ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಿಂದ ವಿನೇಶ್ ಫೋಗಟ್ ಅನರ್ಹಗೊಂಡ ಬೆನ್ನಲ್ಲೇ ಈ ಕುರಿತಂತೆ ಬಾಕ್ಸರ್ ವಿಜೇಂದ್ರ ಸಿಂಗ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಿಂದ ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಟ್ ಅಚ್ಚರಿಯ ರೀತಿಯಿಂದ ಹೊರಬಿದ್ದಿದ್ದಾರೆ. ಮಹಿಳೆಯರ 50 ಕೆ.ಜಿ. ಪ್ರಿಸ್ಟೈಲ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಫೋಗಟ್, ಇಂದು ಚಿನ್ನದ ಪದಕಕ್ಕಾಗಿ ಅಮೆರಿಕದ ಕುಸ್ತಿಪಟು ಎದುರು ಕಾದಾಡಬೇಕಿತ್ತು. ಆದರೆ ಕೇವಲ 100 ಗ್ರಾಮ್ ತೂಕ ಹೆಚ್ಚಳದಿಂದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದೆ. 

ಇಂದು ವಿನೇಶ್ ಫೋಗಟ್ ಅವರ ದಿನ ಆಗಬೇಕಿತ್ತು. ಆದರೆ ಕೇವಲ 100 ಗ್ರಾಮ್ ತೂಕ ಹೆಚ್ಚಳ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ನುಚ್ಚುನೂರಾಗಿದೆ. ಇದೀಗ ಈ ಘಟನೆಯ ಕುರಿತಂತೆ ಮಾಜಿ ಒಲಿಂಪಿಯನ್ ಹಾಗೂ ವೃತ್ತಿಪರ ಬಾಕ್ಸರ್ ಆಗಿರುವ ವಿಜೇಂದರ್ ಸಿಂಗ್ ತಮ್ಮ ಅಸಮಾಧಾನ ಹೊರಹಾಕಿದ್ದು, ಇದರ ಹಿಂದೆ ಷಡ್ಯಂತ್ರವಿದೆ ಎಂದು ಹೇಳಿದ್ದಾರೆ.

ವಿನೇಶ್‌ ಅನರ್ಹ, ಗುಜ್‌ಮನ್‌-ಹಿಲ್ಡೆಬ್ರಾಂಡ್ ನಡುವೆ 50ಕೆಜಿ ರೆಸ್ಲಿಂಗ್‌ ಫೈನಲ್‌: ವಿಶ್ವ ಕುಸ್ತಿ ಅಧಿಕೃತ ಹೇಳಿಕೆ!

"ಒಂದು ವೇಳೆ ಅಥ್ಲೀಟ್‌ಗಳ ತೂಕದಲ್ಲಿ ಹೆಚ್ಚಳವಾದರೇ, ತೂಕ ಇಳಿಸಲು ಸ್ಟೀಮ್ ಬಾಥ್, ರನ್ನಿಂಗ್ ಹೀಗೆ ಹಲವು ಪ್ರಯತ್ನಗಳ ಮೂಲಕ ತೂಕ ಇಳಿಸಿಕೊಳ್ಳಲು ಸಾಧ್ಯವಾಗಲಿದೆ. ಇದು ನಿಜಕ್ಕೂ ಕಠಿಣವಾದ ತೀರ್ಮಾನವಾಗಿದೆ. ನಾವು ಈ ನಿರ್ಧಾರದ ವಿರುದ್ದ ಹೋರಾಟ ಮಾಡಬೇಕು" ಎಂದು ವಿಜೇಂದರ್ ಹೇಳಿದ್ದಾರೆ.

"ಮೇಲ್ಮನವಿ ಸಲ್ಲಿಸಲು ಸಾಧ್ಯವಿದೆ. ಈ ಕೆಲಸವನ್ನು ಭಾರತೀಯ ಒಲಿಂಪಿಕ್ ಸಂಸ್ಥೆಯು ಮಾಡಬೇಕಿದೆ. ಫೈನಲ್‌ನಲ್ಲಿ ಆಟಗಾರ್ತಿಯನ್ನು ಅನರ್ಹಗೊಳಿಸುವುದು ಸರಿಯಲ್ಲ. 100 ಗ್ರಾಮ್ ತೂಕ ಏನೇನು ಅಲ್ಲ. ಬಾಕ್ಸರ್‌ಗಳಿಗೆ ತೂಕ ಇಳಿಸಲು ಒಂದು ಗಂಟೆ ಕಾಲಾವಕಾಶ ನೀಡಲಾಗುತ್ತದೆ" ಎಂದು ಹೇಳಿದ್ದಾರೆ.