ಸಿಎಂಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಯುವಕ..!
ಸಿಎಂ ಹೆಸರಲ್ಲಿ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ
ಹಳೆಯ ಕಂಪನಿಯಿಂದ ಕಿರುಕುಳದ ಆರೋಪ
ನೆಮ್ಮದಿಯಿಂದ ಬದುಕಲು ಕಂಪನಿ ಬಿಡುತ್ತಿಲ್ಲ ಎಂದು ಆರೋಪ
ಮನೆಯವರಿಗೆ 25 ಲಕ್ಷ ಪರಿಹಾರಕ್ಕೆ ಸಿಎಂ ಅವರಲ್ಲಿ ಮನವಿ
ಬೆಂಗಳೂರು[ಜೂ.9]: ಸಿಎಂ ಕುಮಾರಸ್ವಾಮಿ ಅವರಿಗೆ ಡೆತ್ ನೋಟ್ ಬರೆದಿಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಜಿಗಿಣಿಯಲ್ಲಿ ನಡೆದಿದೆ. ತೇಜು ಎಂಬ 26 ವರ್ಷದ ಯುವಕ ಆಡಿಯೋ ರೆಕಾರ್ಡ್ ಮಾಡಿಟ್ಟು ನೇಣಿಗೆ ಶರಣಾಗಿದ್ದಾನೆ.
ಎವಿಡಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತೇಜು ಇತ್ತೀಚೆಗೆ ಎವಿಡಂಟ್ ಬಿಟ್ಟು ಬೇರೆ ಕಂಪನಿಗೆ ಕೆಲಸಕ್ಕೆ ಸೇರಿದ್ದ. ಆದರೆ ಎವಿಡಂಟ್ ಕಂಪನಿ ತನಗೆ ಬಿಡುಗಡೆ ಪತ್ರ ನೀಡದೆ ಕಿರುಕುಳ ನೀಡುತ್ತಿದೆ ಎಂದು ತೇಜು ಡೆತ್ ನೋಟ್ ನಲ್ಲಿ ಆರೋಪಿಸಿದ್ದಾನೆ. ಬಿಡುಗಡೆ ಪತ್ರ ನೀಡಿದೆ ಕಿರುಕುಳ ನೀಡುತ್ತಿರುವ ಎವಿಡಂಟ್ ಕಂಪನಿ, ತನ್ನನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ ಎಂದು ತೇಜು ಡೆತ್ ನೋಟ್ ನಲ್ಲಿ ತಿಳಿಸಿದ್ದಾನೆ.
ಆತ್ಮಹತ್ಯೆಗೂ ಮುನ್ನ ಸಿಎಂ ಕುಮಾರಸ್ವಾಮಿ ಅವರಿಗಾಗಿ ಆಡಿಯೋ ರೆಕಾರ್ಡ್ ಮಾಡಿರುವ ತೇಜು, ತನ್ನ ಸಾವಿನ ಬಳಿಕ ಸ್ಥಳೀಯ ಶಾಸಕರು, ಸಿಎಂ ಕುಮಾರಸ್ವಾಮಿ ಅವರಿಂದ ತನ್ನ ಕುಟುಂಬಸ್ಥರಿಗೆ 25 ಲಕ್ಷ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾನೆ. ಅಲ್ಲದೇ ತನ್ನ ಅಂಗಾಂಗಳನ್ನು ಮೆಡಿಕಲ್ ಕಾಲೇಜಿಗೆ ದಾನ ಮಾಡಲು ಮನವಿ ಕೂಡ ಮಾಡಿದ್ದಾನೆ.
ತೇಜುವಿನ ಮನವಿಯಂತೆ ಆತನ ಕಣ್ಣುಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.