ಇದು ಅಭಿವೃದ್ಧಿ, ಒಡೆದಾಳುವ ನೀತಿಯ ನಡುವಿನ ಚುನಾವಣೆ, ಬಹಿರಂಗ ಪ್ರಚಾರದ ಕೊನೆ ದಿನ ತವರು ಕ್ಷೇತ್ರದಲ್ಲಿ ಸಿಎಂ ಭರ್ಜರಿ ಪ್ರಚಾರ, ಶಿಗ್ಗಾಂವಿ- ಸವಣೂರು ಕ್ಷೇತ್ರದಲ್ಲಿ ರೋಡ್‌ ಶೋ, ಬಹಿರಂಗ ಪ್ರಚಾರ. ನಾನು ಮತ್ತೆ ಸಿಎಂ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ: ಎಚ್‌ಡಿಕೆ, ರಾಷ್ಟ್ರಕ್ಕೆ ಒಳ್ಳೆಯ ಸಂದೇಶ ನೀಡಿ: ಡಿಕೆಶಿ. 

ಶಿಗ್ಗಾಂವಿ/ಸವಣೂರು(ಮೇ.09):  ಈ ಬಾರಿಯ ಚುನಾವಣೆ ಬಿಜೆಪಿಯ ಅಭಿವೃದ್ಧಿ ಹಾಗೂ ಕಾಂಗ್ರೆಸ್ಸಿನ ಒಡೆದಾಳುವ ನೀತಿಯ ನಡುವೆ ನಡೆದಿದೆ. ಈ ಬಾರಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಬಹಿರಂಗ ಪ್ರಚಾರದ ಕೊನೆದ ದಿನವಾದ ಸೋಮವಾರ ಸ್ವಕ್ಷೇತ್ರ ಶಿಗ್ಗಾಂವಿಯ ವನಹಳ್ಳಿ, ಹನುಮನಹಳ್ಳಿ, ಹಿರೇಮಲ್ಲೂರು, ಸವಣೂರು ತಾಲೂಕಿನ ಮಂತ್ರೋಡಿ, ಸವಣೂರು ಪಟ್ಟಣಗಳಲ್ಲಿ ಭರ್ಜರಿ ಪ್ರಚಾರ ನಡೆಸಿ ಮಾತನಾಡಿದರು.
ಡಬಲ್‌ ಎಂಜಿನ್‌ ಸರ್ಕಾರದ ಸಾಧನೆ ಇಟ್ಟುಕೊಂಡು ನಾವು ಮತ ಕೇಳುತ್ತಿದ್ದೇವೆ. ಹಿಂದಿನ ಸಮ್ಮಿಶ್ರದಿಂದ ಬೇಸತ್ತು ಅನೇಕ ಶಾಸಕರು ನಮ್ಮ ಜತೆ ಬಂದರು. ಇದರಿಂದ ಬಿಜೆಪಿ ಸರ್ಕಾರ ಬಂದು ನಾಲ್ಕು ವರ್ಷದ ಆಡಳಿತದಲ್ಲಿ ಕ್ಷೇತ್ರ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕೋವಿಡ್‌ ವೇಳೆ ಪ್ರಧಾನಿ ನರೇಂದ್ರ ಮೋದಿ ಉಚಿತ ಲಸಿಕೆ ನೀಡಿದ್ದರಿಂದ ಎಲ್ಲರೂ ಆರೋಗ್ಯ ಸುರಕ್ಷಾ ಚಕ್ರದಲ್ಲಿ ಇರುವಂತಾಯಿತು. ಬೆಳೆ ಹಾನಿಗೆ ಡಬಲ್‌ ಪರಿಹಾರ ಕೊಟ್ಟಿದ್ದೇವೆ. ರೈತರ ಸಂಕಷ್ಟನನಗೆ ಗೊತ್ತಿದೆ. ಅದಕ್ಕಾಗಿ ಸಿಎಂ ಆಗಿ ನಾಲ್ಕು ಗಂಟೆಯೊಳಗಾಗಿ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದೇನೆ. ಸ್ತ್ರೀಶಕ್ತಿ ಸಾಮರ್ಥ್ಯ ಯೋಜನೆ ಜಾರಿಗೊಳಿಸಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಬಹಿರಂಗ ಪ್ರಚಾರಕ್ಕೆ ತೆರೆ, ಇಂದು ಮನೆ ಮನೆ ಭೇಟಿ

