ಕಾಂಗ್ರೆಸ್‌ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ 59 ಪ್ರಕರಣಗಳನ್ನು ಎಸಿಬಿಗೆ ಕೊಟ್ಟಿದ್ದು, ಅದನ್ನು ನಾವು ಲೋಕಾಯುಕ್ತಕ್ಕೆ ಹಸ್ತಾಂತರಿಸಲಿದ್ದೇವೆ. ಅಲ್ಲಿ ಕಾಂಗ್ರೆಸ್‌ ಬಣ್ಣ ಬಹಳಷ್ಟು ಬಯಲಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ವಿಜಯಪುರ (ಮಾ.09): ಕಾಂಗ್ರೆಸ್‌ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ 59 ಪ್ರಕರಣಗಳನ್ನು ಎಸಿಬಿಗೆ ಕೊಟ್ಟಿದ್ದು, ಅದನ್ನು ನಾವು ಲೋಕಾಯುಕ್ತಕ್ಕೆ ಹಸ್ತಾಂತರಿಸಲಿದ್ದೇವೆ. ಅಲ್ಲಿ ಕಾಂಗ್ರೆಸ್‌ ಬಣ್ಣ ಬಹಳಷ್ಟು ಬಯಲಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಸುಖಾಸುಮ್ಮನೆ ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ. ಈ ರೀತಿಯ ಆಪಾದನೆ ಮಾಡುವ ಮೂಲಕ ಅವರು ಮಾಡಿರುವ ಕರ್ಮ, ಪಾಪ, ಭ್ರಷ್ಟಾಚಾರ ತೊಳೆದು ಹೋಗುವುದಿಲ್ಲ. ಅದು ಮತ್ತೆ ಬಂದೇ ಬರುತ್ತದೆ ಎಂದರು.

Add Asianetnews Kannada as a Preferred SourcegooglePreferred

ಶಾಸಕ ಮಾಡಾಳು ವಿರೂಪಾಕ್ಷಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಈ ಪ್ರಕರಣದ ವಿಚಾರದಲ್ಲಿ ತನಿಖೆ ನಡೆಸಲು ಲೋಕಾಯುಕ್ತರು ಸರ್ವಸ್ವತಂತ್ರರು. ನ್ಯಾಯಾಲಯ ತೀರ್ಮಾನಕ್ಕೆ ನಾವೆಲ್ಲ ತಲೆ ಬಾಗಬೇಕಾಗುತ್ತದೆ. ಇದರ ನಂತರ ಲೋಕಾಯುಕ್ತರು ಮುಂದಿನ ತನಿಖೆ ನಡೆಸಿದ್ದಾರೆ. ಇದರಲ್ಲಿ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದರು. ಇದೇವೇಳೆ ಮಾಡಾಳ ವಿರೂಪಾಕ್ಷಪ್ಪ ಮೆರವಣಿಗೆಗೆ ಇದು ಸರಿಯಲ್ಲ ಎಂಬ ಸ್ಪಷ್ಟಸೂಚನೆ ಕೊಟ್ಟಿದ್ದಾಗಿ ಬೊಮ್ಮಾಯಿ ತಿಳಿಸಿದರು. ತಮ್ಮ ಮೇಲೆ ಡಿ.ಕೆ.ಶಿವಕುಮಾರ್‌ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮಾಯಿ, ಆ ಪುಣ್ಯಾತ್ಮನಿಗೂ ಭ್ರಷ್ಟಾಚಾರಕ್ಕೂ ಬಿಡದ ನಂಟಿದೆ. ಅವರ ಬಾಯಲ್ಲಿ ಈ ರೀತಿಯ ಆರೋಪ ಬರುವುದು ಸಹಜ ಎಂದರು.

ಸುಮಲತಾ ಟು 'ಕಮಲ'ತಾ: ಇಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸೇರ್ಪಡೆಯ ಕುರಿತು ಘೋಷಣೆ?

