ಕೆಲ ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ, ಧನವಾಡೆ ಮತ್ತು ಇತರ ಹುಡುಗರು ಮೈದಾನ ಖಾಲಿ ಮಾಡುವ ಸೂಚನೆ ಪಾಲಿಸಲು ಸ್ವಲ್ಪ ವಿಳಂಬ ಮಾಡಿದ್ದಕ್ಕೆ ಪೊಲೀಸರು ಕೆಟ್ಟದಾಗಿ ವರ್ತಿಸಿದರು.
ಮುಂಬೈ(ಡಿ. 18): ಶಾಲಾ ಕ್ರಿಕೆಟ್'ನಲ್ಲಿ ಒಂದೇ ಇನ್ನಿಂಗ್ಸಲ್ಲಿ ಬರೋಬ್ಬರಿ 1009 ರನ್ ಗಳಿಸಿ ವಿಶ್ವದಾಖಲೆ ಧೂಳೀಪಟ ಮಾಡಿದ್ದ ಮುಂಬೈ ಟೀನೇಜ್ ಹುಡುಗ ಪ್ರಣವ್ ಧನವಾಡೆಯನ್ನು ಪೊಲೀಸರು ಠಾಣೆಗೆ ಕರೆದೊಯ್ದ ಘಟನೆ ನಡೆದಿದೆ. ಮೈದಾನ ಖಾಲಿ ಮಾಡಲು ಮಾಡಿದ್ದ ಸೂಚನೆಯನ್ನು ಪಾಲನೆ ಮಾಡದ ಕಾರಣಕ್ಕೆ ಧನವಾಡೆ ಅವರು ಪೊಲೀಸ್ ಠಾಣೆಗೆ ಹೋಗಬೇಕಾಯಿತು ಎಂದು ಹೇಳಲಾಗಿದೆ.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರ ಆಗಮನಕ್ಕಾಗಿ ಕಲ್ಯಾಣ್'ನ ಸುಭಾಷ್ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಿಲಾಗಿತ್ತು. ಪ್ರಣವ್ ಧನವಾಡೆ ಮತ್ತವರ ಸ್ನೇಹಿತರ ಕ್ರಿಕೆಟ್ ಅಭ್ಯಾಸ ನಡೆಯುವುದು ಇದೇ ಮೈದಾನದಲ್ಲಿ. ಸಚಿವರು ಆಗಮಿಸಲಿರುವ ಹಿನ್ನೆಲೆಯಲ್ಲಿ ಮೈದಾನದಲ್ಲಿ ಭದ್ರತೆ ಒದಗಿಸಬೇಕಿತ್ತು. ಹೀಗಾಗಿ, ಭದ್ರತಾ ಸಿಬ್ಬಂದಿಯು ಆಟಗಾರರನ್ನು ಮೈದಾನದಿಂದ ಹೊರಹೋಗಲು ಸೂಚಿಸುತ್ತಾರೆ. ತಮಗೆ ಅಭ್ಯಾಸ ನಡೆಸಲು ಈ ಮೈದಾನ ಬಿಟ್ಟು ಬೇರೆ ಇಲ್ಲ ಎಂದು ಹೇಳಿ ಧನವಾಡೆ ಹಾಗೂ ಹುಡುಗರು ಪ್ರತಿಭಟನೆ ಮಾಡಿದ್ದಾರೆ. ಮೈದಾನ ಖಾಲಿ ಮಾಡಿಸುವ ಅನುಮತಿ ಪತ್ರ ಎಲ್ಲಿದೆ ಎಂದು ಧನವಾಡೆ ಕೇಳುತ್ತಾರೆ. ಆಗ ಪೊಲೀಸರು ಧನವಾಡೆಯನ್ನು ಬಜರ್'ಪೇಟ್ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಾರೆ. ಬಳಿಕ ಆತನಿಗೆ ಎಚ್ಚರಿಕೆ ನೀಡಿ ಬಿಟ್ಟುಕಳುಹಿಸುತ್ತಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಆದರೆ, ಕೆಲ ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ, ಧನವಾಡೆ ಮತ್ತು ಇತರ ಹುಡುಗರು ಮೈದಾನ ಖಾಲಿ ಮಾಡುವ ಸೂಚನೆ ಪಾಲಿಸಲು ಸ್ವಲ್ಪ ವಿಳಂಬ ಮಾಡಿದ್ದಕ್ಕೆ ಪೊಲೀಸರು ಕೆಟ್ಟದಾಗಿ ವರ್ತಿಸಿದರು. ಧನವಾಡೆಯ ಬಟ್ಟೆ ಹಿಡಿದು ಹೊರಗೆ ಸಾಗಹಾಕಿದರು ಎಂಬಂತಹ ಮಾಹಿತಿ ಲಭಿಸಿದೆ.
ಯಾರು ಈ ಪ್ರಣವ್ ಧನವಾಡೆ?
ವರ್ಷದ ಹಿಂದೆ ಮುಂಬೈನ ಶಾಲಾ ಕ್ರಿಕೆಟ್'ನಲ್ಲಿ ಪ್ರಣವ್ ಧನವಾಡೆ ಒಂದೇ ಇನ್ನಿಂಗ್ಸಲ್ಲಿ 1009 ರನ್ ಭಾರಿಸಿದರು. ಇಂಥ ಸಾಧನೆ ಮಾಡಿದ ವಿಶ್ವದ ಏಕೈಕ ಕ್ರಿಕೆಟ್ ಆಟಗಾರ ಎನಿಸಿದ್ದಾರೆ. ಈತ ಭಾರತದ ಭವಿಷ್ಯದ ಕ್ರಿಕೆಟ್ ತಾರೆಯಾಗಲಿದ್ದಾನೆ ಎಂದು ಅನೇಕ ಕ್ರಿಕೆಟಿಗರು ಭವಿಷ್ಯ ನುಡಿದಿದ್ದಾರೆ.