ಮತದ ಶಕ್ತಿ ದೊಡ್ಡದು:

2018ರಲ್ಲಿ ನೀವು ಕೊಟ್ಟಿರುವ ಮತದ ಶಕ್ತಿ ಬಹಳ ದೊಡ್ಡದಿದೆ. ನಾನು ಶಾಸಕ, ಮಂತ್ರಿ, ಸಿಎಂ ಕೂಡ ಆಗಿದ್ದೇನೆ. ಯಶಸ್ವಿಯಾಗಿ ಕೋವಿಡ್‌ ನಿರ್ವಹಣೆ ಮಾಡಿದ್ದೇವೆ. ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡವರಿಗೆ . 5 ಲಕ್ಷ ಪರಿಹಾರ ನೀಡಿದ್ದೇವೆ. ಈ ಬಾರಿ ಎಲ್ಲ ತರಹದ ಮನೆ ನಿರ್ಮಾಣಕ್ಕೂ . 5 ಲಕ್ಷ ಅನುದಾನ ನೀಡಲಾಗುವುದು. ಆದರೆ, ಕಾಂಗ್ರೆಸ್‌ ಸರ್ಕಾರವಿದ್ದಾಗ ಪ್ರವಾಹದಲ್ಲಿ ಮನೆ ಬಿದ್ದಾಗ . 25 ಸಾವಿರ ಕೊಡುತ್ತಿದ್ದರು ಎಂದು ಟೀಕಿಸಿದರು.
ಈ ಕ್ಷೇತ್ರದಲ್ಲಿ ಸುಮಾರು 300 ಶಾಲಾ ಕೊಠಡಿ, ಐಟಿಐ ನಿರ್ಮಾಣ ಮಾಡಿದ್ದೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ. ಈ ಬಾರಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಿ ಎಂದು ಅವರು ಮನವಿ ಮಾಡಿದರು.

ಕಾಂಗ್ರೆಸ್ಸಿನ ಸುಳ್ಳು ಸುದ್ದಿ

ಕಾಂಗ್ರೆಸ್ಸಿಗರು ಸುಳ್ಳು ಸುದ್ದಿ ಹೇಳುವುದರಲ್ಲಿ ನಿಸ್ಸೀಮರು. ನಾನು 2018ರಲ್ಲಿ ಬೆಳೆವಿಮೆಗಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಕಣ್ಣಿಗೆ ಏಟು ತಗುಲಿತ್ತು. ಅದನ್ನು ಈಗ ನಡೆದಿರುವುದು ಎಂಬಂತೆ ಬಿಂಬಿಸಲು ಕಾಂಗ್ರೆಸ್‌ ಹೊರಟಿದೆ. ಅದೇ ರೀತಿ ಬಿ.ಎಲ್‌. ಸಂತೋಷ ಅವರು ಲಿಂಗಾಯತರ ಬಗ್ಗೆ ಹೇಳಿದ್ದಾರೆಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ ಮೇಲಿರುವಷ್ಟುಭ್ರಷ್ಟಾಚಾರದ ಆರೋಪ ಯಾರ ಮೇಲೆಯೂ ಇಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ನಾನು ಸಿಎಂ ಆಗುವ ಅವಕಾಶವಿದೆ: ಸಿದ್ದು

ಮೈಸೂರು: ‘ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ನಾನು ಮುಖ್ಯಮಂತ್ರಿಯಾಗುವ ಅವಕಾಶವಿದೆ. ರಾಜ್ಯದಲ್ಲಿ ನಿಷ್ಕಿ್ರಯವಾಗಿರುವ ಬಿಜೆಪಿ ಸರ್ಕಾರವನ್ನು ತೆಗೆಯಲು ಎಂ.ಕೆ.ಸೋಮಶೇಖರ್‌ ಅವರನ್ನು ಗೆಲ್ಲಿಸಿ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜನರಿಗೆ ಮನವಿ ಮಾಡಿದರು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿದ್ಯಾರಣ್ಯಪುರಂನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸಿದ್ದು, ಈ ಕ್ಷೇತ್ರದಲ್ಲಿ ಎಂ.ಕೆ.ಸೋಮಶೇಖರ್‌ ಗೆದ್ದರೆ ನಾನು ಗೆದ್ದಂತೆ. ಸೋಮಶೇಖರ್‌ ಸೋತಾಗ ಕೊರೋನಾ ಸಮಯದಲ್ಲಿಯೂ ಮನೆಯಲ್ಲಿ ಕೂರದೇ ಜನರ ಕಷ್ಟಸುಖದಲ್ಲಿ ಭಾಗಿಯಾಗಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿಗೆ ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿದ್ದೇನೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌, ಅಡಿಗೆ ಎಣ್ಣೆ, ದಿನಬಳಕೆ ವಸ್ತಗಳ ಬೆಲೆಗಳನ್ನು ಏರಿಸಿದೆ. ಮಜ್ಜಿಗೆ, ಮೊಸರು ಹಾಲಿನ ಮೇಲೂ ಜಿಎಸ್‌ಟಿ ಹಾಕಿದ್ದು, ಬಡವರು ಬದುಕುವುದೇ ಕಷ್ಟಕರವಾಗಿದೆ. ಹೀಗಾಗಿ, ಈ ಬಾರಿ ಕಾಂಗ್ರೆಸ್‌ನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ರಾಷ್ಟ್ರಕ್ಕೆ ಒಳ್ಳೆಯ ಸಂದೇಶ ನೀಡಿ: ಡಿಕೆಶಿ

