ಬೆಂಗಳೂರು ನಗರದ 28 ಕ್ಷೇತ್ರಗಳ ಸಂಭಾವ್ಯರ ಪಟ್ಟಿಗೆ ಕಸರತ್ತು
ನಗರದಲ್ಲಿ ಚುನಾವಣೆಯಲ್ಲಿ ಗೆಲ್ಲಲು ವಿಶೇಷ ಕಾರ್ಯಯೋಜನೆ ಸಿದ್ಧಪಡಿಸಿಕೊಂಡಿರುವ ರಾಜ್ಯ ಕಾಂಗ್ರೆಸ್ 28 ಕ್ಷೇತ್ರಗಳಿಗೂ ಶೀಘ್ರ ಅಭ್ಯರ್ಥಿ ಆಯ್ಕೆ ಮಾಡಲು ಗುರುವಾರ ತೀವ್ರ ಕಸರತ್ತು ನಡೆಸಿತು.
ಬೆಂಗಳೂರು : ನಗರದಲ್ಲಿ ಚುನಾವಣೆಯಲ್ಲಿ ಗೆಲ್ಲಲು ವಿಶೇಷ ಕಾರ್ಯಯೋಜನೆ ಸಿದ್ಧಪಡಿಸಿಕೊಂಡಿರುವ ರಾಜ್ಯ ಕಾಂಗ್ರೆಸ್ 28 ಕ್ಷೇತ್ರಗಳಿಗೂ ಶೀಘ್ರ ಅಭ್ಯರ್ಥಿ ಆಯ್ಕೆ ಮಾಡಲು ಗುರುವಾರ ತೀವ್ರ ಕಸರತ್ತು ನಡೆಸಿತು.ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೆ ಸಭೆ ನಡೆಸಿದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಗೆಲುವೇ ಮಾನದಂಡ ವಾಗಿಟ್ಟು ಕೊಂಡು ಆಯ್ದ ಹೆಸರುಗಳನ್ನು ಎಐಸಿಸಿ ಸ್ಕ್ರೀನಿಂಗ್ ಸಮಿತಿಗೆ ಶಿಫಾರಸು ಮಾಡಲು ನಿರ್ಧರಿಸಿದರು.
ಶಿವಾಜಿ ನಗರ ಕ್ಷೇತ್ರಕ್ಕೆ ರೋಷನ್ ಬೇಗ್, ಶಾಂತಿನಗರ ಕ್ಷೇತ್ರಕ್ಕೆ ಎನ್.ಎ. ಹ್ಯಾರಿಸ್, ಸಿ.ವಿ. ರಾಮನ್ ನಗರ ಕ್ಷೇತ್ರಕ್ಕೆ ಎಚ್.ಸಿ.ಮಹಾದೇವಪ್ಪ ಅಥವಾ ಪಿ.ರಮೇಶ್, ಚಾಮರಾಜಪೇಟೆ ಕ್ಷೇತ್ರಕ್ಕೆ ಜಮೀರ್ ಅಹಮದ್ ಖಾನ್, ಪುಲಕೇಶಿ ನಗರ ಕ್ಷೇತ್ರಕ್ಕೆ ಅಖಂಡ ಶ್ರೀನಿವಾಸ ಮೂರ್ತಿ, ಪ್ರಸನ್ನ ಕುಮಾರ್, ಗಾಂಧಿ ನಗರ ಕ್ಷೇತ್ರಕ್ಕೆ ದಿನೇಶ್ ಗುಂಡೂರಾವ್, ಬ್ಯಾಟರಾಯನಪುರ ಕ್ಷೇತ್ರಕ್ಕೆ ಕೃಷ್ಣಬೈರೇಗೌಡ, ಹೆಬ್ಬಾಳ ಕ್ಷೇತ್ರಕ್ಕೆ ಬೈರತಿ ಸುರೇಶ್, ಬಿಟಿಎಂ ಬಡಾವಣೆಗೆ ರಾಮಲಿಂಗಾರೆಡ್ಡಿ, ಜಯನಗರ ಕ್ಷೇತ್ರಕ್ಕೆ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ, ಗೋವಿಂದ ರಾಜು ನಗರ ಕ್ಷೇತ್ರಕ್ಕೆ ಪ್ರಿಯಾ ಕೃಷ್ಣ, ವಿಜಯನಗರ ಕ್ಷೇತ್ರಕ್ಕೆ ಎಂ.ಕೃಷ್ಣಪ್ಪ, ಸರ್ವಜ್ಞ ನಗರ ಕ್ಷೇತ್ರಕ್ಕೆ ಕೆ.ಜೆ.ಜಾರ್ಜ್, ಕೆ.ಆರ್ ಪುರಂ ಕ್ಷೇತ್ರಕ್ಕೆ ಬೈರತಿ ಬಸವರಾಜ್, ಮಹಾದೇವಪುರ ಕ್ಷೇತ್ರಕ್ಕೆ ಎ.ಸಿ.ಶ್ರೀನಿವಾಸ, ರಾಜಾಜಿನಗರ ಕ್ಷೇತ್ರಕ್ಕೆ ಮಂಜುಳಾ ನಾಯ್ಡು, ಪದ್ಮಾವತಿ, ಮಂಜುನಾಥಗೌಡ ಹೆಸರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಚಿಕ್ಕಪೇಟೆ ಕ್ಷೇತ್ರಕ್ಕೆ ಆರ್.ವಿ.ದೇವರಾಜ್, ಯಲಹಂಕ ಕ್ಷೇತ್ರಕ್ಕೆ ಎಂ. ನಾರಾಯಣಸ್ವಾಮಿ, ಕೇಶವ ರಾಜಣ್ಣ, ಗೋಪಾಲ ಕೃಷ್ಣ, ಯಶವಂತಪುರ ಕ್ಷೇತ್ರಕ್ಕೆ ಎಸ್.ಟಿ.ಸೋಮಶೇಖರ್, ಆರ್.ಆರ್.ನಗರ ಕ್ಷೇತ್ರಕ್ಕೆ ಮುನಿರತ್ನ, ಬಸವನಗುಡಿ ಕ್ಷೇತ್ರಕ್ಕೆ ಎಸ್.ಸಿ.ಸುಧೀಂದ್ರ, ಬಸವನಗುಡಿ ಬೋರೇ ಗೌಡ, ಯು.ಬಿ.ವೆಂಕಟೇಶ್ ಹೆಸರು ಪಟ್ಟಿಯಲ್ಲಿದ್ದು, ಆದಷ್ಟು ಬೇಗ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಮೂರಕ್ಕಿಂತ ಹೆಚ್ಚು ಆಕಾಂಕ್ಷಿಗಳು: ಜತೆಗೆ ಮಲ್ಲೇಶ್ವರಂ, ಬೆಂಗಳೂರು ದಕ್ಷಿಣ, ದಾಸರಹಳ್ಳಿ, ಮಹಾಲಕ್ಷ್ಮೀ ಲೇಔಟ್, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೂ ಮೂವರಿಗಿಂತ ಹೆಚ್ಚು ಆಕಾಂಕ್ಷಿಗಳು ಇರುವುದರಿಂದ ಸ್ಕ್ರೀನಿಂಗ್ ಸಮಿತಿ ಮುಂದೆಯೇ ಅಂತಿಮಗೊಳಿಸಲು ಉದ್ದೇಶಿಸಲಾಗಿದೆ.