‘ಚುನಾವಣಾ ಪ್ರಣಾಳಿಕೆಯ ಭರವಸೆಯಂತೆ ಸರ್ಕಾರದ ಅವಧಿಯಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳು ಸೇರಿ ರಾಜ್ಯದಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳ ಭರ್ತಿ ಮಾಡಲಿದ್ದೇವೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಭರವಸೆ ನೀಡಿದರು. 

ಬೆಂಗಳೂರು (ಮಾ.06): ‘ಚುನಾವಣಾ ಪ್ರಣಾಳಿಕೆಯ ಭರವಸೆಯಂತೆ ಸರ್ಕಾರದ ಅವಧಿಯಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳು ಸೇರಿ ರಾಜ್ಯದಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳ ಭರ್ತಿ ಮಾಡಲಿದ್ದೇವೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಭರವಸೆ ನೀಡಿದರು. ನಗರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯಿಂದ ನಡೆದ ‘5ನೇ ರಾಜ್ಯ ಮಟ್ಟದ ಜಾಗೃತ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು. ‘ಖಾಲಿ ಹುದ್ದೆ ಭರ್ತಿಗೆ ಸರ್ಕಾರ ಬದ್ಧವಾಗಿದೆ. ಕಾಲಮಿತಿಯಡಿ ಏಕಗವಾಕ್ಷಿ ಪದ್ಧತಿ ಅನುಸರಿಸಿ ಶೀಘ್ರ ಭರ್ತಿ ಮಾಡಲು ಬೇಡಿಕೆಯಿಟ್ಟಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೌಕರರ ಬೇಡಿಕೆಯಂತೆ ಮೊದಲು 24 ಸಾವಿರ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಲಾಗುವುದು. ಒಟ್ಟಾರೆ ಮುಂದಿನ ಐದು ವರ್ಷದಲ್ಲಿ ರಾಜ್ಯದಲ್ಲಿ 2.50 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು’ ಎಂದು ಭರವಸೆ ನೀಡಿದರು. ‘ಬೇಡ ಜಂಗಮ ಸೇರಿ ಇತರೆ ಹೆಸರು ಬಳಸಿ ಸುಳ್ಳು ಜಾತಿ ಪ್ರಮಾಣ ಪತ್ರಕ್ಕೆ ಕಡಿವಾಣ ಹಾಕಲಾಗುವುದು. ನಕಲಿ ಪ್ರಮಾಣ ಪತ್ರ ಪಡೆದವರಿಗೆ ಶಿಕ್ಷೆಯಾಗಲೇಬೇಕು. ಈ ಸಂಬಂಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಪೊಲೀಸ್‌ ಠಾಣೆಗಳ ಸ್ಥಾನಮಾನ ನೀಡಿ ಎಫ್‌ಐಆರ್‌ ದಾಖಲಿಸುವ ಅಧಿಕಾರ ನೀಡಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ದಲಿತರು ಜಾಗೃತರಾಗಬೇಕು: ‘ಸಾಕಷ್ಟು ಒತ್ತಡ ಇದ್ದರೂ ಮುಖ್ಯಮಂತ್ರಿಗಳು ಜಾತಿಗಣತಿ ವರದಿ ಸ್ವೀಕರಿಸಿದ್ದಾರೆ. ಈ ನಡುವೆ ಬಂದ ಅನಧಿಕೃತ ವರದಿಯಲ್ಲಿ ಎಸ್‌ಸಿ,ಎಸ್‌ಟಿ ಜನಸಂಖ್ಯೆ ಹೆಚ್ಚಿದೆ ಎಂಬ ವಿಚಾರವನ್ನೇ ಹಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದು ಅವರ ಮನಸ್ಥಿತಿಯನ್ನು ತೋರ್ಪಡಿಸುತ್ತಿದೆ. ಇಂತಹ ಕವಲು ದಾರಿಯಲ್ಲಿರುವ ನಾವು ಜಾಗೃತರಾಗಬೇಕು. ರಾಜ್ಯದ 125 ಕ್ಷೇತ್ರದಲ್ಲಿ ನಾವು ನಿರ್ಣಾಯಕರಾಗಿದ್ದೇವೆ. ನಮ್ಮ ಸಂಘಟನೆ ಇನ್ನೂ ಬಲಿಷ್ಟವಾಗಬೇಕು’ ಎಂದು ಸಚಿವರು ಕರೆಕೊಟ್ಟರು.

ಧರ್ಮ-ಜಾತಿ ಹೆಸರಿನಲ್ಲಿ ವಿಷಬೀಜ ಬಿತ್ತುವವರ ಬಗ್ಗೆ ಎಚ್ಚರ ಇರಲಿ: ಸಿಎಂ ಸಿದ್ದರಾಮಯ್ಯ

ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ, ‘ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಸರ್ಕಾರ 39ಸಾವಿರ ಕೋಟಿ ಅನುದಾನವಿದೆ. ಈ ಅನುದಾನ ವಿನಿಯೋಗಕ್ಕಾಗಿ ಏಕಗವಾಕ್ಷಿ ಯೋಜನೆ ರೂಪಿಸದಿದ್ದರೆ ಸಮುದಾಯಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗಲ್ಲ. ಸಮಾಜ ಕಲ್ಯಾಣ ಇಲಾಖೆಗೆ ₹ 4400 ಕೋಟಿ ನಿಗದಿಸಿ ಉಳಿದ ಮೊತ್ತವನ್ನು 36 ಇಲಾಖೆಗೆ ಹಂಚಿಬಿಟ್ಟರೆ ಸಮುದಾಯವನ್ನು ಮೇಲೆತ್ತಲು ಆಗಲ್ಲ. ಹೀಗಾಗಿ ಮುಖ್ಯಮಂತ್ರಿ ಮತ್ತು ಹಣಕಾಸು ಇಲಾಖೆಗೆ ಏಕಗವಾಕ್ಷಿ ಯೋಜನೆಯಡಿ ಮಾಡುವಂತೆ ಕೋರಿದ್ದೇವೆ. ಕನಿಷ್ಠ ಶೇ. 50ರಷ್ಟು ಅನುದಾನವನ್ನು ಇಲಾಖೆಗೆ ಕೊಡಿ ಎಂದು ಸಮಾಲೋಚಿಸಿದ್ದೇವೆ’ ಎಂದು ತಿಳಿಸಿದರು.