ರಾಜ್ಯ ರಾಜಕೀಯ ಮತ್ತೊಂದು ಹೊಸ ವಿಚಾರ ಹೇಳಿದ ಸಾಹುಕಾರ್
ರಾಜ್ಯ ರಾಜಕೀಯದ ಮತ್ತೊಂದು ಹೊಸ ವಿಚಾರವನ್ನ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಹಾಗಾದ್ರೆ ಸಾಹುಕಾರ್ ಹೇಳಿದ ರಾಜಕೀಯ ಸೀಕ್ರೆಟ್ ಏನು..?
ಬೆಳಗಾವಿ (ಜ.27): ಮುಂಬರುವ ಮಾರ್ಚ್ ತಿಂಗಳ ಬಳಿಕ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಸೋಮವಾರ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಪಂ, ಜಿಪಂ ಚುನಾವಣೆ ಬಳಿಕ ಸಂಪುಟ ಪುನಾರಚನೆ ವೇಳೆ ಬೆಳಗಾವಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಸಿಗಬಹುದು. ಶಾಸಕ ಅಭಯ ಪಾಟೀಲ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಜಿಲ್ಲೆಯಲ್ಲಿರುವ ಎಲ್ಲರೂ ನನ್ನ ಸ್ನೇಹಿತರು. ಯಾರಿಗೇ ಆಗಲಿ ಸಚಿವ ಸ್ಥಾನ ಸಿಕ್ಕರೆ ನಾನು ಖುಷಿಪಡುತ್ತೇನೆ ಎಂದು ಹೇಳಿದರು.
ರೆಸಾರ್ಟ್ ಸೀಕ್ರೆಟ್ ಮೀಟಿಂಗ್ ಬಗ್ಗೆ ಕಾರಣ ಬಿಚ್ಚಿಟ್ಟ ಸಚಿವ ರಮೇಶ್ ಜಾರಕಿಹೊಳಿ .
ಚಿಕ್ಕಮಗಳೂರು ರೆಸಾರ್ಟ್ ವಾಸ್ತವ್ಯದ ಕುರಿತು ಪ್ರತಿಕ್ರಿಯಿಸಿದ ಅವರು, ಚಿಕ್ಕಮಗಳೂರು ಪ್ರವಾಸ ಒಂದು ವಾರದ ಮೊದಲೇ ನಿಗದಿಯಾಗಿತ್ತು. ನನ್ನ ಪ್ರವಾಸದ ಮಾಹಿತಿಯನ್ನು ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಮೊದಲೇ ಕಳುಹಿಸಲಾಗಿತ್ತು. ಆಗ ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಬಗ್ಗೆ ಮಾಹಿತಿಯೇ ನನಗಿರಲಿಲ್ಲ. ಆದರೆ, ನಮಗೆ ಡ್ಯಾಮೇಜ್ ಆಗುವ ರೀತಿಯಲ್ಲಿ ವರದಿ ಬಂದವು. ಆದರೆ, ಸಂಪುಟ ವಿಸ್ತರಣೆ ವಿಚಾರದಲ್ಲಿ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.