ಕಾವೇರಿ ಮಧ್ಯಸ್ತಿಕೆಗೆ ಪ್ರಧಾನಿ ಯಾಕೆ ಮೌನ ?
ಬೆಂಗಳೂರು (ಸೆ.19): ಕಳೆದ ಕೆಲ ದಿನಗಳಿಂದ ಕಾವೇರಿ ಪ್ರತಿಭಟನೆ, ಬಂದ್ ನಡೆಯುತ್ತಿದೆ. ಮಳೆ ಇಲ್ಲದೇ ಕುಡಿಯಲು, ಕೃಷಿಗೆ ನೀರಿಲ್ಲದೇ ಕರ್ನಾಟಕದ ಜನರು ಪರದಾಡುತ್ತಿದ್ದಾರೆ. ಇದಕ್ಕೆ ಬರೆ ಎಳೆದಂತೆ ಸುಪ್ರೀಂ ತೀರ್ಪು ಬಂದಿದೆ. ಸಾಕಷ್ಟು ನಿರೀಕ್ಷೆಯಿರಿಸಿದ್ದ ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶ ಕೂಡ ಇಂದು ಹೊರ ಬಿದ್ದಿದೆ. ಇದರಲ್ಲೂ ಕೂಡ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಇಷ್ಟಕ್ಕೆಲ್ಲಾ ಕಾರಣವಾಗಿರುವ ಕಾವೇರಿ ಜಲವಿವಾದದ ಹಿನ್ನೆಲೆಯನ್ನು ಹಾಗೂ ಈ ಬಗ್ಗೆ ಪ್ರಧಾನಿ ಮೋದಿ ಮೌನದ ಹಿಂದಿರುವ ಕಾರಣವನ್ನು ಒಮ್ಮೆ ನೋಡೋಣ.
ಮೊದಲ ಮಧ್ಯಸ್ಥಿಕೆ
ಕಾವೇರಿ ಮೊದಲ ಮಧ್ಯಸ್ಥಿಕೆ ರಾಜಕೀಯ 1996ಲ್ಲಿ ದೇವೇಗೌಡರು ಸಿಎಂ ಆಗಿದ್ದಾಗ ನಡೆಯಿತು. ಪ್ರಧಾನಿ ನರಸಿಂಹರಾವ್ ಸಮ್ಮುಖದಲ್ಲಿ 6 ಟಿಎಂಸಿ ನೀರು ಬಿಡುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ರಾಜ್ಯ ಸರ್ಕಾರ ಕ್ಕೆ ಸೂಚನೆ ನೀಡಿತ್ತು . ಇದಕ್ಕೆ ರಾಜ್ಯ ಸರ್ಕಾರವೂ ಒಪ್ಪಿತ್ತು.
2ನೇ ಮಧ್ಯಸ್ಥಿಕೆ
2ನೇ ಮಧ್ಯಸ್ಥಿಕೆ ರಾಜಕೀಯ 2002ರಲ್ಲಿ ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ನಡೆದಿತ್ತು. ಸುಪ್ರೀಂ ಕೋರ್ಟ್ 1.25 ಟಿಎಂಸಿ ನೀರು ಬಿಡಲು ಸೂಚಿಸಿತ್ತು. ಪ್ರಧಾನಿ ವಾಜಪೇಯಿ ನೇತೃತ್ವದಲ್ಲಿ ಸಂಧಾನ ಮಾತುಕತೆಯಾಯಿತು. ಇದಕ್ಕೆ ಉಭಯ ರಾಜ್ಯಗಳು ಒಪ್ಪಲಿಲ್ಲ. ಕರ್ನಾಟಕದಲ್ಲಿ ಪ್ರತಿಭಟನೆ, ಘರ್ಷಣೆ ನಡೆಯಿತು.
3ನೇ ಮಧ್ಯಸ್ಥಿಕೆ
3ನೇ ಮಧ್ಯಸ್ಥಿಕೆ ರಾಜಕೀಯ ನಡೆದಿದ್ದು 2012ರಲ್ಲಿ. ಪ್ರಧಾನಿ ಮನಮೋಹನ್ ಸಿಂಗ್ ಸಮ್ಮುಖದಲ್ಲಿ ರಾಜ್ಯದ ಸಿಎಂ ಜಗದೀಶ್ ಶೆಟ್ಟರ್-ತಮಿಳುನಾಡು ಸಿಎಂ ಜಯಲಲಿತಾ ಭಾಗಿಯಾಗಿದ್ದರು.
ಸುಪ್ರೀಂ ಕೋರ್ಟ್ 10000 ಕ್ಯುಸೆಕ್ ನೀರು ಬಿಡುಗಡೆಗೆ ಸೂಚಿಸಿತ್ತು. ಪ್ರಧಾನಿ ಸಂಧಾನದಲ್ಲಿ ನಿತ್ಯ 9000 ಕ್ಯುಸೆಕ್ ನೀರು ಬಿಡಲು ಸಿಎಂ ಜಗದೀಶ್ ಶೆಟ್ಟರ್ ಒಪ್ಪಿದ್ದರು.
ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿ ಮೌನ - ಯಾಕೆ?
1. ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಲು ಇದುವರೆಗೂ ಸೂಚಿಸಿಲ್ಲ. ಹೀಗಾಗಿ ಹಿಂಜರಿಕೆ ಇರಬಹುದು.
2. ಮಧ್ಯಸ್ಥಿಕೆ ವಹಿಸಿದ್ರೆ 2 ರಾಜ್ಯಗಳ ಪೈಕಿ ಒಂದು ರಾಜ್ಯಕ್ಕೆ ಅತೃಪ್ತಿ ಆಗಬಹುದು. ಇದು ಮುಂದೆ ರಾಜಕೀಯ ಮುಳುಗು ಆಗುವ ಭೀತಿ ಕಾಡುತ್ತಿರಬಹುದು.
3. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಮುಗಿಸಲು ಇದೊಂದು ಒಳ್ಳೆಯ ಅವಕಾಶ ಇರಬಹುದು.
4. ಸುಪ್ರೀಂ ಕೋರ್ಟ್ ಅಂತಿಮ ಆದೇಶಕ್ಕೆ ಕಾಯುತ್ತಿರಬಹುದು. ಅಂತಿಮ ಆದೇಶ ನೋಡಿಕೊಂಡು ನಿರ್ಧರಿಸುವ ಸಾಧ್ಯತೆಯೂ ಇರಬಹುದು.
5. ಈ ಹಿಂದೆ ಪ್ರಧಾನಿಗಳಾಗಿದ್ದವರು ಮಧ್ಯಸ್ಥಿಕೆ ವಹಿಸಿ ಮುಖಂಭಂಗ ಅನುಭವಿಸಿದ ಪ್ರಸಂಗಗಳೂ ಕಾರಣ ಇರಬಹುದು.
6. ಒಂದೊಮ್ಮೆ ಮಧ್ಯಸ್ಥಿಕೆ ವಹಿಸಿದ್ರೂ ತಮ್ಮ ಸಲಹೆ-ಸೂಚನೆಗಳನ್ನು ಎರಡೂ ರಾಜ್ಯಗಳೂ ಒಪ್ಪದಿರಬಹುದೆಂಬ ಲೆಕ್ಕಾಚಾರ.