ಸಂಪುಟ ರಚನೆ ನಂತರ ‘ಹೊಸ ಮಿಷನ್’ ; ಬಿಜೆಪಿ ಘೋಷಣೆ
ಕರ್ನಾಟಕದ ರಾಜಕಾರಣದ ಬೆಳವಣಿಗೆಗಳು ಉಳಿದ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತಿವೆ. ಮಧ್ಯಪ್ರದೇಶದಲ್ಲೂ ರಾಜಕೀಯ ಬದಲಾವಣೆ ಸೂಚನೆಗಳು ಸಿಗುತ್ತಿವೆ.
ಭೂಪಾಲ್ [ಜು. 28] ಕರ್ನಾಟಕದಲ್ಲಿ ಸಂಪುಟ ರಚನೆ ಮುಗಿದ ಮೇಲೆ ‘ಹೊಸ ಮಿಷನ್’ ಗೆ ಚಾಲನೆ ನೀಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ, ಹೇಳಿದ್ದಾರೆ.
ಮಧ್ಯ ಪ್ರದೇಶದ ಕಾಂಗ್ರೆಸ್ ಆಡಳಿತದ ಬಗ್ಗೆ ಮಾತನಾಡಿ, ಕಮಲ್ ನಾಥ್ ನೇತೃತ್ವದ ಸರ್ಕಾರವನ್ನು ಬೀಳಿಸುವುದು ನಮ್ಮ ಮುಂದಿರುವ ಉದ್ದೇಶ ಖಂಡಿತ ಅಲ್ಲ. ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಅನಿಶ್ಚಿತತೆ ಮತ್ತು ಗೊಂದಲದಲ್ಲಿದ್ದಾರೆ. ಕರ್ನಾಟಕದಲ್ಲಿ ಸಂಪುಟ ರಚನೆ ಬಳಿಕ ಹೊಸ ಮಿಷನ್ ಆರಂಭಿಸಲಾಗುವುದು ಎಂದರು.
ಇಲ್ಲಿನ ಕಾಂಗ್ರೆಸ್ ಶಾಸಕರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಕಾಂಗ್ರೆಸ್ ಸರಕಾರಗಳು ಅವರ ಕೆಟ್ಟ ನೀತಿಯಿಂದಲೇ ಬಿದ್ದುಹೋಗುತ್ತಿವೆ ಎಂದರು. ಕೆಲ ದಿನಗಳ ಹಿಂದೆ ಇಬ್ಬರು ಬಿಜೆಪಿ ಶಾಸಕರು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪರವಾಗಿ ನಿಂತು ಮಸೂದೆಯೊಂದರ ಪರ ವೋಟ್ ಮಾಡಿದ್ದರು.