ರಾಮ​ನ​ಗರ: ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ನಾಯಕ ಅಲ್ಲ, ಜನರ ಸೇವಕ. ಆತ​ನ​ಲ್ಲಿ​ರುವ ಸಮಾಜ ಸೇವೆಯ ತುಡಿತ ಹಾಗೂ ಕ್ಷೇತ್ರದ ಅಭಿ​ವೃದ್ಧಿಯ ಪರಿ​ಕ​ಲ್ಪನೆ ನೋಡಿ ಗೆಲ್ಲಿಸಿ ನನಗೆ ಶಕ್ತಿ ತುಂಬು​ವಂತೆ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಮತ​ದಾ​ರ​ರಲ್ಲಿ ಮನವಿ ಮಾಡಿ​ದರು.

ನಗ​ರದ ಕೆಂಗಲ್‌ ಹನು​ಮಂತಯ್ಯ ವೃತ್ತ​ದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಪರ​ವಾಗಿ ನಡೆದ ಚುನಾ​ವಣಾ ಪ್ರಚಾ​ರ​ ಸಭೆ​ಯಲ್ಲಿ ಮಾತ​ನಾ​ಡಿದ ಅವರು,ಕೋವಿಡ್‌, ನೆರೆ ಹಾವ​ಳಿ​ಯಂತಹ ಸಂಕಷ್ಟಕಾಲ​ದಲ್ಲಿ ಜನರ ಕಷ್ಟಸುಖ ಕೇಳ​ಲಿಲ್ಲ. ಆ ಕೆಲ​ಸ​ವನ್ನು ಇಕ್ಬಾಲ್‌ ಹುಸೇನ್‌ ಮಾಡಿ​ದರು. ಇಲ್ಲಿ ಡಿ.ಕೆ.​ಶಿ​ವ​ಕು​ಮಾರ್‌ ಅಭ್ಯ​ರ್ಥಿ​ಯೆಂದು ಭಾವಿಸಿ ಬೆಂಬಲ ನೀಡ​ಬೇಕು. ಕೋವಿಡ್‌ ಕಾಲ​ದಲ್ಲಿ ಬಿಜೆ​ಪಿ​ಯ​ವರು ಮೃತರ ಅಂತ್ಯ ಸಂಸ್ಕಾರ ಮಾಡಿ​ಸ​ಲಿಲ್ಲ. ಜೆಡಿ​ಎಸ್‌ ನಾಯಕ ಕುಮಾ​ರ​ಸ್ವಾಮಿ ನೆರ​ವಿಗೆ ಬರ​ಲಿಲ್ಲ. ಆದರೆ, ಸಂಸದ ಡಿ.ಕೆ.ಸುರೇಶ್‌ ಹಾಗೂ ಇಕ್ಬಾಲ… ಹುಸೇನ್‌ ನಿಮ್ಮ ಮನೆ ಬಾಗಿಲಿಗೆ ಆಹಾರ ಕಿಚ್‌, ಔಷಧಿ, ದಿನಸಿ, ತರಕಾರಿ ಕೊಟ್ಟು ಸೇವೆ ಮಾಡಿ​ದರು. ಅವ​ರಿ​ಬ್ಬರು ಪಿಪಿಇ ಕಿಟ್‌ ಧರಿಸಿ ಸೋಂಕಿ​ತ​ರನ್ನು ಭೇಟಿ​ಯಾಗಿ ಧೈರ್ಯ ತುಂಬಿ​ದ್ದ​ಲ್ಲದೆ, ಮೃತರ ಅಂತ್ಯ ಸಂಸ್ಕಾ​ರ ನೆರ​ವೇ​ರಿ​ಸಿ​ದರು. ಈ ವಿಚಾ​ರ​ವಾಗಿ ಕುಮಾ​ರ​ಸ್ವಾಮಿ ಉತ್ತ​ರಿ​ಸಲು ಸಾಧ್ಯವೇ ಎಂದು ಪ್ರಶ್ನಿ​ಸಿ​ದ​ರು.

