ಸ್ವತಃ ಶಾಸಕರು, ಸಚಿವರ ಅಹವಾಲು ಆಲಿಕೆಯ ಸರಣಿ ಸಭೆ ನಡೆಸಿದ್ದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ನಾಯಕತ್ವ ಬಿಕ್ಕಟ್ಟಿನಂತಹ ಮಹತ್ವದ ಬೆಳವಣಿಗೆ ನಡೆದಿರುವಾಗ ರಾಜ್ಯಕ್ಕೆ ಭೇಟಿ ನೀಡದೆ ನಾಪತ್ತೆಯಾಗಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು : ರಾಜ್ಯದಲ್ಲಿನ ಸಣ್ಣಪುಟ್ಟ ವಿಷಯಗಳಿಗೂ ಪ್ರತ್ಯಕ್ಷವಾಗುತ್ತಿದ್ದ ಹಾಗೂ ಸ್ವತಃ ಶಾಸಕರು, ಸಚಿವರ ಅಹವಾಲು ಆಲಿಕೆಯ ಸರಣಿ ಸಭೆ ನಡೆಸಿದ್ದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ನಾಯಕತ್ವ ಬಿಕ್ಕಟ್ಟಿನಂತಹ ಮಹತ್ವದ ಬೆಳವಣಿಗೆ ನಡೆದಿರುವಾಗ ರಾಜ್ಯಕ್ಕೆ ಭೇಟಿ ನೀಡದೆ ನಾಪತ್ತೆಯಾಗಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

Add Asianetnews Kannada as a Preferred SourcegooglePreferred

ಸಣ್ಣ ಪುಟ್ಟ ವಿಚಾರಗಳಿಗೂ ಸರ್ಕಾರದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದ ಸುರ್ಜೇವಾಲಾ ಅವರು, ಕಾಂಗ್ರೆಸ್‌ ಪಾಳೆಯದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದರೂ ಯಾಕೆ ಮಧ್ಯಪ್ರವೇಶಿಸುತ್ತಿಲ್ಲ ಎಂಬುದು ಕಾರ್ಯಕರ್ತರ ಪ್ರಶ್ನೆ.

ಪರಿಸ್ಥಿತಿ ಕೈ ಮೀರಿದ್ದರಿಂದ ಕೈ ಚೆಲ್ಲಿದರೇ?:

ಮೂಲಗಳ ಪ್ರಕಾರ, ಅಧಿಕಾರ ಹಸ್ತಾಂತರದ ಕುರಿತು ಮೊದಲೇ ಸ್ಪಷ್ಟತೆ ನೀಡುವ ಅಗತ್ಯವಿದೆ ಎಂದು ಕಳೆದ ಆಗಸ್ಟ್‌ನಲ್ಲೇ ಸುರ್ಜೇವಾಲಾ ಅವರು ವರಿಷ್ಠರಿಗೆ ತಿಳಿಸಿದ್ದರು. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ ಅವರು ಈ ಸಲಹೆಗೆ ಸ್ಪಂದಿಸಿರಲಿಲ್ಲ ಎನ್ನಲಾಗಿದೆ.

ಇದೀಗ ಪರಿಸ್ಥಿತಿ ಕೈಮೀರಿ ಹೋಗಿದೆ. ಈ ಹಂತದಲ್ಲಿ ನಾನು ಹೋಗಿ ಏನು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಉಭಯ ನಾಯಕರೂ ಇಲ್ಲ ಎಂದು ಹೇಳಿ ಪ್ರಹಸನದಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಧಿಕಾರಿಗಳೊಂದಿಗೂ ಸಭೆ:

ಕೆಲ ತಿಂಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಸುರ್ಜೇವಾಲಾ ಅವರು, ಕಾಂಗ್ರೆಸ್ ಶಾಸಕರು ಮತ್ತು ಸಚಿವರ ಜೊತೆ ಒನ್ ಟು ಒನ್ ಸಭೆ ನಡೆಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜತೆ ಸಭೆ ನಡೆಸಿ ಶಾಸಕರು, ಸಚಿವರ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದರು. ಸರ್ಕಾರಿ ಅಧಿಕಾರಿಗಳ ಸಭೆಗೂ ಮುಂದಾಗಿದ್ದರು ಎಂಬ ಆರೋಪ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳಿಂದ ‘ಸೂಪರ್‌ ಸಿಎಂ’ ಎಂದೇ ಟೀಕೆಗೆ ಗುರಿಯಾಗಿದ್ದರು.

ವಾರದ ಹಿಂದೆ ಬಣ ರಾಜಕೀಯ ಉಂಟಾಗಿ ಡಿನ್ನರ್‌ ಸಭೆಗಳು, ದೆಹಲಿ ಪರೇಡ್‌ಗಳು ನಡೆದಾಗಲೂ ಸುರ್ಜೇವಾಲಾ ಮೌನವಹಿಸಿದ್ದರು. ಇದು ಬಿಜೆಪಿ ಹಾಗೂ ಕೆಲ ವರ್ಗದ ಮಾಧ್ಯಮಗಳ ಅಪಪ್ರಚಾರ ಎಂದು ತೇಪೆ ಹಚ್ಚಲು ಯತ್ನಿಸಿ ಒಂದು ಟ್ವೀಟ್‌ ಮಾಡಿದ್ದರು. ಬಳಿಕ ಯಾವುದೇ ಸುದ್ದಿ ಇಲ್ಲದೆ ನಾಪತ್ತೆಯಾಗಿದ್ದಾರೆ.