ಬಿಜೆಪಿ ಭ್ರಷ್ಟಾಚಾರ, ಸಿದ್ದು ಸಾಧನೆ ತೂಗಲು ವಿಶಿಷ್ಟ ಪರಿಕಲ್ಪನೆ ಸಿದ್ಧ

ಬೆಂಗಳೂರು: ಬಿಜೆಪಿಯ ಸುಳ್ಳು ಪ್ರಚಾರ ಹಾಗೂ ಗುಪ್ತ ಕಾರ್ಯಸೂಚಿಗಳನ್ನು ಬೂತ್‌ಮಟ್ಟದ ಕಾರ್ಯಕರ್ತರು ಬಯಲು ಮಾಡಲಿದ್ದಾರೆ. ಬಿಜೆಪಿಯ ಸುಳ್ಳುಗಳಿಗೆ ತಡೆಗೋಡೆಯಾಗಿ ನಿಂತು ಸುಳ್ಳಿನ ಕಂತೆ ಕರಗಿಸಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಚುನಾವಣೆ ಗೆಲ್ಲಲು ಚುನಾವಣಾ ಪ್ರಚಾರದ ಸಂಪೂರ್ಣ ರಣತಂತ್ರ ಸಿದ್ಧ ಮಾಡಿಕೊಂಡಿದ್ದೇವೆ.

‘ಅಭಿವೃದ್ಧಿ ಶೀಲ ಹಾಗೂ ಶಕ್ತಿಶಾಲಿ ನವ ಕರ್ನಾಟಕ’ ನಿರ್ಮಾಣಕ್ಕೆ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್’ನ್ನು ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯ ಭ್ರಷ್ಟಾಚಾರ ಹಾಗೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಗಳನ್ನು ತಕ್ಕಡಿಯಲ್ಲಿ ತೂಗಿ ತೋರಿಸುತ್ತೇವೆ. ಇದಕ್ಕಾಗಿ ವಿಶಿಷ್ಟ ಪರಿಕಲ್ಪನೆ ಸಿದ್ಧಮಾಡಿಕೊಂಡಿದ್ದೇವೆ ಎಂದರು.

ಪ್ರತಿ ಕ್ಷೇತ್ರದಲ್ಲೂ ಸರ್ಕಾರದ ಸಾಧನೆ ಜತೆಗೆ ಸ್ಥಳೀಯ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಪ್ರತಿ ಕ್ಷೇತ್ರಕ್ಕೂ ಒಂದರಿಂದ ಎರಡು ಸಾವಿರ ಕೋಟಿ ರು. ಗಳ ಅನುದಾನ ನೀಡಿ ಕಾರ್ಯಕ್ರಮ ನೀಡಿದ್ದೇವೆ. ಅಂಕಿ-ಅಂಶಗಳ ಸಮೇತ ಜನರ ಮುಂದೆ ಹೋಗಿ ಕೆಲಸಕ್ಕೆ ಪ್ರತಿಫಲ ಕೇಳುತ್ತೇವೆ ಎಂದು ಹೇಳಿದರು.