ರಾಮ​ನ​ಗರ ಟೌನ್‌ನಲ್ಲಿ ಪ್ರವಾಹ ಬಂದಾಗ ಶಾಸ​ಕರು ಮುಖ್ಯ​ಮಂತ್ರಿ​ಗಳ ಜೊತೆ ಫೋಟೋ ತೆಗೆ​ಸಿ​ಕೊಂಡು ಹೋದರು. ನಿಮಗೆ ಪರಿ​ಹಾರ ಒದ​ಗಿ​ಸಲು ಯಾರೂ ಪ್ರಯತ್ನ ಮಾಡ​ಲಿಲ್ಲ. ಇಕ್ಬಾಲ್‌ ಹುಸೇನ್‌ ನಿಮ್ಮ ಮನೆ​ಯ​ಲ್ಲಿದ್ದ ಕಸ ತೆಗೆ​ದರು. ನಾನು ನಿಮಗೆ ಪರಿ​ಹಾರ ಕೊಡಿ​ಸಲು ಹೋರಾಟ ನಡೆ​ಸಿದೆ. ಈ ಕೆಲ​ಸ​ವನ್ನು ನಿಮ್ಮಿಂದ ಆಯ್ಕೆ​ಯಾ​ದ​ವರು ಏಕೆ ಮಾಡ​ಲಿಲ್ಲ. ಕ್ಷೇತ್ರದ ಎಲ್ಲಾ ಕಾರ್ಯಕರ್ತರು ಇಲ್ಲಿ ನನಗೆ ಸ್ಪರ್ಧಿಸುವಂತೆ ಒ​ತ್ತಡ ಹೇರಿ​ದರು. ನಂತರ ಹೈಕಮಾಂಡ್‌ ಕೂಡ ನಿಖಿಲ… ವಿರುದ್ಧ ಸುರೇಶ್‌ ಅವರನ್ನು ಸ್ಪರ್ಧಿಸುವಂತೆ ಸೂಚನೆ ನೀಡಿ​ದರು. ಆದರೆ ನಾವು ಕೋವಿಡ್‌ ಸಮಯವನ್ನು ಲೆಕ್ಕಿಸದೇ ನಿಮಗಾಗಿ ಹಗಲುರಾತ್ರಿ ಸೇವಕನಾಗಿ ಕೆಲಸ ಮಾಡಿರುವ ಇಕ್ಬಾಲ… ಹುಸೇನ್‌ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ದಿನಬೆಳಗಾದರೆ ಇಕ್ಬಾಲ್‌ ನಿಮಗೆ ಸಿಗುತ್ತಾರೆ, ನಿಮ್ಮ ಸೇವೆ ಮಾಡುತ್ತಾರೆ. ​ಅ​ವರು ನೆಪಕ್ಕೆ ಮಾತ್ರ ಅಭ್ಯರ್ಥಿಯಾಗಿ​ದ್ದಾ​ರೆ. ಇಲ್ಲಿ ಜಾತಿ ಧರ್ಮಕ್ಕಿಂತ ಕಾರ್ಯಕರ್ತ ಹಾಗೂ ಆತನ ಸೇವೆ ಮುಖ್ಯವೆಂದು ಭಾವಿಸಿ ಅವ​ರಿಗೆ ಬೆಂಬಲ ನೀಡು​ವಂತೆ ಶಿವ​ಕು​ಮಾರ್‌ ಕೋರಿ​ದರು.

