2019ರಲ್ಲಿ ಯಾರ ಪರ "ಚುನಾವಣಾ ಚಾಣಕ್ಯ'ನ ಕ್ಯಾಂಪೇನ್?! 2014 ರಲ್ಲಿ ನರೇಂದ್ರ ಮೋದಿ ಗೆಲುವಿಗೆ ಕಾರಣರಾಗಿದ್ದ ಪ್ರಶಾಂತ್ ಕಿಶೋರ್! ಬಿಹಾರ, ಪಂಜಾಬ್ ನಲ್ಲೂ ನಡೆದಿತ್ತು ಪ್ರಶಾಂತ್ ಕಿಶೋರ್ ಜಾದೂ! ಉತ್ತರಪ್ರದೇಶದಲ್ಲಿ "ಕೈ' ಕೊಟ್ಟಿದ್ದ ಪ್ರಶಾಂತ್ ಕುಮಾರ್ ಯೋಜನೆ! ಯಾವುದೇ ರಾಜಕೀಯ ಪಕ್ಷ, ವ್ಯಕ್ತಿ ಪರ "ಪಿಕೆ' ಕ್ಯಾಂಪೇನ್ ಇಲ್ಲ

ನವದೆಹಲಿ(ಸೆ.10): ನರೇಂದ್ರ ಮೋದಿ ಓರ್ವ ಚಾಯವಾಲಾ, ಅವರಿಂದ ದೇಶ ಆಳಲು ಸಾಧ್ಯನಾ?. ಇದು ೨೦೧೪ ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕುರಿತು ವ್ಯಂಗ್ಯವಾಡಿದ್ದ ಪರಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಗ ಬಿಜೆಪಿ ಪಾಳೆಯದಲ್ಲಿದ್ದ ದೇಶದ ಅತ್ಯಂತ ಪ್ರತಿಭಾವಂತ ಚುನಾವಣಾ ನೀತಿ ನಿರೂಪಕ ಪ್ರಶಾಂತ್ ಕಿಶೋರ್, ಅಯ್ಯರ್ ಹೇಳಿಕೆಯನ್ನೇ ಮುಂದೆ ಮಾಡಿ ಬಿಜೆಪಿ ಇಡೀ ದೇಶದಲ್ಲಿ "ಚಾಯ್ ಪೇ ಚರ್ಚಾ' ಆಯೋಜಿಸುವಂತೆ ಯೋಜನೆ ರೂಪಿಸಿದರು.

೨೦೧೪ ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವುದರಲ್ಲಿ, ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವದರಲ್ಲಿ ಐಪ್ಯಾಕ್ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.

ದೇಶದ ರಾಜಕೀಯ ಪಡೆಸಾಲೆಯಲ್ಲಿ ಪಿಕೆ ಎಂದೇ ಜನಪ್ರಿಯತೆಗಳಿಸಿದ ಪ್ರಶಾಂತ್ ಕಿಶೋರ್, ಮುಂದೆ ಬಿಹಾರದಲ್ಲಿ ನಿತೀಶ್ ಕುಮಾರ್, ಪಂಜಾಬ್ ನಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆದರೆ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪರ ಕ್ಯಾಂಪೇನ್ ಮಾಡಿದರೂ ಪಿಕೆ ಮೊದಲ ಬಾರಿಗೆ ವಿಫಲತೆ ಕಂಡಿದ್ದರು.

ಇನ್ನೇನು ಲೋಕಸಭೆ ಚುನಾವಣೆ ಸಮೀಪದಲ್ಲೇ ಇದೆ. ೨೦೧೯ ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಶಾಂತ್ ಕಿಶೋರ್ ಯಾರ ಪರವಾಗಿ ಚುನಾವಣೆ ಅಖಾಡಕ್ಕೆ ಇಳಿಯಲಿದ್ದಾರೆ ಎಂಬುದೇ ಸದ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ ಪ್ರಶಾಂತ್ ಕಿಶೋರ್ ಜೆಡಿಯು ಪಕ್ಷ ಸೇರಿ ತಾವೇ ಖುದ್ದು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಆದರೆ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಪ್ರಶಾಂತ್ ಕಿಶೊರ್, ತಾವು ಯಾವುದೇ ರಾಜಕೀಯ ಪಕ್ಷ ಸೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ೨೦೧೯ರಲ್ಲಿ ಯಾವುದೇ ರಾಜಕೀಯ ಪಕ್ಷದ ಪರ ಅಥವಾ ಯಾವುದೇ ವ್ಯಕ್ತಿಯ ಪರವೂ ಚುನಾವಣೆ ನೀತಿ ನಿರೂಪಿಸುವುದಿಲ್ಲ ಎಂದು ಪಿಕೆ ಘೋಷಿಸಿದ್ದಾರೆ.

೨೦೧೯ ರಲ್ಲಿ ಪ್ರಶಾಂತ್ ಕಿಶೋರ್ ಅವರ ಐಪ್ಯಾಕ್ ಸ್ವತಂತ್ರವಾಗಿ ಕೆಲಸ ಮಾಡಲಿದೆ ಎನ್ನಲಾಗಿದ್ದು, ಯಾವುದೇ ರಾಜಕೀಯ ಪಕ್ಷಗಳ ಪರ ಕೆಲಸ ಮಾಡದಿರಲು ನಿರ್ಧರಿಸಿದೆ.