ರಾಜ್ಯ ಸರ್ಕಾರಕ್ಕೆ ಅಂಟಿತೇ ಲೋಕಾ ಕಳಂಕ..?
ಲೋಕಾಯುಕ್ತವನ್ನು ರಾಜ್ಯ ಸರ್ಕಾರ ಹಲ್ಲಿಲ್ಲದ ಹಾವು ಮಾಡಿದೆ - ಶೇ. 21
ಭ್ರಷ್ಟಾಚಾರ ಮುಚ್ಚಿಕೊಳ್ಳಲು ದುರ್ಬಲ ಮಾಡಿದ್ದರೂ ಮಾಡಿರಬಹುದು – ಶೇ.14
ಖಂಡಿತಾ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಕೆಲಸ ಮಾಡಿಲ್ಲ – ಶೇ. 18
ಸ್ವಾರ್ಥಕ್ಕಾಗಿ ಲೋಕಾಯುಕ್ತವನ್ನು ಸರ್ಕಾರ ದುರ್ಬಲ ಮಾಡಿದೆಯೋ ಇಲ್ಲವೋ ಗೊತ್ತಿಲ್ಲ – ಶೇ. 19
ಬೆಂಗಳೂರು(ಡಿ.7): ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆ ದೇಶಾದ್ಯಂತ ಗಮನಸೆಳೆದಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಂಬ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಿತು. ಇದು ಲೋಕಾಯುಕ್ತದ ಶಕ್ತಿ ಕುಂದಿಸುವ ಯತ್ನ ಎಂಬ ಟೀಕೆ, ಆಕ್ರೋಶ ಆ ವೇಳೆ ವ್ಯಕ್ತವಾಗಿತ್ತು.
ಜನಸಾಮಾನ್ಯರಲ್ಲಿ ಈಗಲೂ ಅದೇ ಭಾವನೆ ಇದೆ ಎಂಬ ಅಂಶ ಸಮೀಕ್ಷೆಯಿಂದ ತಿಳಿದುಬಂದಿದೆ. ಲೋಕಾ ಯುಕ್ತವನ್ನು ಸರ್ಕಾರ ದುರ್ಬಲಗೊಳಿಸಿದೆ,ದುರ್ಬಲ ಮಾಡಿರಬಹುದು ಎಂದು ಹೇಳಿದವರ ಸಂಖ್ಯೆ ಶೇ.50ಕ್ಕಿಂತ ಹೆಚ್ಚಿರುವುದು ಗಮನಾರ್ಹ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಈ ಭಾವನೆ ಹೆಚ್ಚಾಗಿದೆ. ವಿವಿಧ ಜಾತಿಗಳ ಪೈಕಿ ಲಿಂಗಾಯತರು, ವಿವಿಧ ಪ್ರಾಂತ್ಯಗಳ ಪೈಕಿ ಲಿಂಗಾಯತ ಬಾಹುಳ್ಯದ ಮುಂಬೈ ಕರ್ನಾಟಕದಲ್ಲಿ ಸರ್ಕಾರ ಲೋಕಾಯುಕ್ತವನ್ನು ದುರ್ಬಲ ಮಾಡಿರಬಹುದು ಎಂಬ ಅಭಿಪ್ರಾಯ ಗಟ್ಟಿಯಾಗಿ ಕೇಳಿಬಂದಿದೆ.