ಕಾಂಗ್ರೆಸ್‌ ಕ್ಷೇತ್ರದ ಜನರ ಬದು​ಕಿನ ಬಗ್ಗೆ ಆಲೋ​ಚನೆ ಮಾಡು​ತ್ತಿದೆ. ಇಲ್ಲಿ​ರುವ ಕೆರೆ​ಗ​ಳನ್ನು ತುಂಬಿಸುವು​ದರ ಜೊತೆಗೆ ಜನರನ್ನು ಆರ್ಥಿ​ಕ​ವಾಗಿ ಸದೃಢ​ರ​ನ್ನಾಗಿ ಮಾಡುವ ಕೆಲಸ ಮಾಡು​ತ್ತೇವೆ. ನೀವೆ​ಲ್ಲರು ಸೇರಿ ಬದ​ಲಾ​ವಣೆ ತರ​ಬೇಕು. ಅಭಿ​ವೃದ್ಧಿ ನಿರ್ಲಕ್ಷ್ಯ ಮಾಡಿ​ದ​ವ​ರನ್ನು ತಿರ​ಸ್ಕರಿಸಬೇಕು. ಭಗವಂತ ನಿಮಗೆ ವರ ಅಥವಾ ಶಾಪ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಮೇ 10 ನಿಮ್ಮ ಭವಿಷ್ಯ ಬದಲಾಯಿಸಿಕೊಳ್ಳುವ, ರಾಷ್ಟ್ರಕ್ಕೆ ಒಳ್ಳೆಯ ಸಂದೇಶ ನೀಡುವ, ಭ್ರಷ್ಟಾ

ಚಾರ ತೊಲ​ಗಿ​ಸುವ ಹಾಗೂ ಜನರ ಬದು​ಕಿಗೆ ಜ್ಯೋತಿ ಬೆಳ​ಗುವ ದಿನವಾಗಿದೆ. ಅಂದು ಕಾಂಗ್ರೆಸ್‌ ಬೆಂಬ​ಲಿ​ಸು​ವಂತೆ ಕರೆ ನೀಡಿ​ದ​ರು.
ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌, ಸಂಸದ ಡಿ.ಕೆ.​ಸು​ರೇಶ್‌, ವಿಧಾನ ಪರಿ​ಷತ್‌ ಸದಸ್ಯ ಸಿ.ಎಂ.​ಲಿಂಗಪ್ಪ, ಎಂಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಕೆಪಿ​ಸಿಸಿ ಪ್ರಧಾನ ಕಾರ್ಯ​ದರ್ಶಿ ಸೈಯದ್‌ ಜಿಯಾ​ವುಲ್ಲಾ, ಕೆಎಂಎಫ್‌ ಮಾಜಿ ಅಧ್ಯಕ್ಷ ಪಿ.ನಾ​ಗ​ರಾಜು, ಜಿಪಂ ಮಾಜಿ ಅಧ್ಯಕ್ಷ ಕೆ.ರ​ಮೇಶ್‌, ಕಾಂಗ್ರೆಸ್‌ ನ ಚು​ನಾ​ವಣಾ ಉಸ್ತು​ವಾರಿ ಡಿ.ಎಂ.​ವಿ​ಶ್ವ​ನಾಥ್‌,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚೇತನ್‌ ಕುಮಾರ್‌ ಮತ್ತಿ​ತ​ರರು ಹಾಜ​ರಿ​ದ್ದ​ರು.

ಕುಮಾ​ರ​ಸ್ವಾಮಿ, ನಿಖಿಲ್‌ ರೆಸ್ಟ್‌ ಮಾಡಲಿ

ರಾಮ​ನ​ಗ​ರ: ಜೆಡಿ​ಎಸ್‌ ನಾಯಕ ಕುಮಾ​ರ​ಸ್ವಾಮಿಗೆ ಎರಡು ಬಾರಿ ಮುಖ್ಯ​ಮಂತ್ರಿ​ಯಾಗಿದ್ದಾರೆ. ನಿಖಿಲ್‌ ಕುಮಾ​ರ​ಸ್ವಾಮಿ ಇನ್ನೂ ಯುವಕ. ಅವ​ರಿ​ಬ್ಬರು ರೆಸ್ಟ್‌ ಮಾಡಲು ಅವ​ಕಾಶ ಕೊಡಿ. ಈ ಜಿಲ್ಲೆಯ ರೈತನ ಮಗನಾದ ನನಗೆ ನಾಡಿನ ಜನರ ಸೇವೆ ಅವ​ಕಾಶ ಮಾಡಿ​ಕೊಡಿ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಕೇಳಿ​ದರು.

