ಮಹಿಳಾ ಸಂಸದರ ಧ್ವನಿ ಜೋರು: ಖಾನ್ ಸಾಹೇಬರ ಕಣ್ಣಲ್ಲಿ ನೀರು!
ಎಸ್ಪಿ ಸಂಸದ ಆಜಂ ಖಾನ್ ಹೇಳಿಕೆಗೆ ಮಹಿಳಾ ಸಂಸದರ ವಿರೋಧ| ಆಜಂ ಖಾನ್ ವಿರುದ್ಧ ಕಠಿಣ ಕ್ರಮಕ್ಕೆ ಮಹಿಳಾ ಸಂಸದರ ಆಗ್ರಹ| ಆಜಂ ಖಾನ್ ವಿರುದ್ಧ ಹರಿಹಾಯ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್| ಮಹಿಳಾ ಸಂಸದರ ಕಣ್ಣು ನೋಡಲು ಲೋಕಸಭೆ ಇಲ್ಲ ಎಂದ ಸ್ಮೃತಿ ಇರಾನಿ| ಆಜಂ ತಮ್ಮ ಕ್ಷಮೆಯಾಚಿಸಲಿ ಎಂದ ಬಿಜೆಪಿ ಸಂಸದೆ ರಮಾದೇವಿ| ರಾಜಕೀಯ ಪಕ್ಷಗಳ ಅಭಿಪ್ರಾಯ ಪಡೆದು ಆಜಂ ಖಾನ್ ವಿರುದ್ಧ ಕ್ರಮ ಎಂದ ಸ್ಪೀಕರ್|
ನವದೆಹಲಿ(ಜು.26): ಬಿಜೆಪಿ ಸಂಸದೆ ರಮಾದೇವಿ ಕುರಿತ ಎಸ್ಪಿ ಸಂಸದ ಆಜಂ ಖಾನ್ ಆಕ್ಷೇಪಾರ್ಹ ಹೇಳಿಕೆಯನ್ನು, ಮಹಿಳ ಸಂಸದರು ಲೋಕಸಭೆಯಲ್ಲಿ ಒಕ್ಕೊರಲಿನಿಂದ ಖಂಡಿಸಿದರು.
ರಮಾದೇವಿ ಕುರಿತ ಆಜಂ ಖಾನ್ ಹೇಳಿಕೆ ದೇಶದ ಮಹಿಳೆಯರಿಗೆ ಮಾಡಿದ ಅವಮಾನವಾಗಿದ್ದು, ಈ ಕೂಡಲೇ ಆಜಂ ಖಾನ್ ರಮಾದೇವಿ ಕ್ಷಮೆಯಚಿಸಬೇಕು ಎಂದು ಮಹಿಳಾ ಸಂಸದರು ಆಗ್ರಹಿಸಿದರು.
ಈ ಕುರಿತು ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಲೋಕಸಭೆಯಲ್ಲೇ ಮಹಿಳಾ ಸಂಸದೆಗೆ ಅವಮಾನಿಸಿದ ಆಜಂ ಖಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಪೀಕರ್ ಅವರನ್ನು ಆಗ್ರಹಿಸಿದರು.
ಇನ್ನು ಆಜಂ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಆಜಂ ಖಾನ್ ನಡೆಯನ್ನು ಇಡೀ ದೇಶ ಗಮನಿಸಿದ್ದು, ರಮಾದೇವಿ ಕ್ಷಮೆ ಕೇಳದಿದ್ದರೆ ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಪುರುಷ ಸಂಸದರು ಮಹಿಳಾ ಸಂಸದರ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಲೋಕಸಭೆ ಇಲ್ಲ ಎಂದು ಸ್ಮೃತಿ ಇರಾನಿ ಆಜಂ ಖಾನ್ ವಿರುದ್ಧ ಹರಿಹಾಯ್ದರು.
ನಿನ್ನೆ ತ್ರಿವಳಿ ತಲಾಖ್ ಕುರಿತು ಲೋಕಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವ ವೇಳೆ, ಇತರ ಸದಸ್ಯರ ಗದ್ದಲಕ್ಕೆ ಗಮನಕೊಡದೇ ತಮ್ಮನ್ನು ಉದ್ದೇಶಿಸಿ ಮಾತನಾಡುವಂತೆ ಸ್ಪೀಕರ್ ಅನುಪಸ್ಥಿತಿಯಲ್ಲಿ ಕಲಾಪ ನಡೆಸುತ್ತಿದ್ದ ಬಿಜೆಪಿ ಸಂಸದೆ ರಮಾದೇವಿ ಆಜಂ ಖಾನ್ ಅವರಿಗೆ ಸೂಚನೆ ನೀಡಿದ್ದರು.
ಇದಕ್ಕೆ ಪ್ರತಿಕ್ರಯಿಸಿದ್ದ ಆಜಂ ಖಾನ್, ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಎನಿಸುತ್ತಿದೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಅಲ್ಲದೇ ರಮಾದೇವಿ ವಿರೋಧದ ಬಳಿಕ ನೀವು ನನ್ನ ಸಹೋದರಿ ಇದ್ದಂತೆ ಎಂದು ಸ್ಪಷ್ಟೀಕರಣ ನೀಡಿದ್ದರು.
ಇನ್ನು ತಮ್ಮ ವಿರುದ್ಧದ ಆಜಂ ಖಾನ್ ಹೇಳಿಕೆಗೆ ನೊಂದು ನುಡಿದಿರುವ ಸಂಸದೆ ರಮಾದೇವಿ, ಆಜಂ ಖಾನ್ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ. ಸದ್ಯ ಎಲ್ಲಾ ರಾಜಕೀಯ ಪಕ್ಷಗಳ ಅಭಿಪ್ರಾಯ ಪಡೆದು ಆಜಂ ಖಾನ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್ ಓಂ ಬಿರ್ಲಾ ಸ್ಪಷ್ಟನೆ ನೀಡಿದ್ದಾರೆ.