ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಎಂದಿದ್ದ JDS ನಾಯಕನ ವಿರುದ್ಧ ಸಿಡಿದೆದ್ದ ಅಂಬಿ ಫ್ಯಾನ್ಸ್
ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಎಂದಿದ್ದ JDS ನಾಯಕನ ವಿರುದ್ಧ ಸಿಡಿದೆದ್ದ ಅಂಬಿ ಫ್ಯಾನ್ಸ್! ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ MLC ಕೆ.ಟಿ.ಶ್ರೀಕಂಠೇಗೌಡ ವಿರುದ್ಧ ಆಕ್ರೋಶ! ಸುಮಲತಾ ಅಂಬರೀಶ್ ರಾಜಕೀಯ ಪ್ರವೇಶಕ್ಕೆ ವಿರೋಧಿಸಿದ್ದ ಜೆಡಿಎಸ್ MLC ಕೆ.ಟಿ.ಶ್ರೀಕಂಠೇಗೌಡ! ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ ಅಂಬಿ ಅಭಿಮಾನಿಗಳು .
ಮಂಡ್ಯ, [ಫೆ.4]: ಜೆಡಿಎಸ್ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು ಸುಮಲತಾ ಮಂಡ್ಯದ ಗೌಡ್ತಿ ಅಲ್ಲವೆಂದ ಹೇಳಿಕೆ ನೀಡಿ ಅಂಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನನ್ನ ಮನೆಗೆ ರಾಜಕಾರಣ ಕೊನೆಯಾಗಲೆಂದು ಅಂಬರೀಶ್ ಅವರು ಬದುಕಿದ್ದಾಗ ಸ್ಪಷ್ಟವಾಗಿ ಹೇಳಿದ್ದಾರೆ. ಸುಮಲತಾ ಎಂದೂ ಮಂಡ್ಯದ ಗೌಡ್ತಿ ಅಲ್ಲ, ಆಂಧ್ರ ಪ್ರದೇಶದ ಗೌಡ್ತಿ. ರಮ್ಯಾ ಅವರು ಎಷ್ಟರ ಮಟ್ಟಕ್ಕೆ ನಮ್ಮ ಕೆಲಸ ಮಾಡಿಕೊಟ್ಟರು ನೋಡಿ ಆಗಿದೆ ಎಂದು ಹೇಳಿದ್ದರು.
'ಸುಮಲತಾ ಗೌಡ್ತಿ ಅಲ್ಲ, ಗೆದ್ದ ಮೇಲೆ ಎಲ್ಲಿ ಹುಡುಕುತ್ತೀರಿ'
ಅಂಬರೀಶ್ ಕಡೆ ದಿನಗಳಲ್ಲಿ ಮಂಡ್ಯದಿಂದ ಏಕೆ ಚುನಾವಣೆಗೆ ನಿಲ್ಲಲಿಲ್ಲ? ಜನ ಸೋಲಿಸುತ್ತಾರೆ ಎಂದು ಅಂಬಿಗೆ ಚೆನ್ನಾಗಿಯೇ ಗೊತ್ತಿತ್ತು. ಅದಕ್ಕೆ ಅಂಬಿ ಕ್ಷೇತ್ರಕ್ಕೆ ಬರಲಿಲ್ಲ.
ರಾಜಕಾರಣ ಹುಡುಗಾಟ ಅಲ್ಲ. ಜನರ ನೋವಿಗೆ ಸ್ಪಂದಿಸುವವರು ನಮಗೆ ಬೇಕು. ಜನಪ್ರತಿನಿಧಿಗಳ ಆಯ್ಕೆ ವಿಚಾರದಲ್ಲಿ ಮಂಡ್ಯ ಜನ ಸಾಕಷ್ಟು ನೋವು ಉಂಡಿದ್ದಾರೆ. ಎಲ್ಲಿಯೋ ಕುಳಿತು ಸ್ಪರ್ಧೆ ಮಾಡುತ್ತೇನೆ ಎನ್ನುವವರನ್ನ ಮಂಡ್ಯ ಜನ ಗೆಲ್ಲಿಸುವುದಿಲ್ಲ ಎಂದರು.
ಸಂಸದ ಶಿವರಾಮೇಗೌಡಗೆ ಅಂಬಿ ಫ್ಯಾನ್ಸ್ ವಾರ್ನಿಂಗ್
ದೇವೇಗೌಡರ ಕುಟುಂಬ ಸೇವೆಯಿಂದ ಬೆಳೆದು ಬಂದಿದೆ. ನಿಖಿಲ್ಕುಮಾರ್ ಮಂಡ್ಯದಿಂದ ಸ್ಪರ್ಧಿಸಲು ಅರ್ಥವಿದೆ. ಅವರು ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ರಾಜಕಾರಣ ಮಾಡಿದ್ದಾರೆ.
ಆದರೆ, ಸುಮಲತಾ ಅವರನ್ನು ಗೆದ್ದ ಮೇಲೆ ಎಲ್ಲಿ ಹುಡುಕಲು ಸಾಧ್ಯ? ಮಂಡ್ಯ ಲೋಕಸಭಾ ಕ್ಷೇತ್ರ ಕಾಂಗ್ರೆಸ್ಗೆ ಹೋಗುತ್ತೋ ಅಥವಾ ಜೆಡಿಎಸ್ಗೆ ಸಿಗುತ್ತೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು.
ಸಿಡಿದೆದ್ದ ಅಂಬಿ ಅಭಿಮಾನಿಗಳು
ಈ ಹೇಳಿಕೆ ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿದ್ದಂತೆ. ಅಂಬಿ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶ್ರೀಕಂಠೇಗೌಡ ಅವರನ್ನು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಮಂಡ್ಯದವರೆ? ಭವಾನಿ ಮೈಸೂರಿನವರು. ಅನಿತಾ ಕುಮಾರಸ್ವಾಮಿ ಚಿಕ್ಕಬಳ್ಳಾಪುರದವರಲ್ಲವೇ? ಅಂಬಿ ಬದುಕಿದ್ದಾಗ ಧೈರ್ಯವಿದ್ಧರೆ ಈ ಮಾತು ಹೇಳಬೇಕಿತ್ತು ಎಂದು ಪ್ರಶ್ನಿಸಿ ಜತೆಗೆ ಅವಾಚ್ಯ ಶಬ್ದಗಳಿಂದ ತರಾಟೆಗೆ ಗೆದುಕೊಂಡಿದ್ದು, ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.