ನಗ​ರದ ಕೆಂಗಲ್‌ ಹನು​ಮಂತಯ್ಯ ವೃತ್ತ​ದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಪರ​ ನಡೆದ ಚುನಾ​ವಣಾ ಪ್ರಚಾ​ರ​ ಸಭೆ​ಯಲ್ಲಿ ಮಾತ​ನಾ​ಡಿದ ಅವರು, ರಾಮ​ನ​ಗರ ನಾಯಕರನ್ನು ತಯಾರು ಮಾಡಿರುವ ಜಿಲ್ಲೆ. ನಿಮ್ಮ ಮೇಲೆ ನನಗೆ ನಂಬಿಕೆ ಇದೆ. ನೀವು ಸಂಕಲ್ಪ ಮಾಡಿ ಬದಲಾವಣೆ ತರ​ಬೇಕು. ನಮ್ಮ ಜಿಲ್ಲೆಯಿಂದ ಹನುಮಂತಯ್ಯರವರ ನಂತರ ರಾಮಕೃಷ್ಣ ಹೆಗಡೆ ಗೆದ್ದು ಮುಖ್ಯಮಂತ್ರಿ ಆಗಿದ್ದಾರೆ. ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದಿರಿ. ನಂತರ ಕಾಂಗ್ರೆಸ್‌ ಬೆಂಬಲ ನೀಡಿ ಅವ​ರನ್ನು ಪ್ರಧಾನಮಂತ್ರಿ ಮಾಡಿತು. ಕುಮಾರಸ್ವಾಮಿ ಅವರು ಒಮ್ಮೆ ಬಿಜೆಪಿ ಜತೆ ಸೇರಿ ಮತ್ತೊಮ್ಮೆ ಕಾಂಗ್ರೆಸ್‌ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದಾರೆ.

ಈ ಜಿಲ್ಲೆಯಲ್ಲಿ ದೇವೇಗೌಡ, ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಬೆಳೆಸಿದ್ದೀರಿ. ನಾನು ನಿಮ್ಮ ಮನೆ ಮಗ. ನನ್ನನ್ನು ಈ ಜಿಲ್ಲೆಯ ಉದ್ದಗಲದಲ್ಲಿ ಬೆಳೆಸಿದ್ದೀರಿ. ನನ್ನ ತಮ್ಮನನ್ನು ಲೋಕಸಭೆಗೆ ಕಳಿಸಿಕೊಟ್ಟಿದ್ದೀರಿ. ಈಗ ರಾಜ್ಯದ ಜನರ ಸೇವೆ ಮಾಡಲು ನನಗೂ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿ​ದರು.

ಜೆಡಿಎಸ್‌ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಆ ಪಕ್ಷ​ದ​ಲ್ಲಿದ್ದ ಶಿವಲಿಂಗೇಗೌಡ, ವಾಸು, ಶ್ರೀನಿವಾಸ ಗೌಡ, ಮಧು ಬಂಗಾರಪ್ಪ ಸೇರಿದಂತೆ ಎಲ್ಲರೂ ಕಾಂಗ್ರೆಸ್‌ ಸೇರಿದ್ದಾರೆ. ಬಿಜೆಪಿ ಕೂಡ ಅಧಿಕಾರಕ್ಕೆ ಬರುವುದಿಲ್ಲ. ಜಗದೀಶ್‌ ಶೆಟ್ಟರ್‌, ಸವದಿ, ಪುಟ್ಟಣ್ಣ ಅವರು ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ. ನನ್ನ ವಿರುದ್ಧ ಸ್ಪರ್ಧಿಸಿದ್ದ ಪಿಜಿಆರ್‌ ಸಿಂಧ್ಯಾ, ಮಂಜುನಾಥ್‌, ನಾರಾಯಣಗೌಡರು ಜೆಡಿಎಸ್‌ ತೊರೆದು ಶಿವಕುಮಾರ್‌ ಅವರನ್ನು ವಿಧಾನಸೌಧದಲ್ಲಿ ಕೂರಿಸಲು ಕಾಂಗ್ರೆಸ್‌ ಸೇರಿದ್ದಾರೆ. ಆದ್ದ​ರಿಂದ ಎಲ್ಲರು ಒಗ್ಗೂಡಿ ಕಾಂಗ್ರೆಸ್‌ ಪಕ್ಷ​ವನ್ನು ಅಧಿ​ಕಾ​ರಕ್ಕೆ ತರಲು ಶ್ರಮಿ​ಸು​ವಂತೆ ಶಿವ​ಕು​ಮಾರ್‌ ಕರೆ ನೀಡಿ​ದರು.

