ಸಂವಿಧಾನದ ಬಗ್ಗೆ ಈಶ್ವರಪ್ಪನವರಿಗೆ ತಿಳಿದಿರುವಷ್ಟು ನನಗೆ ಗೊತ್ತಿಲ್ಲ: ಮಾಜಿ ಸ್ಪೀಕರ್ ಟಾಂಗ್| ಸುಪ್ರೀಂ ತೀರ್ಪಿಗಾಗಿ ಕಾದಿದ್ದೇನೆ: ರಮೇಶ್ ಕುಮಾರ್

ಬೆಂಗಳೂರು[ಆ.03]: ಉಪ ಚುನಾವಣೆ ವಿಚಾರವಾಗಿ ಈಗಲೇ ಏನೂ ಹೇಳಲಾಗದು. ಅನರ್ಹಗೊಂಡ ಶಾಸಕರಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಏನು ತೀರ್ಪು ನೀಡುತ್ತೆ ಕಾದು ನೋಡೋಣ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿಕ್ಕಬಳ್ಳಾಪುರ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು, ಅನರ್ಹ ಶಾಸಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಾಗಾಗಿ ನ್ಯಾಯಾಲಯ ತೀರ್ಪು ಏನಾಗಲಿದೆ ಎಂಬುದು ನೋಡಬೇಕು, ಚುನಾವಣಾ ಆಯೋಗ ಉಪ ಚುನಾವಣೆ ಘೋಷಣೆ ಮಾಡಬೇಕು. ಆ ನಂತರ ಚಿಕ್ಕಬಳ್ಳಾಪುರ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತು ಮಾತನಾಡಬಹುದು ಎಂದು ಹೇಳಿದರು.

ಈ ಮಧ್ಯೆ, ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ನಿರ್ಧಾರ ಸಂವಿಧಾನ ಬಾಹಿರ ಎಂಬ ಬಿಜೆಪಿ ಮುಖಂಡ ಈಶ್ವರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ಸಂವಿಧಾನದ ಬಗ್ಗೆ ಈಶ್ವರಪ್ಪ ನವರಿಗೆ ತಿಳಿದಿರುವಷ್ಟು ನನಗೆ ಗೊತ್ತಿಲ್ಲ.

ಶಾಸಕರು ಆ ರೀತಿ ನಡೆದುಕೊಂಡರು, ಸಂವಿಧಾನದಲ್ಲಿ ಅವಕಾಶವಿತ್ತು. ಹಾಗಾಗಿ ಆ ಸ್ಥಾನದಲ್ಲಿ ಕುಳಿತು ಅವರನ್ನು ಅನರ್ಹ ಮಾಡಿದ್ದೇನೆ. ಈ ವಿಚಾರ ಈಗ ಚರ್ಚೆ ಮಾಡುವುದು ಸಮಂಜಸವಲ್ಲ ಎಂದರು

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಪ್ರಭಾವಿ ನಾಯಕರಾಗಿದ್ದು, ದೇವರಾಜು ಅರಸು ಅವರ ನಂತರ ಹೆಚ್ಚಿನ ಖ್ಯಾತಿ ಪಡೆದ ಪ್ರಮುಖರಾಗಿದ್ದಾರೆ. ಹಾಗಾಗಿ ಅವರ ನಾಯಕತ್ವದಲ್ಲೇ ಕಾಂಗ್ರೆಸ್ ಸಂಘಟಿಸಲಾಗುವುದು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.