ಅಂಬರೀಷ್ ಕುಟುಂಬಕ್ಕಿಲ್ಲ ಮಂಡ್ಯ JDS ಟಿಕೆಟ್: ಸಿಎಂ
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಚುನಾವಣಾ ಕಣಗಳೂ ರಂಗೇರುತ್ತಿವೆ. ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾವ ಅಭ್ಯರ್ಥಿಗಳು ಕಣಕ್ಕಿಳಿಯುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದ್ದು, ದಿನಕ್ಕೊಂದು ಅಭ್ಯರ್ಥಿಯ ಹೆಸರು ಕೇಳಿಬರುತ್ತಿವೆ.
ಮಂಡ್ಯ, [ಜ.14]: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸುಮಲತಾ ಅಂಬರೀಷ್ ಗೆ ಸ್ಯಾಂಡಲ್ವುಡ್ ಒತ್ತಾಯಿಸಿದೆ. ಕಾಂಗ್ರೆಸ್ ಅಥವಾ ಜೆಡಿಎಸ್ ನಿಂದ ಸ್ಪರ್ಧಿಸಿದ್ರೆ ಗೆಲ್ಲಿಸುವುದು ನಮ್ಮ ಜವಾಬ್ದಾರಿ ಅಂತನೂ ಸ್ಟಾರ್ ನಟರು ಭರವಸೆ ನೀಡಿದ್ದಾರೆ.
ಆದ್ರೆ ಸಿಎಂ ಕುಮಾರಸ್ವಾಮಿ ಅವರು ದಿವಂಗತ ರೆಬಲ್ ಸ್ಟಾರ್ ಅಂಬರಿಷ್ ಅವರ ಕುಟುಂಬಕ್ಕೆ ಮಂಡ್ಯ ಲೋಕಸಭಾ ಟಿಕೆಟ್ ನೀಡಲು ಹಿಂದೇಟು ಹಾಕಿದ್ದಾರೆ.
ಅಭಿಷೇಕ್-ನಿಖಿಲ್ ಸೈಡಿಗೆ, ಮಂಡ್ಯಕ್ಕೆ ಹೊಸ ಹೆಸರು ಸೂಚಿಸಿದ ಸ್ಯಾಂಡಲ್ವುಡ್
ಮೈಸೂರಿನಲ್ಲಿಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಇದು ಮಹಾಭಾರತದ ಕುರುಕ್ಷೇತ್ರವಲ್ಲ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ಪ್ರಕಟಿಸುತ್ತೇವೆ ಎಂದು ಹೇಳಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೆಬೆಲ್ ಸ್ಟಾರ್ ಅಂಬರೀಷ್ ಕುಟುಂಬಕ್ಕೆ ಜೆಡಿಎಸ್ ಟಿಕೆಟ್ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಅಂಬರೀಶ್ ಕುಟುಂಬ ಕಾಂಗ್ರೆಸ್ನಲ್ಲಿದೆ. ಅಂಬರೀಶ್ ಅವರು ಜೆಡಿಎಸ್ಗೆ ಬಂದಿರಲಿಲ್ಲ. ಅವರು ವಿಧಿವಶರಾದಾಗ ರಾಜ್ಯದ ಸಿಎಂ ಆಗಿ ಜನರ ಭಾವನೆಯೊಂದಿಗೆ ಗೌರವ ಸಲ್ಲಿಸಿದ್ದೇನೆ. ಅದಕ್ಕೂ ಜೆಡಿಎಸ್ ಬಗ್ಗೆ ಅಂಬಿ ಆಪ್ತವಾಗಿದ್ದರು ಎನ್ನುವುದು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
ಮಂಡ್ಯ ಕ್ಷೇತ್ರದಲ್ಲಿ ಕಾರ್ಯಕರ್ತರು ನಿಖಿಲ್ ಅವರನ್ನು ಅಭ್ಯರ್ಥಿಯನ್ನಾಗಿಸಲು ಇಚ್ಛಿಸುತ್ತಿದ್ದಾರೆ. ಅಭ್ಯರ್ಥಿ ಯಾರೆಂಬುದನ್ನು ಶೀಘ್ರವೇ ನಿರ್ಧರಿಸ್ತೇವೆ ಎಂದು ಹೇಳುವ ಮೂಲಕ ಪುತ್ರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಅಂಬಿ ಅಂತ್ಯ ಸಂಸ್ಕಾರ ವೇಳೆ ಕುಮಾರಸ್ವಾಮಿ ಓಡಾಡಿದ ರೀತಿ ನೋಡಿದ್ರೆ ಅಭೀಷೇಕ್ ಅಂಬರೀಷ್ ರಾಜಕೀಯಕ್ಕೆ ಬಂದ್ರೆ ಜೆಡಿಎಸ್ ಟಿಕೆಟ್ ನೀಡುವುದು ಪಕ್ಕಾ ಎಂದು ಹೇಳಲಾಗಿತ್ತು.
ಆದ್ರೆ ಈಗ ಕುಮಾರಸ್ವಾಮಿ ನೀಡಿರುವ ಹೇಳಿಕೆ ಅಂಬಿ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ..