ಬೆಂಗಳೂರಿಗೆ ಆಗಮಿಸುತ್ತಿರುವ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನಾಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನೆಯಲ್ಲಿಯೇ ಬ್ರೇಕ್ ಫಾಸ್ಟ್ ಮಾಡಲಿದ್ದಾರೆ.
ಬೆಂಗಳೂರು (ಮಾ.23): ಇಂದು ರಾತ್ರಿ ಬೆಂಗಳೂರಿಗೆ ಆಗಮಿಸುತ್ತಿರುವ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನಾಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನೆಯಲ್ಲಿಯೇ ಬ್ರೇಕ್ ಫಾಸ್ಟ್ ಮಾಡಲಿದ್ದಾರೆ. ಈ ವೇಳೆ ಬಿಜೆಪಿ ಟಿಕೆಟ್ ಹಂಚಿಕೆ ಹಾಗೂ ದಾವಣಗೆರೆ ಸಮಾವೇಶದ ಕುರಿತ ಚರ್ಚೆ ಮಾಡಲಿದ್ದಾರೆ.
ಯುಗಾದಿ ಹಬ್ಬದ ಹಿನ್ನೆಲೆ ಬ್ರೇಕ್ ಫಾಸ್ಟ್ಗೆ ಆಹ್ವಾನ: ರಾಜ್ಯ ರಾಜಕಾರಣದ ವಿಚಾರಕ್ಕಾಗಿಯೇ ಮನೆಗೆ ಹೋಗಿ ಚರ್ಚೆ ಮಾಡುವುದಕ್ಕೆ ಅಮಿತ್ ಶಾ ಒಪ್ಪುವುದಿಲ್ಲ. ಹೀಗಾಗಿ, ಈ ಹಿಂದೆ ಬಂದ ಎಲ್ಲ ಸಂದರ್ಭಗಳಲ್ಲಿಯೂ ಹೋಟೆಲ್ನಲ್ಲಿ ತಂಗುವ ಜೊತೆಗೆ ಅಲ್ಲಿಯೇ ಊಟ, ತಿಂಡಿ ಎಲ್ಲವನ್ನೂ ಮಾಡುತ್ತಿದ್ದರು. ಆದರೆ, ಈಗ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರೇ ಸ್ವತಃ ಬ್ರೇಕ್ ಫಾಸ್ಟ್ಗೆ ಅಮಿತ್ ಶಾ ಅವರನ್ನು ಆಹ್ವಾನಿಸಿದ್ದಾರೆ. ಬೆಳಗ್ಗೆ 8 ಗಂಟೆಗೆ ಯಡಿಯೂರಪ್ಪ ಅವರ ನಿವಾಸದಲ್ಲಿ ಬ್ರೇಕ್ ಫಾಸ್ಟ್ನಲ್ಲಿ ಭಾಗಿ ಆಗಲಿದ್ದಾರೆ.
ಪಾಕ್ ಗಡಿ ಬಳಿ ಇರುವ ಶಾರದಾ ದೇಗುಲ ನಿರ್ಮಾಣ ಪೂರ್ಣ : ಇಂದು ಅಮಿತ್ ಷಾ ಉದ್ಘಾಟನೆ
ದೇಶದ ರಾಜಕಾರಣದಲ್ಲಿ ಅಮಿತ್ ಶಾ ಅವರು ರಾಜಕೀಯ ಲೆಕ್ಕಾಚಾರ ಹಾಕುವಲ್ಲಿ ಚಾಣಕ್ಯ ಎಂದೇ ಪ್ರಸಿದ್ಧಿ ಆಗಿದ್ದಾರೆ. ಅವರ ಎಲ್ಲ ನಡೆಗಳೂ ಕೂಡ ಭಾರೀ ತಂತ್ರಗಳಿಂದ ಕೂಡಿರುತ್ತವೆ ಎನ್ನುವುದೇ ಇದರ ಹಿಂದಿನ ವಿಶೇಷತೆ ಆಗಿದೆ. ಈ ಹಿಂದೆ ಬಂದ ಎಲ್ಲ ಸಂದರ್ಭಗಳಲ್ಲಿ ಅಮಿತ್ ಶಾ ಅವರು ಹೋಟೆಲ್ನಲ್ಲಿಯೇ ಉಳಿದುಕೊಂಡು, ಅಲ್ಲಿಂದಲೇ ರಾಜ್ಯ ರಾಜಕಾರಣದ ಕುರಿತು ಸಂಬಂಧಪಟ್ಟ ನಾಯಕರನ್ನು ಕರೆಸಿ ಚರ್ಚೆ ಮಾಡುತ್ತಿದ್ದರು. ಆದರೆ ಈ ಬಾರಿ ರಾಜ್ಯಕ್ಕೆ ಆಗಮಿಸುತ್ತಿರುವ ಬಿಜೆಪಿ ಚಾಣಕ್ಯ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಬ್ರೇಕ್ ಫಾಸ್ಟ್ ಮಾಡಲಿದ್ದಾರೆ. ಆದರೆ, ಇಲ್ಲಿ ಕೆಲವೇ ನಾಯಕರಿಗೆ ಮಾತ್ರ ಬ್ರೇಕ್ ಫಾಸ್ಟ್ ಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಬ್ರೇಕ್ ಫಾಸ್ಟ್ಗೆ ಸಿಎಂ, ರಾಜ್ಯಾಧ್ಯಕ್ಷರಿಗೂ ಅವಕಾಶ:
