ವಿಪಕ್ಷಗಳ ಮೈತ್ರಿ ಒಕ್ಕೂಟಕ್ಕೆ ಮುಸ್ಲಿಂ ಲೀಗ್, ಬೆಂಗಳೂರು ಸಭೆಗೆ 24 ಪಕ್ಷಗಳಿಂದ ಬೆಂಬಲ!
2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಮಣಿಸಲು ವಿಪಕ್ಷಗಳು ಒಂದಾಗಿದೆ. ಬೆಂಗಳೂರಿನಲ್ಲಿ 2ನೇ ಸಭೆಗೆ ಸಜ್ಜಾಗಿದೆ. ಇದರ ನಡುವೆ ವಿಪಕ್ಷಗಳ ಮೈತ್ರಿ ಒಕ್ಕೂಟಕ್ಕೆ ಬೆಂಬಲ ಹೆಚ್ಚಾಗಿದೆ. ಮುಸ್ಲಿಂ ಲೀಗ್ ಕೂಡ ವಿಪಕ್ಷ ಒಕ್ಕೂಟಕ್ಕೆ ಸೇರುತ್ತಿದೆ. ಇದರ ಪರಿಣಾಮ 24 ಪಕ್ಷಗಳು ಒಕ್ಕೂಟಕ್ಕೆ ಬೆಂಬಲ ಸೂಚಿಸಿದೆ.
ಬೆಂಗಳೂರು(ಜು.12) ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮೋದಿ ಸೋಲಿಸಲು ವಿಪಕ್ಷಗಳು ಒಗ್ಗಟ್ಟಿನ ಮಂತ್ರ ಪಠಿಸಿದೆ. ಬಿಹಾರದ ಪಾಟ್ನಾದಲ್ಲಿ ಮೊದಲ ಸಭೆ ನಡೆಸಿ ಇದೀಗ ಬೆಂಗಳೂರಿನತ್ತ ಚಿತ್ತ ಹರಿಸಿದೆ. ಜುಲೈ 17-18ರಂದು ಬೆಂಗಳೂರಿನಲ್ಲಿ ಎರಡನೇ ಸಭೆ ನಡೆಯಲಿದೆ. ಇದರ ನಡುವೆ ಮಹತ್ವದ ಬೆಳವಣಿಗೆ ನಡೆದಿದೆ. ಇಂಡಿಯನ್ ಮುಸ್ಲಿಂ ಲೀಗ್ ಇದೀಗ ವಿಪಕ್ಷಗಳ ಒಕ್ಕೂಟ ಸೇರುವ ಇಂಗಿತ ವ್ಯಕ್ತಪಡಿದ್ದು, ಬೆಂಗಳೂರಿನ ಸಭೆಯಲ್ಲಿ ಪಾಲ್ಗೊಳ್ಳುತ್ತಿದೆ. ಇತ್ತ ಪಾಟ್ನಾ ಸಭೆ ಬಳಿಕ ಮುನಿಸಿಕೊಂಡಿದ್ದ ಆಮ್ ಆದ್ಮಿ ಪಾರ್ಟಿ ಕೂಡ ಬೆಂಗಳೂರು ಸಭೆಗೆ ಹಾಜರಾಗುತ್ತಿದೆ. ಈ ಮೂಲಕ ಇದೀಗ ವಿಪಕ್ಷಗಳ ಒಕ್ಕೂಟಕ್ಕೆ 24 ಪಕ್ಷಗಳ ಬೆಂಬಲ ಸಿಕ್ಕಿದೆ.
