ಮಹಿಳೆಯರು ಸುರಕ್ಷತೆಗಾಗಿ ಕೈಯಲ್ಲಿ ಖಡ್ಗ ಹಿಡಿದುಕೊಳ್ಳಬೇಕು: ಕೇಂದ್ರ ಸಚಿವ
- ಮಹಿಳೆಯರು ಸುರಕ್ಷತೆಗಾಗಿ ಮಹಾ ಕಾಳಿ ತರಹ ಕೈಯಲ್ಲಿ ಖಡ್ಗ ಹಿಡಿಯಬೇಕು
- ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಹೇಳಿಕೆ!
ನವದೆಹಲಿ [ಮೇ. 10] : ಮಹಿಳೆಯರ ಸುರಕ್ಷತೆ ಬಗ್ಗೆ ಸರ್ಕಾರಗಳ ಜವಾಬ್ದಾರಿ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿರುವ ನಡುವೆ, ಮಹಿಳೆಯರು ಸುರಕ್ಷತೆಗಾಗಿ ಕೈಯಲ್ಲಿ ಖಡ್ಗವನ್ನು ಹಿಡಿದುಕೊಳ್ಳಬೇಕೆಂದು ಕೇಂದ್ರ ಸಚಿವರು ಹೇಳಿರುವುದು ವಿವಾದಕ್ಕೆಡೆ ಮಾಡಿದೆ.
ಮಹಿಳೆಯರು ಸುರಕ್ಷತೆಗಾಗಿ ತಮ್ಮ ಕೈಯಲ್ಲಿ ಮಹಾಕಾಳಿ ತರಹ ಖಡ್ಗವನ್ನು ಹಿಡಿದುಕೊಳ್ಳಬೇಕು. ಮಹಾಕಾಳಿ ಕೈಯಲ್ಲಿ ಹಿಡಿದಿರುತ್ತಾಳೆ ಆದರೆ ಬಳಸುವುದಿಲ್ಲ. ಅದೇ ರೀತಿ ಮಹಿಳೆಯರು ಕೂಡಾ, ಸಮಾಜಘಾತುಕ ಶಕ್ತಿಗಳನ್ನು ಬೆದರಿಸಲು ಕೈಯಲ್ಲಿ ಖಡ್ಗವನ್ನು ಹಿಡಿದಿರಬೇಕು, ಎಂದು ಬಾಬುಲ್ ಸುಪ್ರಿಯೋ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಬುರ್ದಾನ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಅವರು ಈ ಸಲಹೆಯನ್ನು ಮಹಿಳೆಯರಿಗೆ ನೀಡಿದ್ಧಾರೆ.
ಕಳೆದ ರಾಮನವಮಿ ವೇಳೆ ಪ.ಬಂಗಾಳದ ಅಸಾನ್ಸೋಲ್ನಲ್ಲಿ ನಡೆದ ಕೋಮು ಗಲಭೆ ಸಂದರ್ಭದಲ್ಲಿ ಸ್ಥಳೀಯರಿಗೆ ಬೆದರಿಕೆ ಹಾಕಿದ್ದ ಸುಪ್ರಿಯೋ ಮೇಲೆ ನಿಷೇಧಾಜ್ಞೆ ಉಲ್ಲಂಘಿಸಿದ ಹಾಗೂ ಐಪಿಎಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದ ಬಗ್ಗೆ ದೂರು ದಾಖಲಾಗಿತ್ತು.