2012ರ ದಿಲ್ಲಿ ಗ್ಯಾಂಗ್‌ರೇಪ್ ಪ್ರಕರಣದ ಸಂತ್ರಸ್ತೆ ‘ನಿರ್ಭಯಾ’ಳ ಸೋದರನಿಗೆ ಮಾನವೀಯ ಸಹಾಯಹಸ್ತ ಚಾಚಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಆತನನ್ನು ವಿಮಾನದ ಪೈಲಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನವದೆಹಲಿ: 2012ರ ದಿಲ್ಲಿ ಗ್ಯಾಂಗ್ರೇಪ್ ಪ್ರಕರಣದ ಸಂತ್ರಸ್ತೆ ‘ನಿರ್ಭಯಾ’ಳ ಸೋದರನಿಗೆ ಮಾನವೀಯ ಸಹಾಯಹಸ್ತ ಚಾಚಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಆತನನ್ನು ವಿಮಾನದ ಪೈಲಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರಪ್ರದೇಶ ಮೂಲದ ಈ ಕುಟುಂಬದ ಜತೆ ಭೀಕರ ಘಟನೆ ನಡೆದ ದಿನದಿಂದ ರಾಹುಲ್ ನಿರಂತರ ಸಂಪರ್ಕದಲ್ಲಿದ್ದಾರೆ.
ಘಟನೆ ನಡೆದಾಗ 12ನೇ ತರಗತಿಯಲ್ಲಿದ್ದ ನಿರ್ಭಯಾಳ ಸೋದರನಿಗೆ ಉತ್ತೇಜನ ನೀಡಿದ ರಾಹುಲ್, ‘ನೀನು ಯಾವತ್ತೂ ಧೈರ್ಯಗೆಡಬೇಡ. ಮುನ್ನುಗ್ಗು. ಜೀವನದಲ್ಲಿ ಏನಾದರೂ ಸಾಧಿಸು’ ಎಂದು ಧೈರ್ಯ ಹೇಳಿದರು. ಅಲ್ಲದೆ, ಅಂದಿನಿಂದ ಇಂದಿನವರೆಗೆ ಎಲ್ಲ ಶಿಕ್ಷಣ ವೆಚ್ಚವನ್ನೂ ರಾಹುಲ್ ಅವರೇ ಭರಿಸಿದ್ದಾರೆ.
ಗುರುಗ್ರಾಮದಲ್ಲಿ ಈಗ ನಿರ್ಭಯಾ ಸೋದರ, ತರಬೇತಿಯ ಕೊನೆಯ ಹಂತದಲ್ಲಿದ್ದಾರೆ. ‘ಅಂದಿನಿಂದ ಇಂದಿನವರೆಗೆ ರಾಹುಲ್ ಅವರೇ ನಮ್ಮ ಮಗನ ಶಿಕ್ಷಣ ವೆಚ್ಚ ಭರಿಸಿದ್ದಾರೆ. ಆಗಾಗ ರಾಹುಲ್ ಫೋನ್ ಮಾಡಿ ಆತನ ಶೈಕ್ಷಣಿಕ ಪ್ರಗತಿ ವಿಚಾರಿಸುತ್ತಿದ್ದರು,’ ಎಂದು ನಿರ್ಭಯಾಳ ತಾಯಿ ಆಶಾದೇವಿ ಹೇಳಿದರು.
