರೆಸ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಅವರು, ನೇಮಕಾತಿ, ವರ್ಗಾವಣೆ, ಬಡ್ತಿ, ಅನುದಾನ ಹಂಚಿಕೆ, ಕಾಮಗಾರಿ ಅನುಷ್ಠಾನ, ಬಿಲ್‌ಪಾವತಿ ಹೀಗೆ ಅಡಿಯಿಂದ ಮುಡಿವರೆಗೆ ಶೇ.40 ಕಮಿಷನ್‌ ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ನಾಯಕರನ್ನು ಪಕ್ಕದಲ್ಲಿಟ್ಟುಕೊಂಡು ಭ್ರಷ್ಟಾಚಾರದ ಬಗೆಗೆ ಮಾತನಾಡುವ ಅಮಿತ್‌ಶಾ ಭಂಡತನಕ್ಕೆ ಶಹಭಾಸ್‌ ಅನ್ನಲೇಬೇಕು ಎಂದು ಲೇವಡಿ ಮಾಡಿದ್ದಾರೆ.

ಕಟೀಲ್ ಒಬ್ಬ ವಿದೂಷಕ, ಅವರ ಮಾತಿಗೆ ಉತ್ತರ ಕೊಡಲ್ಲ: ಸಿದ್ದರಾಮಯ್ಯ

‘ರಾಜ್ಯದಲ್ಲಿ ಆಪರೇಷನ್‌ ಕಮಲದ ಅನೈತಿಕ ಕೂಸು ಬಿಜೆಪಿ ಸರ್ಕಾರ ಹುಟ್ಟುಕೊಂಡ ದಿನದಿಂದ ಬಡಜನರಿಗೆ ಸಾವಿನ ಭಾಗ್ಯ, ಭ್ರಷ್ಟರಿಗೆ ಸಂಪತ್ತಿನ ಭಾಗ್ಯ ಬಂದು ವಿಧಾನಸೌಧವೇ ಕಮಿಷನ್‌ ಅಡ್ಡೆಯಾಗಿ ಬದಲಾಗಿದೆ. ಈ ಶೇ.40ನಲ್ಲಿ ಅಮಿತ್‌ ಶಾ ಅವರ ಪಾಲೆಷ್ಟು? ಬೆಳಗಾವಿಯ ಸಂತೋಷ್‌ ಪಾಟೀಲ್‌ ಅವರಿಂದ ಹಿಡಿದು ದೇವರಾಯನದುರ್ಗದ ಟಿ.ಎನ್‌.ಪ್ರಸಾದ್‌ವರೆಗೆ ಬಿಜೆಪಿ ಸರ್ಕಾರದ ಶೇ.40 ಕಮಿಷನ್‌ ಕಿರುಕುಳಕ್ಕೆ ಬಲಿಯಾದ ಗುತ್ತಿಗೆದಾರರ ಸರಣಿ ಆತ್ಮಹತ್ಯೆಗಳು ನಿಂತಿಲ್ಲ. ಈ ಸಾವುಗಳಿಗೆ ನ್ಯಾಯ ಕೊಡ್ತೀರಾ ಮಿಸ್ಟರ್‌ ಅಮಿತ್‌ ಶಾ?’ ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.