ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠಕ್ಕೆ ಹೋಗಲು ಪ್ರಧಾನಿಗೆ ಪತ್ರ
ಶಾರದೆ ಸರ್ವಜ್ಞ ಪೀಠದ ಪುನರುತ್ಥಾನಕ್ಕಾಗಿ ಹಾಗೂ ಅಲ್ಲಿಗೆ ಪ್ರತಿವರ್ಷ ಭಕ್ತರು ಹೋಗಿಬರಲು ಅವಕಾಶ ಮಾಡಿಕೊಡುವಂತೆ ಶೃಂಗೇರಿ ಮಠದ ಆಡಳಿತಾಧಿಕಾರಿ ಡಾ.ವಿ.ಆರ್. ಗೌರಿಶಂಕರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಶೃಂಗೇರಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದೆ ಸರ್ವಜ್ಞ ಪೀಠದ ಪುನರುತ್ಥಾನಕ್ಕಾಗಿ ಹಾಗೂ ಅಲ್ಲಿಗೆ ಪ್ರತಿವರ್ಷ ಭಕ್ತರು ಹೋಗಿಬರಲು ಅವಕಾಶ ಮಾಡಿಕೊಡುವಂತೆ ಶೃಂಗೇರಿ ಮಠದ ಆಡಳಿತಾಧಿಕಾರಿ ಡಾ.ವಿ.ಆರ್. ಗೌರಿಶಂಕರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಆದಿಗುರು ಶ್ರೀ ಶಂಕರ ಭಗವತ್ಪಾದಾರ್ಯರು ಸನಾತನ ಧರ್ಮದ ಉದ್ಧಾರಕ್ಕಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ಪೀಠ ಸ್ಥಾಪಿಸಿದ್ದು, ಅದರಲ್ಲಿ ಶೃಂಗೇರಿ ಪೀಠ ಮೊದಲ ಪೀಠವಾಗಿದೆ. ಸನಾತನ ಧರ್ಮದ ಪ್ರಚಾರಕ್ಕಾಗಿ ಭರತ ಖಂಡದ ಎಲ್ಲೆಡೆ ಶ್ರೀ ಶಂಕರರು ಸಂಚರಿಸಿ ಕಾಶ್ಮೀರದಲ್ಲಿ ಶ್ರೀ ಶಾರದಾ ಮಂದಿರಕ್ಕೆ ಹೋದಾಗ ಮಂದಿರದಲ್ಲಿ ಸರ್ವಜ್ಞ ಪೀಠವಿತ್ತು.
ಶ್ರೀ ಶಂಕರರು ವಿದ್ವಾಂಸರ ಬಳಿ ವಾದದಲ್ಲಿ ಗೆದ್ದು ಅಲ್ಲಿದ್ದ ಸರ್ವಜ್ಞ ಪೀಠವನ್ನು ಏರಿದ್ದರು ಎಂಬ ಇತಿಹಾಸವೇ ಇದೆ. ಈಗ ಆ ಪೀಠ ಪಾಕ್ ಆಕ್ರಮಿತ ಕಾಶ್ಮಿರದಲ್ಲಿದೆ. ಶ್ರೀ ಶಾರದಾ ಗ್ರಾಮವೆಂದು ಪ್ರಸಿದ್ಧಿ ಪಡೆದಿರುವ ಆ ಸ್ಥಳ ಹಿಂದುಗಳ ಪವಿತ್ರ ಕ್ಷೇತ್ರ. ಇಲ್ಲಿಗೆ ವರ್ಷಕ್ಕೊಮ್ಮೆ ಭಕ್ತರು ಹೋಗಿ ಬರಲು ಅವಕಾಶ ಮಾಡಿಕೊಡಬೇಕು. ಅಲ್ಲಿನ ಸರ್ವಜ್ಞ ಪೀಠದ ಪುನರುತ್ಥಾನಕ್ಕಾಗಿ ಶೃಂಗೇರಿ ಮಠ ಸದಾ ಸಿದ್ಧವಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.