ಬೈಕ್‌ ರಾರ‍ಯಲಿಯಲ್ಲಿ ಬಂದ ಡಿಕೆಶಿ

ರಾಮ​ನ​ಗ​ರ: ರಾಮ​ನ​ಗರ ಕ್ಷೇತ್ರಕ್ಕೆ ಆಗ​ಮಿ​ಸಿದ ಡಿ.ಕೆ.​ಶಿ​ವ​ಕು​ಮಾರ್‌ ಅವ​ರನ್ನು ಅದ್ಧೂ​ರಿ​ಯಾಗಿ ಬರ​ಮಾ​ಡಿ​ಕೊಂಡ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯ​ಕ​ರ್ತರು ಬೃಹತ್‌ ಬೈಕ್‌ ರಾರ‍ಯಲಿ ನಡೆ​ಸಿ​ದರು. ತಾಲೂ​ಕಿನ ಮಾಯ​ಗಾ​ನ​ಹಳ್ಳಿ ಬಳಿ ಬೃಹತ್‌ ಗಾತ್ರದ ಸೇಬಿನ ಹಾರ ಹಾಕಿದ್ದಲ್ಲದೆ ಹೂವಿನ ಮಳೆ ಸುರಿಸಿ ಶಿವ​ಕು​ಮಾರ್‌ ಅವ​ರಿಗೆ ಸ್ವಾಗತ ಕೋರ​ಲಾ​ಯಿತು. ಅಲ್ಲಿಂದ ಆರಂಭ​ಗೊಂಡ ಬೈಕ್‌ ರಾರ‍ಯಲಿ ಬಸ​ವ​ನ​ಪುರ ಬಳಿ ಆಗ​ಮಿ​ಸು​ತ್ತಿ​ದ್ದಂತೆ ಅಲ್ಲಿಯು ಸಹ​ಸ್ರಾರು ಬೈಕ್‌ಗಳು ರಾರ‍ಯಲಿ​ಯಲ್ಲಿ ಸೇರಿ​ಕೊಂಡವು. ಬೆಂಗ​ಳೂರು - ಮೈಸೂರು ಹೆದ್ದಾ​ರಿ​ಯಲ್ಲಿ ರಾರ‍ಯಲಿ​ಯೊಂದಿಗೆ ಸಾಗಿ​ ಬಂದ ಶಿವ​ಕು​ಮಾರ್‌ ಅವ​ರಿಗೆ ಆಂಜ​ನೇಯ ಆಚ್‌ರ್‍ ಹಾಗೂ ಐಜೂರು ವೃತ್ತ​ದಲ್ಲಿ ಬೃಹತ್‌ ಹೂವಿನ ಹಾರ ಹಾಕಿ ಸ್ವಾಗ​ತಿ​ಸ​ಲಾ​ಯಿತು.

ರಾಹುಲ್‌, ಪ್ರಿಯಾಂಕಾ 41 ರ‍್ಯಾಲಿ, 12 ರೋಡ್‌ ಶೋ

ಗುಜರಾತ್‌ ರಾಜ್ಯಸಭಾ ಚಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕರಿಗೆ ರಕ್ಷಣೆ ನೀಡಿ​ದ್ದಕ್ಕೆ ಬಿಜೆಪಿ ನನ್ನ ಮೇಲೆ ಸುಳ್ಳು ಕೇಸು ಹಾಕಿ ದಾಳಿ ಮಾಡಿಸಿದರು. ಈ ಸಮಯದಲ್ಲಿ ನೀವೆಲ್ಲರೂ ದೇವಾಲಯ, ಚಚ್‌ರ್‍ ಮಸೀದಿಯಲ್ಲಿ ಪ್ರಾರ್ಥಿಸಿ ನನ್ನನ್ನು ಹೊರಗೆ ಕರೆದುಕೊಂಡು ಬಂದಿದ್ದೀರಾ. ಹೀಗಾಗಿ ನಿಮಗೆ ಕೋಟಿ ಕೋಟಿ ನಮನಗಳು ಅಂತ ಕೆಪಿ​ಸಿಸಿ ಅಧ್ಯ​ಕ್ಷ ಡಿ.ಕೆ.​ಶಿ​ವ​ಕು​ಮಾರ್‌ ತಿಳಿಸಿದ್ದಾರೆ. 