ರಾಜ್ಯ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಇನ್ನು 15 ದಿನಗಳಲ್ಲಿ ಚುನಾವಣಾ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕಾಂಗ್ರೆಸ್ನಿಂದ ಇನ್ನು 2 ದಿನಗಳಲ್ಲಿ ಅಭ್ಯರ್ಥಿಗಳ ಮೊದಲನೇ ಪಟ್ಟಿ ಬಿಡುಗಡೆ ಆಗಲಿದೆ. ಇದಕ್ಕೆ ಟಾಂಗ್ ಕೊಡುವ ನಿಟ್ಟಿನಲ್ಲಿ ಬಿಜೆಪಿಯಿಂದ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಚರ್ಚೆ ಮಾಡಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಭೇಟಿಯಾಗಲಿದ್ದಾರೆ. ಈ ವೇಳೆ ಬಿಎಸ್ ಯಡಿಯೂರಪ್ಪ ನಿವಾಸದಲ್ಲಿ ಬ್ರೇಕ್ಫಾಸ್ಟ್ ಮಾಡುವ ಮೂಲಕ ಮುಖ್ಯವಾದ ಚರ್ಚೆಗಳನ್ನು ಮಾಡಲಿದ್ದಾರೆ. ಇನ್ನು ಬಿಜೆಪಿಯ ಈರ್ವರು ದಿಗ್ಗಜರ ಬ್ರೇಕ್ಫಾಸ್ಟ್ ಕೂಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ಭಾಗಿಯಾಗಲಿದ್ದಾರೆ.
ಪ್ಲಾಸ್ಟಿಕ್ ಚೀಲಗಳಾಯ್ತು, ಈಗ ಬಿಎಸ್ವೈ ಲ್ಯಾಂಡಿಗ್ ವೇಳೆ ನಾಯಿ ಕಾಟ!
ಟಿಕೆಟ್ ಆಕಾಂಕ್ಷಿಗಳಿಗೆ ಭಾರಿ ಆತಂಕ: ಇನ್ನು ಬಿಜೆಪಿಯ ಇಬ್ಬರು ದಿಗ್ಗಜರು ಬ್ರೇಕ್ ಫಾಸ್ಟ್ಗೆ ಯಡಿಯೂರಪ್ಪ ಅವರ ಕಾವೇರಿ ನಿವಾಸದಲ್ಲಿ ಸೇರಲಿದ್ದಾರೆ. ಇನ್ನು ಪಕ್ಷದಲ್ಲಿ ಅತಿ ಗಣ್ಯರೆಂದು ಪರಿಗಣಿಸಲಾಗುವ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮಾತ್ರ ಅವಕಾಶ ಇದ್ದು, ಆಂತರಿಕ ವಿಚಾರಗಳನ್ನು ಇಲ್ಲಿ ಚರ್ಚೆ ಮಾಡಲಾಗುತ್ತದೆ ಎಂಬುದು ತಿಳಿದುಬಂದಿದೆ. ಇಲ್ಲಿ ರಾಜ್ಯದಲ್ಲಿ ಟಿಕೆಟ್ ಹಂಚಿಕೆ ಕುರಿತು ಅಂತಿಮವಾಗಿ ಆಯ್ಕೆ ಮಾಡಬೇಕಾದ ಕುರಿತು ಹಾಗೂ ಈಗ ಸದ್ಯಕ್ಕೆ ಸಿದ್ಧವಾಗಿರುವ ಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕುರಿತು ಚರ್ಚೆ ಮಾಡಲಾಗುತ್ತದೆ. ಆದ್ದರಿಂದ ರಾಜ್ಯದ 224 ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳಿಗೆ ಅಮಿತ್ಶಾ ಹಾಗೂ ಬಿಎಸ್ ಯಡಿಯೂರಪ್ಪ ಭೇಟಿ ಭಾರಿ ಕುತೂಹಲ ಮತ್ತು ಆತಂಕವನ್ನು ಸೃಷ್ಟಿಸಿದೆ.
