ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನಡುವೆ ತಿಕ್ಕಾಟ ತಂದಿಟ್ಟಿರುವ ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯುತ್ತಿದ್ದು ಇದರಿಂದ ರಾಜ್ಯ ರಾಜಕಾರಣದಲ್ಲಿಯೂ ಕೂಡ ಕುತೂಹಲ ಮೂಡಿದೆ. 

ಬೆಳಗಾವಿ : ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ, ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನಡುವೆ ತಿಕ್ಕಾಟ ತಂದಿಟ್ಟಿರುವ ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಶುಕ್ರವಾರ ನಡೆಯಲಿದೆ. ಬೆಳಗಾವಿ ರಾಜ ಕಾರಣದ ಮೇಲೆ ತಮ್ಮದೇ ಆದ ನಿಯಂತ್ರಣ ಹೊಂದಿರುವ ಜಾರಕಿಹೊಳಿ ಸಹೋ ದರರ ಪಾಲಿಗೆ ಅಗ್ನಿ ಪರೀಕ್ಷೆಯೇ ಆಗಿರುವ, ರಾಜ್ಯ ಸರ್ಕಾರದ ಅಸ್ತಿತ್ವದ ಮೇಲೆ ನೇರ ಪರಿಣಾಮ ಬೀರಬಹುದಾದ ಈ ಚುನಾವಣೆ ಮೇಲೆ ಇಡೀ ರಾಜ್ಯ ರಾಜಕಾರಣ ಕುತೂಹಲ ದಿಂದ ಎದುರು ನೋಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏತನ್ಮಧ್ಯೆ, ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದು ಕೊಂಡಿರುವ ಜಾರಕಿಹೊಳಿ ಸಹೋದರರು ‘ಉಗ್ರ ನಿರ್ಧಾರ ತೆಗೆದುಕೊಳ್ಳುವ’ ಎಚ್ಚರಿಕೆ ನೀಡಿರುವುದು ರಾಜ್ಯ ಸರ್ಕಾರ ಉರುಳುತ್ತಾ ಎನ್ನುವ ಕುತೂಹಲವನ್ನು ಮೂಡಿಸಿದೆ. ಬೆಳಗಾವಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ)ನಲ್ಲಿ ಒಟ್ಟು 14 (ನಾಮನಿರ್ದೇಶಿತ ಒಬ್ಬ ಸದಸ್ಯರನ್ನು ಹೊರತುಪಡಿಸಿ) ನಿರ್ದೇಶಕರಿದ್ದು, ಈ ಪೈಕಿ 9 ನಿರ್ದೇಶಕರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಜೊತೆಗೆ ಗುರುತಿಸಿಕೊಂಡಿದ್ದರೆ, ಉಳಿದ ಐವರು ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗರು. ಇಲ್ಲಿ ಹೆಬ್ಬಾಳಕರ ಬಣಕ್ಕೆ ಸ್ಪಷ್ಟಬಹುಮತ ಇದ್ದರೂ ಜಾರಕಿಹೊಳಿ ಸಹೋದರರು ಪ್ರತಿಷ್ಠೆ ಪಣಕ್ಕಿಟ್ಟಿ ರುವ ಹಿನ್ನೆಲೆಯಲ್ಲಿ ಕೊನೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಕಳೆದ 20 ವರ್ಷಗಳಿಂದ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಅವಿರೋಧ ಆಯ್ಕೆಯಾಗುತ್ತ ಬಂದಿದೆ. 

ಇದು ಸಂಪ್ರದಾಯ ಎಂದು ಸತೀಶ ಜಾರಕಿಹೊಳಿ ಅವರೇ ಈಗಾಗಲೇ ಹೇಳಿದ್ದಾರೆ. ಆದರೆ, ಲಕ್ಷ್ಮಿ ಹೆಬ್ಬಾಳಕರ ಅವರ ಬೆಂಬಲಿಗರ ಒತ್ತಾಯದಂತೆ ಈಗ ಚುನಾವಣೆ ನಡೆಯುತ್ತಿರುವುದು ಜಾರಕಿಹೊಳಿ ಸಹೋದರರಿಗೆ ಅದರಲ್ಲೂ ಮುಖ್ಯವಾಗಿ ಸತೀಶ್ ಜಾರಕಿಹೊಳಿ ಅವರಿಗೆ ಇರಿಸು ಮುರಿಸು ಉಂಟುಮಾಡಿದೆ.

