ಮಂಡ್ಯ ರಾಜಕಾರಣದಲ್ಲಿ 3ನೇ ಆಟ ಶುರು: ಬೆನ್ನಿಗೆ ಚೂರಿ ಹಾಕಿದ ಕುಮಾರಸ್ವಾಮಿಗೆ ಪಾಠ ಕಲಿಸ್ತೀನಿ
ಮಂಡ್ಯದಲ್ಲಿ ಇನ್ನುಮುಂದೆ 3ನೇ ಆಟ ಶುರುವಾಗುತ್ತದೆ. ಜೆಡಿಎಸ್ನಲ್ಲಿ ನನ್ನನ್ನು ಬಳಸಿಕೊಂಡ ದೇವೇಗೌಡರ ಮತ್ತು ಕುಮಾರಸ್ವಾಮಿ ನನ್ನ ಬೆನ್ನಿಗೆ ಚೂರಿ ಹಾಕಿದವರಿಗೆ ಪಾಠ ಕಲಿಸುವುದಾಗಿ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹೇಳಿದ್ದಾರೆ.
ಬೆಂಗಳೂರು (ಮಾ.19): ನಾಗಮಂಗಲದ ಇಬ್ಬರು ಅಭ್ಯರ್ಥಿಗಳನ್ನು ಸೋಲಿಸುವ ಅವಕಾಶ ಇರುವುದು ನನ್ನೊಬ್ಬನಿಗೆ ಮಾತ್ರ. ಮಂಡ್ಯದಲ್ಲಿ ಇನ್ನುಮುಂದೆ ಮೂರನೇ ಆಟ ಶುರುವಾಗುತ್ತದೆ. ಜೆಡಿಎಸ್ನಲ್ಲಿ ನನ್ನನ್ನು ಬಳಸಿಕೊಂಡ ದೇವೇಗೌಡರ ಮತ್ತು ಕುಮಾರಸ್ವಾಮಿ ನನ್ನ ಬೆನ್ನಿಗೆ ಚೂರಿ ಹಾಕಿದವರಿಗೆ ಪಾಠ ಕಲಿಸುವುದಾಗಿ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹೇಳಿದ್ದಾರೆ.
ಬೆಂಗಳೂರಿನ ನಾಯಂಡನಹಳ್ಳಿಯ ನಂದಿ ಲಿಂಕ್ ಗ್ರೌಂಡ್ ನಲ್ಲಿ ನಡೆದ ನಾಗಮಂಗಲ ವಿಧಾನಸಭಾ ಕ್ಷೇತ್ರದ ಬೆಂಗಳೂರು ನಿವಾಸಿಗಳ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದರು. ನಾಗಮಂಗಲ ಕ್ಷೇತ್ರದಲ್ಲಿ ನನಗೆ ನನ್ನದೇ ಆದಂತಹ ಮತಗಳು ಇವೆ. ಇನ್ನೂ 2-3 ದಿನಗಳಲ್ಲಿ ಬಿಜೆಪಿ ನಾನು ನನ್ನ ಮಗ ಬಿಜೆಪಿ ಸೇರುತ್ತೇವೆ. ಈಗಾಘಲೇ ನಾನು ಪಕ್ಷದ ಎಲ್ಲ ನಾಯಕರ ಜೊತೆಗೆ ಚರ್ಚೆ ಮಾಡಿದ್ದೇನೆ. ನನಗೆ ಒಂದು ರಾಷ್ಟ್ರೀಯ ಪಕ್ಷದ ಶಕ್ತಿ ಬೇಕಾಗಿತ್ತು. ಮಂಡ್ಯದಲ್ಲಿ ಬಿಜೆಪಿಯ ಶಕ್ತಿ ಸ್ವಲ್ಪ ಕಡಿಮೆ ಇತ್ತು. ಆದರೆ ರಾಷ್ಟ್ರೀಯ ನಾಯಕರು ಅಲ್ಲಿ ಪಕ್ಷ ಕಟ್ಟುವ ಇಚ್ಚೆ ಪಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಾಯಕರು ಮುಟ್ಟಿ ನೋಡಿಕೊಳ್ಳಬೇಕು. ಮಂಡ್ಯದಲ್ಲಿ ಇನ್ಮುಂದೆ ಮೂರನೇ ಆಟ ಶುರುವಾಗುತ್ತದೆ. ಮಂಡ್ಯದಲ್ಲಿ 7ಕ್ಕೆ 7 ಸೀಟು ಗೆಲ್ಲಿಸಲು ಪಣ ತೊಡುತ್ತೇವೆ ಎಂದು ಹೇಳಿದರು.
