ತಿಂಡಿ ತಡವಾಗಿದ್ದಕ್ಕೆ ಬೈದ ಪತಿ: ಇದಕ್ಕೆ ಪತ್ನಿ ಮಾಡಿದ್ದೇನು ಗೊತ್ತಾ?
ಬೆಳಗ್ಗೆ ತಡವಾಗಿ ಉಪಾಹಾರ ಸಿದ್ಧಪಡಿಸಿದ್ದಕ್ಕೆ ಪತಿ ಬೈದಿದ್ದಾರೆ. ಇದಕ್ಕೆ ಪತ್ನಿ ಮಾಡಿದ್ದೇನು ಗೊತ್ತಾ..?
ಬೆಂಗಳೂರು, ಅ.11: ಬೆಳಗ್ಗೆ ತಡವಾಗಿ ಉಪಾಹಾರ ಸಿದ್ಧಪಡಿಸಿದ್ದಕ್ಕೆ ಪತಿ ಬೈದರು ಎಂದು ಕೋಪಿಸಿಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬನಶಂಕರಿ ಸಮೀಪ ಕದಿರೇನಹಳ್ಳಿಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಅಂಜಲಿ (26) ಮೃತ ಗೃಹಿಣಿ. ಮಂಗಳವಾರ ಬೆಳಗ್ಗೆ ಪತಿ ಕೆಲಸಕ್ಕೆ ತೆರಳಿದ ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಅಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಧ್ಯಾಹ್ನ ಮೃತರ ಪತಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರು ವರ್ಷಗಳ ಹಿಂದೆ ಅಂಜಲಿ ಹಾಗೂ ದಂಡಾಯುದಂ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೌಟುಂಬಿಕ ವಿಚಾರವಾಗಿ ಸತಿ-ಪತಿ ಮಧ್ಯೆ ಮನಸ್ತಾಪವಾಗಿತ್ತು. ಅದೇ ರೀತಿ ಮಂಗಳವಾರ ಬೆಳಗ್ಗೆ ಉಪಾಹಾರ ವಿಷಯವಾಗಿ ಉಂಟಾದ ಜಗಳವು ವಿಕೋಪಕ್ಕೆ ತಿರುಗಿ ಅನಾಹುತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿಂಡಿ ಸಿದ್ಧಪಡಿಸುವುದನ್ನು ತಡ ಮಾಡಿದಳು. ಇದರಿಂದ ಶಾಲೆಗೆ ತೆರಳಲು ಮಕ್ಕಳಿಗೆ ತೊಂದರೆ ಉಂಟಾಯಿತು. ಹಾಗಾಗಿ ಬೇಗ ಎದ್ದು ತಿಂಡಿ ಮಾಡೋಕಾಗಲ್ವ ಎಂದು ಪತ್ನಿಗೆ ಬೈದೆ. ಈ ಮಾತಿಗೆ ನಾನು ಮನೆ ಕೆಲಸದವಳಲ್ಲ ಎಂದು ಆಕೆ ಮಾರುತ್ತರ ನೀಡಿದ್ದಳು. ಆಗ ನಮ್ಮಿಬ್ಬರ ಮಧ್ಯೆ ಜಗಳವಾಯಿತು ಎಂದು ಮೃತರ ಪತಿ ದಂಡಾಯುದಂ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.