ಬಿಹಾರದ ಪಾಟ್ನಾದಲ್ಲಿ ನಡೆದ ಸಭೆಯಲ್ಲಿ 17 ಪಕ್ಷಗಳು ಭಾಗಿಯಾಗಿತ್ತು. ಈ ಸಭೆ ಬಳಿಕ ಆಮ್ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷಗಳ ನಡುವೆ ಮೈಮನಸ್ಸು ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಮಹಾರಾಷ್ಟ್ರದ ರಾಜಕೀಯದಿಂದ ಎನ್ಸಿಪಿ ಒಡೆದು ಹೋಳಾಗಿತ್ತು. ವಿಪಕ್ಷ ಮೈತ್ರಿಯಲ್ಲಿ ದೊಡ್ಡಣ್ಣಾಗಿದ್ದ ಶರದ್ ಪವಾರ್ ನೇತೃತ್ವದ ಎನ್ಸಿಪಿ ತೀವ್ರ ಆಘಾತ ಎದುರಿಸಿತು. ಹೀಗಾಗಿ ವಿಪಕ್ಷಗಳ ಮೈತ್ರಿಯ ಬೆಂಬಲ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಚಿತ್ರಣ ಬದಲಾಗಿದೆ. 17 ಪಕ್ಷದ ಬೆಂಬಲದಿಂದ ಇದೀಗ 24 ಪಕ್ಷಗಳು ಬೆಂಬಲಕ್ಕೆ ಏರಿಕೆಯಾಗಿದೆ. ಜೊತೆಗೆ ಮುಸ್ಲಿಂ ಲೀಗ್ ಕೂಡ ಸೇರಿಕೊಂಡಿದ್ದು, ಅಲ್ಪಸಂಖ್ಯಾತರ ಮತ ಕ್ರೋಡಿಕರಣವಾಗಲಿದೆ ಅನ್ನೋ ಲೆಕ್ಕಾಚಾರ ಶುರುವಾಗಿದೆ.
2024ರಲ್ಲಿ ಮೋದಿಗೆ ಎದುರಾಗಲಿದ್ಯಾ ಅಸಲಿ ಅಗ್ನಿಪರೀಕ್ಷೆ..?: ಪ್ರಧಾನಿ ವಿರುದ್ಧ ದಶಾಶ್ವಮೇಧ.. ಏನಿದು ಯುದ್ಧವ್ಯೂಹ..?
ಬೆಂಗಳೂರು ಸಭೆಗೆ ಮರುಮಲರಾಚಿ ದ್ರಾವಿಡ್ ಮುನ್ನೇತ್ರ ಕಳಗಂ(MDMK), ಕೊಂಗು ದೇಸ ಮಕ್ಕಳ ಕಚ್ಚಿ(KDMK), ವಿದುಥಲೈ ಚಿರುಥೈಗಲ್ ಕಚ್ಚಿ(VCK), ರೆವಲ್ಯೂಶನರಿ ಸೋಶಿಯಲಿಸ್ಟ್ ಪಾರ್ಟಿ(RSP), ಆರ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(IUML), ಕೇರಳ ಕಾಂಗ್ರೆಸ್(ಜೊಸೆಫ್) ಕೇರಳ ಕಾಂಗ್ರೆಸ್(ಮಣಿ) ಸೇರಿದಂತೆ ಕೆಲ ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳು ಮೈತ್ರಿಕೂಟ ರಚಿಸಲು ಮುಂದಾಗಿರುವ ಸಮಯದಲ್ಲಿ ನ್ಯಾಷನಲ್ ಕಾಂಗ್ರೆಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಈ ಮೈತ್ರಿಕೂಟದಿಂದ ಹೊರಗುಳಿಯುವ ಸೂಚನೆ ನೀಡಿದ್ದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಬೆಂಗಳೂರು ಸಭೆಗೆ ಹಾಜರಾಗುವ ಸಾಧ್ಯತೆ ಇದೆ. ಈ ಕುರಿತು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಹೇಳಿಕೆ ನೀಡಿದ್ದರು. ಅತಿ ಹೆಚ್ಚು ವಿಪಕ್ಷಗಳು ಒಟ್ಟಾಗಿ ಕೆಲಸ ಮಾಡಿದರೆ ಮತ್ತು ಒಗ್ಗಟ್ಟಾಗಿದ್ದರೆ, ಬಿಜೆಪಿ ವಿರುದ್ಧ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದರು.
ಗ್ಯಾರಂಟಿ ಬೇಕೋ, ಬಿಜೆಪಿ ಬೇಕೋ? ನಿರ್ಧರಿಸಿ; ವಿಪಕ್ಷ ಗೆದ್ದರೆ ಹಗರಣ ಗ್ಯಾರಂಟಿ: ಪ್ರತಿಪಕ್ಷ ಮೈತ್ರಿಗೆ ಮೋದಿ ಚಾಟಿ