ನಾನು ಮತ್ತೆ ಸಿಎಂ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ: ಎಚ್‌ಡಿಕೆ

ಚನ್ನಪಟ್ಟಣ: ‘ನಾನು ಮತ್ತೆ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಈ ಬಾರಿ ನಾನು ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಲಿದ್ದು, 5 ವರ್ಷ ಆಡಳಿತ ನಡೆಸಲಿದ್ದೇನೆ. ನಾನು ಸಿಎಂ ಆದರೂ ಕೇತಗಾನಹಳ್ಳಿಯ ಮನೆಯಲ್ಲೇ ವಾಸವಿರುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದರು.

ನಗರದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ ಮಾತನಾಡಿ, ಇಂದು ಚನ್ನಪಟ್ಟಣದಲ್ಲಿ ನನ್ನ ಮೇಲೆ ಪ್ರೀತಿ ಇಟ್ಟು ಸೇರಿರುವ ಜನರನ್ನು ನೋಡಿದರೆ ಆನಂದಬಾಷ್ಪ ಬರುತ್ತಿದೆ. ಆದರೆ, ನಾನು ಕಣ್ಣೀರು ಹಾಕಿದರೆ ನನ್ನ ವಿರೋಧಿಗಳು ಅದಕ್ಕೆ ಬೇರೆ ಬಣ್ಣ ಕಟ್ಟಿಅಪಪ್ರಚಾರ ಮಾಡುತ್ತಾರೆ. ಆದ್ದರಿಂದ ನನ್ನ ಭಾವನೆಗಳನ್ನು ಬಲವಂತವಾಗಿ ತಡೆದಿಟ್ಟಕೊಂಡಿದ್ದೇನೆ. ನಿಮ್ಮ ಮೇಲೆ ವಿಶ್ವಾಸವಿರುವುದರಿಂದಲೇ ಇಡೀ ರಾಜ್ಯ ಸುತ್ತಿ ಕಡೆಯದಾಗಿ ಇಲ್ಲಿಗೆ ಬಂದಿದ್ದೇನೆ. ಹಾಸನ ಜಿಲ್ಲೆಯಲ್ಲಿ ಜನ್ಮ ತಾಳಿದ್ದರೂ ಈ ಜಿಲ್ಲೆಯಲ್ಲೇ ನನ್ನ ಬದುಕು ಕಟ್ಟಿಕೊಂಡಿದ್ದೇನೆ. ನನಗೆ ರಾಜಕೀಯ ಜನ್ಮ ನೀಡಿದ ಭೂಮಿ ಇದು. ರಾಮನಗರ-ಚನ್ನಪಟ್ಟಣ ನನ್ನ ಎರಡು ಕಣ್ಣುಗಳಿದ್ದಂತೆ. ನಿಮ್ಮ ಮನೆಯ ಮಗನನ್ನು ಈ ಬಾರಿಯ ಚುನಾವಣೆಯಲ್ಲಿ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಉತ್ತಮ ಆಡಳಿತ ನೀಡುತ್ತಿದ್ದ ದೇವೇಗೌಡರನ್ನು ಕಾಂಗ್ರೆಸ್‌ನವರು ಪ್ರಧಾನಿ ಹುದ್ದೆಯಿಂದ ಇಳಿಸಿದರು. ಅದೇ ರೀತಿ ಬಿಜೆಪಿಯವರು ಕುತಂತ್ರ ನಡೆಸಿ ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಈ ಹಿಂದೆ 14 ತಿಂಗಳು ಮುಖ್ಯಮಂತ್ರಿಯಾಗಿದ್ದೆ. ಇಲ್ಲಿನ ನನ್ನ ಎದುರಾಳಿ ಅಭ್ಯರ್ಥಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯವರೊಂದಿಗೆ ಸೇರಿಕೊಂಡು ನನ್ನ ಸರ್ಕಾರ ತೆಗೆಯಲು ಸಾಕಷ್ಟುಶ್ರಮಿಸಿದರು. ಹಲವಾರು ಕುಟುಂಬಗಳನ್ನು, ಯುವಕರ ಬದುಕನ್ನು ಹಾಳು ಮಾಡಿದ ಪಾಪದ ಹಣದಿಂದ ರೈತಪರ ಆಡಳಿತ ನೀಡುತ್ತಿದ್ದ ಸರ್ಕಾರವನ್ನು ತೆಗೆದರು. ಅಂತವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನೆಂದು ಪಾಪದ ಹಣ ಸಂಪಾದಿಸಲಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.