ಉಪರಾಷ್ಟ್ರಪತಿಯವರನ್ನು ಮೋಸಗೊಳಿಸಿದ ಜಾಹೀರಾತು ಯಾವುದು ಗೊತ್ತೆ ?
ಮೋಸಗೊಳಿಸುವ ಜಾಹೀರಾತಿನ ಬಗ್ಗೆ ಗ್ರಾಹಕ ವ್ಯವಹಾರ ಇಲಾಖೆಗೆ ದೂರು ನೀಡಿದಾಗ ಆ ಜಾಹೀರಾತು ಅಮೆರಿಕಾ ಮೂಲದ್ದು ಎಂದು ತಿಳಿಯಿತು.
ನವದೆಹಲಿ(ಡಿ.30): ಈಗ ಎಲ್ಲವೂ ಜಾಹಿರಾತುಮಯ. ಜಾಹೀರಾತು ಇಲ್ಲದಿದ್ದರೆ ಏನು ಇಲ್ಲ. ಯಾವುದೇ ವ್ಯವಹಾರ ಮಾಡಬೇಕಾದರೂ ಜಾಹೀರಾತು ನೋಡಿಯೇ ಮುಂದುವರಿಯುವ ಪರಿಸ್ಥಿತಿ ಇಂದಿನ ಪೀಳಿಗೆಯದಾಗಿದೆ. ಆ ಮಟ್ಟಿಗೆ ಆಡ್ ಎಲ್ಲವನ್ನು ಆಕ್ರಮಿಸಿಕೊಂಡಿದೆ.
ಆದರೆ ಜಾಹೀರಾತಿನ ಮೂಲಕ ಮೋಸಗೊಳಿಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಬಡವರು,ಶ್ರೀಮಂತರು ಸೇರಿದಂತೆ ಎಲ್ಲ ರೀತಿಯ ಜನರು ಬಣ್ಣಬಣ್ಣದ ಮಾತು, ದೃಶ್ಯ ಮುಂತಾದವುಗಳ ಮೂಲಕ ವಂಚನೆಗೊಳಗಾಗುತ್ತಿದ್ದಾರೆ. ಈ ಸಾಲಿನಲ್ಲಿ ಉಪರಾಷ್ಟ್ರಪತಿಯವರು ಸೇರಿರುವುದು ಅಚ್ಚರಿಯೇ ಸರಿ.
ತೂಕ ಕಡಿಮೆಗೊಳಿಸುವ ಜಾಹೀರಾತು ವೆಂಕಯ್ಯ ನಾಯ್ಡು ಅವರನ್ನು ಮೋಸಗೊಳಿಸಿತ್ತು
ಮೋಸ ಹೋದ ಪ್ರಸಂಗವನ್ನು ಸ್ವತಃ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೇ ರಾಜ್ಯಸಭೆಯಲ್ಲಿ ಬಹಿರಂಗಗೊಳಿಸಿದರು. ಸದಸ್ಯರಿಂದ ಸುಳ್ಳು ಜಾಹೀರಾತುಗಳ ಬಗ್ಗೆ ಪ್ರಸ್ತಾಪವಾದಾಗ ತಾವು ತೂಕ ಕಡಿಮೆಗೊಳಿಸುವ ಸುಳ್ಳು ಜಾಹೀರಾತನ್ನು ನಂಬಿ 28 ದಿನಗಳಲ್ಲಿ ದೇಹದ ತೂಕವನ್ನು ಕಡಿಮೆಗೊಳಿಸುವುದಕ್ಕಾಗಿ 1230 ರೂ. ನೀಡಿ ಗುಳಿಗೆಗಳನ್ನು ಖರೀದಿಸಿದೆ. ಆದರೆ ಜಾಹೀರಾತುದಾರು ಮೂಲ ಔಷಧ ಪಡೆಯಲು ಇನ್ನು ಹೆಚ್ಚಿಗೆ 1 ಸಾವಿರ ರೂ. ನೀಡಿ ಎಂದು ನನ್ನಿಂದ ಪಡೆದುಕೊಂಡರು' ಮೋಸ ಹೋದ ಬಗೆಯನ್ನು ಹೇಳಿಕೊಂಡರು.
ಮೋಸಗೊಳಿಸುವ ಜಾಹೀರಾತಿನ ಬಗ್ಗೆ ಗ್ರಾಹಕ ವ್ಯವಹಾರ ಇಲಾಖೆಗೆ ದೂರು ನೀಡಿದಾಗ ಆ ಜಾಹೀರಾತು ಅಮೆರಿಕಾ ಮೂಲದ್ದು ಎಂದು ತಿಳಿಯಿತು. ಸರ್ಕಾರ ರೀತಿ ವಂಚನೆಗೊಳಿಸುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.