ಗೋವಾ ಸಿಎಂ ಮನೋಹರ್ ಪರ್ರಿಕರ್ ನಿಧನದಿಂದ ಮುಖ್ಯಮಂತ್ರಿ ಸ್ಥಾನ ತೆರವಾಗಿದ್ದು, ಮುಂದಿನ ಸಿಎಂ ಯಾರಾಗಲಿದ್ದಾರೆ ಎನ್ನುವ ವಿಚಾರ ಚರ್ಚೆಯಾಗುತ್ತಿದೆ.

ಪಣಜಿ :  ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್‌ ನಿಧನದಿಂದ ಸರ್ಕಾರದಲ್ಲಿ ಶೂನ್ಯ ವಾತಾವರಣ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಹಲವರ ಕಣ್ಣು ಬಿದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೋವಾ ವಿಧಾನಸಭೆ ಅಧ್ಯಕ್ಷ ಪ್ರಮೋದ್‌ ಸಾವಂತ್‌, ವಿಧಾನಸಭೆ ಉಪಸಭಾಧ್ಯಕ್ಷ ಮೈಕೆಲ್‌ ಲೋಬೋ ಹಾಗೂ ಸಚಿವ ವಿಶ್ವಜಿತ್‌ ರಾಣೆ ಅವರು ಬಿಜೆಪಿಯಲ್ಲಿ ರೇಸ್‌ನಲ್ಲಿದ್ದಾರೆ ಎನ್ನಲಾಗಿದೆ. ಆದರೆ ಈ ಮೂವರಿಗೂ ಎಲ್ಲ ಶಾಸಕರು ಸರ್ವಾನುಮತದಿಂದ ಅಂಗೀಕಾರ ಮುದ್ರೆ ಒತ್ತುವುದು ಅನುಮಾನ. ಅದರಲ್ಲೂ ವಿಶ್ವಜಿತ್‌ ರಾಣೆ ಅವರು ‘ರಫೇಲ್‌ ದಾಖಲೆ ಪತ್ರಗಳು ಪರ್ರಿರಕ್‌ ಅವರ ರೂಮಿನ ಕಪಾಟಿನಲ್ಲಿವೆ’ ಎಂದು ನೀಡಿದ್ದರೆನ್ನಲಾದ ಹೇಳಿಕೆಯನ್ನು ಕಾಂಗ್ರೆಸ್‌ ಪಕ್ಷವು ಆಡಿಯೋ ಟೇಪ್‌ ಮೂಲಕ ಬಿಡುಗಡೆ ಮಾಡಿದ ಬಳಿಕ ಅವರು ಹಿನ್ನಡೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ‘ಪರ್ರಿಕರ್‌ ನಂತರದ ಅತಿ ಹಿರಿಯ ವ್ಯಕ್ತಿ ನಾನು’ ಎಂದು ಹೇಳುತ್ತ ಅನೇಕ ದಿನಗಳಿಂದ ಓಡಾಡಿಕೊಂಡಿದ್ದವರು ಮಿತ್ರಪಕ್ಷ ಎಂಜಿಪಿಗೆ ಸೇರಿದ್ದಾರೆ ಎನ್ನಲಾದ ಸುದಿನ್‌ (ರಾಮಕೃಷ್ಣ) ಧಾವಳೀಕರ್‌ ಅವರು. ಹೀಗಾಗಿ ಈಗ ಸಿಕ್ಕ ಸಂದರ್ಭವನ್ನು ಅವರು ಬಳಸಿಕೊಳ್ಳಲು ಮುಂದಾಗುವುದು ಖಚಿತ.

ಆದರೆ ಧಾವಳೀಕರ್‌ ಅವರಿಗೂ ಗೋವಾ ಫಾರ್ವರ್ಡ್‌ ಪಕ್ಷದ ಮುಖ್ಯಸ್ಥರಾದ ‘ಮಹತ್ವಾಕಾಂಕ್ಷಿ ರಾಜಕಾರಣಿ’ ವಿಜಯ ಸರದೇಸಾಯಿ ಅವರಿಗೂ ಎಣ್ಣೆ-ಸೀಗೆಕಾಯಿ ಸಂಬಂಧವಿದೆ. ಹೀಗಾಗಿ ಅವರು ಸುದಿನ್‌ ಧಾವಳೀಕರ್‌ ಅವರಿಗೆ ಸರದೇಸಾಯಿ ಅಡ್ಡಗಾಲಾಗುವುದು ಗ್ಯಾರಂಟಿ.