ಯಾಕಿಷ್ಟು ಮಹತ್ವ?: ರಾಜ್ಯಾದ್ಯಂತ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸುಸೂತ್ರವಾಗಿದೆ ನಡೆದಿವೆ. ಎಲ್ಲೂ ಇಷ್ಟೊಂದು ಪ್ರತಿಷ್ಠೆ, ದ್ವೇಷದ ವಾತಾವರಣ ಹೊರ ಬಿದ್ದಿಲ್ಲ. ಬೆಳಗಾವಿ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರೇ ಪರಸ್ಪರ ಕಿತ್ತಾಟಕ್ಕೆ ಇಳಿದಿದ್ದಾರೆ. ಆ. 28 ರಂದು ನಡೆಯಬೇಕಿದ್ದ ಈ ಬ್ಯಾಂಕಿನ ಚುನಾವಣೆಯನ್ನು ದಿಢೀರ್ ಚುನಾವಣಾಧಿಕಾರಿ ಮುಂದೂಡಿದರು. ಈ ಕ್ರಮ ವಿರೋಧಿಸಿ ರಾತ್ರೋರಾತ್ರಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮತ್ತು ಅವರ ಬೆಂಬಲಿತ ಬ್ಯಾಂಕಿನ 9 ನಿರ್ದೇಶಕರು ತಹಸೀಲ್ದಾರ ಕಚೇರಿ ಎದುರು ಧರಣಿ ಮಾಡಿದರು.

ಚುನಾವಣಾಧಿಕಾರಿ ಕ್ರಮ ಪ್ರಶ್ನಿಸಿ, ನ್ಯಾಯಾಲಯದ ಮೊರೆ ಹೋಗಿದ್ದರು. ಕಾನೂನು ಸಮರದಲ್ಲಿ ಲಕ್ಷ್ಮಿ ಹೆಬ್ಬಾಳಕರಗೆ ಮೊದಲ ಜಯ ಲಭಿಸಿದರೆ, ಜಾರಕಿಹೊಳಿ ಸಹೋ ದರರಿಗೆ ತೀವ್ರ ಹಿನ್ನಡೆಯಾಗಿದೆ. ಇದು ಜಿಲ್ಲಾರಾಜ ಕೀಯದ ಮೇಲೆ ದಶಕಗಳಿಂದ ನಿಯಂತ್ರಣ ಹೊಂದಿರುವ ಜಾರಕಿಹೊಳಿ ಸಹೋದರರ ಅಸಮಾಧಾನಕ್ಕೆ ಕಾರಣವಾಗಿದ್ದು, ಅವರೀಗ ಒಂದು ವೇಳೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ನಿಯಂತ್ರಿಸದಿದ್ದರೆ ಈ ಚುನಾವಣೆಯ ಫಲಿತಾಂಶ ಸರ್ಕಾರದ ಮೇಲೂ ಬೀರಲಿದೆ ಎನ್ನುವ ಪರೋಕ್ಷ ಎಚ್ಚರಿಕೆಯನ್ನು ಪಕ್ಷದ ಹೈಕಮಾಂಡ್‌ಗೂ ನೀಡಿದ್ದಾರೆ.

ಒಂದು ವೇಳೆ ಚುನಾವಣೆಯಲ್ಲಿ ಲಕ್ಷ್ಮಿಹೆಬ್ಬಾಳಕರ ಬಣಕ್ಕೆ ಗೆಲುವಾದರೆ ದಶಕಗಳಿಂದ ಈ ಬ್ಯಾಂಕ್‌ನ ಮೇಲೆ ಹೊಂದಿರುವ ಹಿಡಿತ ಕಳೆದುಕೊಳ್ಳಬೇಕಾಗುತ್ತದೆ. ಈ ಮೂಲಕ ಜಿಲ್ಲಾ ರಾಜಕೀಯದಲ್ಲಿ ಹಿನ್ನಡೆ ಅನುಭವಿಸಿದಂತಾಗುತ್ತದೆ ಎಂಬುದು ಜಾರಕಿಹೊಳಿ ಸಹೋದರರ ಆತಂಕ.