ಮಗನಿಗಾಗಿ ನನ್ನನ್ನು ಬಲಿಕೊಟ್ಟು ಗೌಡರನ್ನೂ ಬಲಿ ಕೊಟ್ಟಎಚ್ಡಿಕೆ : ಎಲ್ಆರ್ಎಸ್
ದೇವೇಗೌಡರಿಗೆ ಮೋದಿ ಮೇಲೆ ಗೌರವವಿದೆ: ಮಂಡ್ಯದ ಸ್ವಾಭಿಮಾನ ಅಮಿತ್ ಶಾ ಕಾಲು ಕೆಳಗೆ ಹೋಗಿದೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಆದರೆ, ಅಮಿತ್ ಶಾ ಜೊತೆಗೆ ಕುಮಾರಸ್ವಾಮಿ ಹೋದಾಗ ಅವರಿಗೆ ಪಾದ ನೆನಪು ಆಗಲಿಲ್ಲವೇ.? ನರೇಂದ್ರ ಮೋದಿಯವರು ದೇವೇಗೌಡರನ್ನು ಗೌರವಯುತವಾಗಿ ಕಂಡಿದ್ದಾರೆ. ದೇವೇಗೌಡರು ಕೂಡ ನರೇಂದ್ರ ಮೋದಿ, ಅಮಿತ್ ಶಾ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ. ನಿಮ್ಮ ಕಾಲಿಗೆ ಬಿದ್ದಿದ್ದಾರೆ ಅಂದರೆ ಅದು ಲೆಕ್ಕಕ್ಕೆ ಇಲ್ವಾ? ಕುಮಾರಸ್ವಾಮಿ ತೆಗೆದುಕೊಳ್ಳುವ ಯಾವುದೇ ನಿರ್ಧಾರದಲ್ಲೂ ಮಂಡ್ಯ ಜನರು ಜೊತೆಗಿರ್ತಾರೆ ಎಂಬುದನ್ನು ನಂಬಿಕೆ ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.
ನನ್ನ ಬೆನ್ನಿಗೆ ಚೂರಿ ಹಾಕಿದರು: ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಸೋಲಿಸೋಕೆ ನನ್ನನ್ನು ಜೆಡಿಎಸ್ಗೆ ಕರೆದುಕೊಂಡು ಬಂದರು. ಆ ಮೇಲೆ 5 ತಿಂಗಳಿಗೆ ಮಾತ್ರವೇ ನನ್ನನ್ನ ಸಂಸದನಾಗಿ ಮಾಡಿ ಚುನಾವಣೆ ಖರ್ಚಿನಿಂದ ಸಾಲಗಾರನ್ನಾಗಿ ಮಾಡಿದರು. ಆಮೇಲೆ ಪಾರ್ಟಿಯಲ್ಲಿ ನನ್ನನ್ನು ಏನು ಅಂತಾ ನೋಡಲಿಲ್ಲ. ಈಗ ಪಾರ್ಟಿಯಿಂದ ಹೊರಗೆ ಹಾಕುವ ಮೂಲಕ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಬೇರೂರಬೇಕು. ಮಂಡ್ಯದಲ್ಲಿ ಕಮಲ ಅರಳಿಸಬೇಕು. ನನ್ನನ್ನೂ ಬಿಜೆಪಿಯಿಂದ ಆಹ್ವಾನಿಸಲಾಗಿದೆ. ಈಗಾಗಲೇ ಸುಮಲತಾ ಅವರೂ ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಮಂಡ್ಯದಲ್ಲಿ ನಾಗಮಂಗಲ ಸೇರಿ ಏಳೂ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸ್ತೇವೆ ಎಂದು ಹೇಳಿದರು.
ಪಕ್ಷೇತರನಾಗಿ ಗೆಲ್ಲದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ: ಶಿವರಾಮೇಗೌಡ
ಮಂಡ್ಯದಲ್ಲಿ ಬೇರೆ ಯಾರು ಗಂಡ್ಸು ಇರಲಿಲ್ವಾ.?: ಎಲ್.ಆರ್. ಶಿವರಾಮೇಗೌಡ ಪುತ್ರ ಚೇತನ್ ಕುಮಾರ್ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳೇ, ಮಂಡ್ಯ ಜಿಲ್ಲೆಯಲ್ಲಿ ಬೇರೆ ಯಾರು ಗಂಡ್ಸು ಇರಲಿಲ್ವಾ? ಕಳೆದ ಬಾರಿ ನಿಮ್ಮ ಪುತ್ರನಿಗೆ ಲೋಕಸಭಾ ಎಂಪಿ ಟಿಕೆಟ್ ಕೊಟ್ರಲ್ಲ. ಲೋಕಸಭೆಗೆ ನಿಲ್ಲಿಸೋಕೆ ಯಾರು ಗಂಡ್ಸು ಇರಲಿಲ್ವಾ..? ಚಲುವರಾಯಸ್ವಾಮಿ ಸೋಲಿಸೋಕೆ ನಮ್ಮ ಅಪ್ಪನ ಸಹಾಯ ಪಡೆದುಕೊಂಡಿರಿ. ಯಾವುದೋ ಒಂದು ಆಡಿಯೋ ನೆಪವಾಗಿಟ್ಟುಕೊಂಡು ನಮ್ಮ ಅಪ್ಪನನ್ನು ಪಕ್ಷದಿಂದ ಉಚ್ಚಾಟನೆ ಮಾಡ್ತೀರಲ್ಲ. ಯಾರಾದರೂ ಗುಮಾಸ್ತನನ್ನು ಉಚ್ಚಾಟನೆ ಮಾಡಿದ್ರೆ ಕಾರಣ ಕೊಡ್ತಾರೆ. ಆದರೆ ನಮ್ಮ ಅಪ್ಪನಿಗೆ ಯಾವುದೇ ಕಾರಣ ಇಲ್ದೇ ಉಚ್ಚಾಟನೆ ಮಾಡಿರು. ನಮ್ಮ ಅಪ್ಪನ ಸಹಾಯ ಪಡೆದುಕೊಂಡು ಅವರ ಬೆನ್ನಿಗೆ ಚೂರಿ ಹಾಕಿ ಹೋದ್ರಲ್ಲ. ನಿಮಗೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.