ನಾನು ಮಾಡಿದ ತಪ್ಪನ್ನು ಕ್ಷಮಿಸಿ ಎಂದು ಎಚ್’ಡಿಕೆ ಜನರ ಬಳಿ ಕೇಳಿದ್ದೇಕೆ..?
‘ನಾನು ಹಿಂದೆ ಮಾಡಿರುವ ತಪ್ಪನ್ನು ಮನ್ನಿಸಿ ಈ ಬಾರಿ ನನಗೆ ಐದು ವರ್ಷ ಅಧಿಕಾರ ಕೊಡಿ. ನಾನು ಏನು ಅಂತ ಸಾಬೀತುಪಡಿಸುವೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು : ‘ನಾನು ಹಿಂದೆ ಮಾಡಿರುವ ತಪ್ಪನ್ನು ಮನ್ನಿಸಿ ಈ ಬಾರಿ ನನಗೆ ಐದು ವರ್ಷ ಅಧಿಕಾರ ಕೊಡಿ. ನಾನು ಏನು ಅಂತ ಸಾಬೀತುಪಡಿಸುವೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಭಾನುವಾರ ಇಲ್ಲಿ ತಾಲೂಕು ಜೆಡಿಎಸ್ ಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ 6 ತಿಂಗಳು ಕಾಲಾವಕಾಶ ನೀಡಿ. ಇಡೀ ರಾಜ್ಯದ ಜನತೆ ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಹಾಗೆ ಮಾಡುತ್ತೇನೆ ಎಂದರು.
ಇಸ್ರೇಲ್ ಮಾದರಿಯ ಕೃಷಿಯನ್ನು ರೈತರಿಗೆ ಪರಿಚಯಿಸಿ ಯುವಕರಿಗೆ ಅವರ ಊರಲ್ಲಿಯೇ ಉದ್ಯೋಗ ಸೃಷ್ಟಿಸುತ್ತೇನೆ ಎಂದ ಎಚ್ಡಿಕೆ, ಕ್ಷೇತ್ರದಲ್ಲಿ ಎನ್.ಟಿ. ಬೊಮ್ಮಣ್ಣ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಸ್ವತಂತ್ರವಾಗಿ ಆಡಳಿತ ನಡೆಸುವ ಅವಕಾಶ ಮಾಡಿಕೊಡುವಂತೆ ಕೈ ಮುಗಿದು ಕೇಳಿಕೊಂಡರು.
ಬಿಜೆಪಿ ಮತ್ತು ಕಾಂಗ್ರೆಸ್ ಪರ್ಸೆಂಟೇಜ್ ಪಕ್ಷಗಳಾಗಿದ್ದು, ರೈತರ ಬಗ್ಗೆ ಅವುಗಳಿಗೆ ಕಾಳಜಿ ಇಲ್ಲ. ನಾನು ಮುಖ್ಯಮಂತ್ರಿ ಯಾಗಿದ್ದಾಗ ಗ್ರಾಮವಾಸ್ತವ್ಯ ಮಾಡುವುದರ ಮೂಲಕ ರೈತರ ಸಮಸ್ಯೆ ಅರಿತಿದ್ದೇನೆ. ಹೀಗಾಗಿಯೇ ರೈತರು ಕೇಳದಿದ್ದರೂ ಅವರ ಸಾಲ ಮನ್ನಾ ಮಾಡಿದೆ ಎಂದ ಕುಮಾರಸ್ವಾಮಿ, ಅನ್ನಭಾಗ್ಯವನ್ನು ಉಚಿತವಾಗಿ ಕೊಟ್ಟಿದ್ದೇನೆ ಎಂದು ಜನರನ್ನು ಸಿದ್ದರಾಮಯ್ಯ ಮರುಳು ಮಾಡುತ್ತಿದ್ದಾರೆ ಎಂದು ದೂರಿದರು.