ಎಲ್ಲಾ ಗೋಮಾಳ ನೀಡಿಲ್ಲ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೆಸ್ಸೆಸ್‌ನವರಿಗೆ ಗೋಮಾಳ ಜಾಗ ನೀಡಲಾಗುತ್ತಿದೆ ಎಂದು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಂದಾಯ ನಿವೇಶನಗಳಲ್ಲಿ ಶಿಕ್ಷಣ, ಗೋಶಾಲೆಗಳಿಗೆ ಪ್ರೋತ್ಸಾಹ ನೀಡಲು ಜಾಗ ಕೊಡಲಾಗಿದೆ. ಅದರರ್ಥ ನಾವೆಲ್ಲ ಗೋಮಾಳ ಜಮೀನು ನೀಡಿದ್ದೇವೆ ಎಂದಲ್ಲ. ಹಿಂದೆ ಅವರು ಅವರಿಗೆ ಬೇಕಾಗಿದ್ದ ಸಂಸ್ಥೆಗಳಿಗೆ ಜಮೀನು ನೀಡಿದ್ದಾರೆ. ಗೋಮಾಳ ಜಾಗವನ್ನು ನಾವೇನು ಕೊಟ್ಟಿಲ್ಲ ಎಂದರು.

ಎಲ್ಲ ಶಾಸಕರಿಗೂ ಟಿಕೆಟ್‌ ಸಿಗೋ ವಿಶ್ವಾಸ ಇಲ್ಲ: ಮುಂಬರಲಿರುವ ವಿಧಾನಸಭೆ ಚುನಾವಣೆಗೆ ಹಾಲಿ ಶಾಸಕರಲ್ಲಿ ನಾಲ್ಕೈದು ಮಂದಿಗೆ ಟಿಕೆಟ್‌ ಕೈತಪ್ಪಬಹುದು ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ. ಯಾವುದೇ ಚುನಾವಣೆಯಲ್ಲಿ ನೂರಕ್ಕೆ ನೂರು ಹಾಲಿ ಶಾಸಕರಿಗೆ ಟಿಕೆಟ್‌ ಕೊಟ್ಟಉದಾಹರಣೆಗಳಿಲ್ಲ. ಎಲ್ಲರಿಗೂ ಟಿಕೆಟ್‌ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು. ವಿಜಯಪುರದ ಚಿಕ್ಕಗಲಗಲಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಸಮೀಕ್ಷೆ, ಶಾಸಕರ ಕಾರ್ಯವೈಖರಿ ಸೇರಿ ಎಲ್ಲ ಮಾನದಂಡಗಳನ್ನು ನೋಡಿಕೊಂಡು ಟಿಕೆಟ್‌ ನೀಡಲಾಗುವುದು ಎಂದು ಹೇಳಿದರು.

ಸಚಿವ ನಾರಾಯಣ ಗೌಡ ಮಾ.21ಕ್ಕೆ ಕಾಂಗ್ರೆಸ್‌ ಸೇರ್ಪಡೆ ಅಧಿಕೃತ

ಯಡಿಯೂರಪ್ಪನವರು ಸಂಸದೀಯ ಮಂಡಳಿ ಸದಸ್ಯರು. ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿ ಅವರಿಗೆ ಮಾಹಿತಿ ಇರಬಹುದು. ಆದರೆ, 70 ವಯಸ್ಸು ದಾಟಿದವರಿಗೆ ಟಿಕೆಟ್‌ ನೀಡಬೇಕೇ, ಬೇಡವೇ ಎನ್ನುವ ವಿಚಾರ ನಮ್ಮ ಮುಂದೆ ಇಲ್ಲ. ಪ್ರತಿಯೊಂದು ಕ್ಷೇತ್ರದ ಕುರಿತು ಸಂಸದೀಯ ಮಂಡಳಿಯಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ನೂರಕ್ಕೆ ನೂರರಷ್ಟುಎಲ್ಲ ಶಾಸಕರಿಗೂ ಟಿಕೆಟ್‌ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.