ಮಹಾ ಸಚಿವನ ಕನ್ನಡ ಪ್ರೀತಿಗೆ ತವರಿನಲ್ಲಿ ಕಿಡಿ
ಇತ್ತೀಚೆಗಷ್ಟೇ ದೇವಸ್ಥಾನ ಉದ್ಘಾಟನೆಗಾಗಿ ಬೆಳಗಾವಿಯ ಗೋಕಾಕ್’ಗೆ ಭೇಟಿ ನೀಡಿ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂದು ಹಾಡಿದ್ದ ಮಹಾರಾಷ್ಟ್ರದ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ಅವರ ಕ್ಷಮೆಗೆ ಪ್ರತಿಪಕ್ಷಗಳು ಆಗ್ರಹಿಸಿವೆ.
ಮುಂಬೈ: ಇತ್ತೀಚೆಗಷ್ಟೇ ದೇವಸ್ಥಾನ ಉದ್ಘಾಟನೆಗಾಗಿ ಬೆಳಗಾವಿಯ ಗೋಕಾಕ್’ಗೆ ಭೇಟಿ ನೀಡಿ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂದು ಹಾಡಿದ್ದ ಮಹಾರಾಷ್ಟ್ರದ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ಅವರ ಕ್ಷಮೆಗೆ ಪ್ರತಿಪಕ್ಷಗಳು ಆಗ್ರಹಿಸಿವೆ.
ಈ ಬಗ್ಗೆ ಮಂಗಳವಾರ ಟ್ವೀಟ್ ಸಮರ ಸಾರಿರುವ ಮಹಾರಾಷ್ಟ್ರ ಪ್ರತಿಪಕ್ಷ ನಾಯಕ ಧನಂಜಯ್ ಮುಂಡೆ, ‘ಮಹಾರಾಷ್ಟ್ರ ಬಿಜೆಪಿ ನಾಯಕರಿಗೆ ಗುಜರಾತಿನ ಕುರಿತು ಇರುವ ಪ್ರೀತಿ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ಆದರೆ, ಇದೀಗ ಬಿಜೆಪಿ ನಾಯಕರಿಗೆ ಕನ್ನಡ ಪ್ರೀತಿಯೂ ಶುರುವಾಗಿದೆ. ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತನಾಡಿದ್ದಷ್ಟೇ ಅಲ್ಲದೆ, ಕನ್ನಡ ಗೀತೆ ಹಾಡಿದ ಚಂದ್ರಕಾಂತ್ ಪಾಟೀಲ್ ರಾಜ್ಯದ ಗಡಿಯಲ್ಲಿ ವಾಸಿಸುವ ಮರಾಠಿಗರ ಬೆನ್ನಿಗೆ ಚೂರಿ ಹಾಕಿದ್ದಾರೆ.
ಅವರು ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕು. ಜತೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಧ್ವನಿಗೂಡಿಸಿರುವ ಮಹಾರಾಷ್ಟ್ರ ಮಾಜಿ ಡಿಸಿಎಂ ಅಜಿತ್ ಪವಾರ್ ಅವರೂ ಕರ್ನಾಟಕದಲ್ಲಿ ಮಹಾರಾಷ್ಟ್ರಕ್ಕೆ ಅವಮಾನಿಸಿದ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.