* ಹಾಕಿ ತಂಡದಲ್ಲಿದ್ದ ರಾಜ್ಯದ ಆಟಗಾರನಿಗೆ ದಕ್ಕದ ಗೌರವ * ಕೇರಳ ಸರ್ಕಾರದ ಮೇಲೆ ಅಂಜು ಬಾಬಿ ಜಾರ್ಜ್ ಕೆಂಡ * ಹಾಕಿ ಗೋಲ್ ಕೀಪರ್ ಶ್ರೀಜೇಶ್ ಅವರಿಗೆ ನಗದು ಬಹುಮಾನ ಇಲ್ಲ

ತಿರುವನಂತಪುರ(ಆ.  11) ಮಾಜಿ  ವಿಶ್ವಚಾಂಪಿಯನ್  ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ  ಹಾಕಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್  ಅವರನ್ನು ಕೇರಳ  ಸರ್ಕಾರ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಕೆಂಡ ಕಾರಿದ್ದಾರೆ.

ಭಾರತ ಹಾಕಿ ತಂಡ ಈ ಬಾರಿ ಇತಿಹಾಸ ಸೃಷ್ಟಿ ಮಾಡಿದೆ. ನಲವತ್ತೊಂದು ವರ್ಷಗಳ ನಂತರ ಸಾಧನೆ ಮಾಡಿದೆ.  ಉಳಿದ ರಾಜ್ಯಗಳು ಸಾಧಕರಿಗೆ ಸನ್ಮಾನ  ಗೌರವ ನೀಡಿವೆ. ಆದರೆ ಕೇರಳ ಸರ್ಕಾರ ಮಾತ್ರ ಕ್ರೀಡಾಪಟುವನ್ನು ಮರೆತಿದೆ ಎಂದು ಆರೋಪಿಸಿದ್ದಾರೆ.

ಚಿನ್ನ ಸಾಧಕನಿಗೆ ಸೇನಾ ಮುಖ್ಯಸ್ಥರಿಂದ ಅಭಿನಂದನೆ

ಮಾಧ್ಯಮವೊಂದರ ಜತೆ ಸಂದರ್ಶನದಲ್ಲಿ ಮಾತನಾಡಿದ ಅಂಜು, ಸಾಧನೆ ಮಾಡಿದ ಕ್ರೀಡಾಪಟುಗಳು ದೇಶ ಪ್ರವೇಶ ಮಾಡುವ ಮುನ್ನವೇ ಉಳಿದ ರಾಜ್ಯಗಳು ಪ್ರಶಸ್ತಿ ಘೋಷಣೆ ಮಾಡಿರುತ್ತವೆ. ಶ್ರೀಜೇಶ್ ಕೇರಳದವರಾಗಿದ್ದರೂ ಅವರಿಗೆ ಯಾವುದೇ ಗುರುತು ಸಿಕ್ಕಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ಕೇರಳದ ಸಿಎಂ ಪಿಣರಾಯಿ ವಿಜಿಯನ್ ಆಟಗಾರರನ್ನು ಕೊಂಡಾಡಿದ್ದರೂ ಅಲ್ಲಿನ ಆಡಳಿತ ಮಾತ್ರ ಯಾವುದೇ ಬಹುಮಾನ ಘೋಷಣೆ ಮಾಡಿಲ್ಲ. ಚಿನ್ನ ಗೆದ್ದ ನೀರಜ್ ಚೋಪ್ರಾಗೆ  ಹರ್ಯಾಣ ಸರ್ಕಾರ ಆರು ಕೋಟಿ ರೂ. ನಗದು ಬಹುಮಾನ ಘೋಷಣೆ ಮಾಡಿತ್ತು.  ಹಾಕಿ ತಂಡದಲ್ಲಿದ್ದ ಮಧ್ಯ ಪ್ರದೇಶದ ಆಟಗಾರರಿಗೆ ಅಲ್ಲಿನ ಸರ್ಕಾರ ಒಂದು ಕೋಟಿ ರೂ. ಬಹುಮಾನ ನೀಡಿತ್ತು.

ಕೇರಳ ಹಾಕಿ ಸ್ಂಸ್ಥೆ ಶ್ರೀಜೇಶ್ ಅವರಿಗೆ ಐದು ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದು ಬಿಟ್ಟರೆ ಸರ್ಕಾರ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. ಇದೇ ಕಾರಣಕ್ಕೆ ಅಂಜು  ಕೇರಳದ ಆಡಳಿತದ ಮೇಲೆ ಸಿಟ್ಟಾಗಿದ್ದಾರೆ.