ಆಮ್ ಆದ್ಮಿ ಪಕ್ಷದಲ್ಲಿ ಭಿನ್ನಮತ ಸ್ಫೋಟ; ಕೇಜ್ರಿವಾಲ್ ವಿರುದ್ಧ ಸಿಡಿದೆದ್ದ ಇನ್ನೋರ್ವ ನಾಯಕ
- ಜ. 16 ರಂದು ದೆಹಲಿಯ ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ
- ಸತ್ಯವನ್ನು ನುಡಿದುದಕ್ಕೆ ನನಗೆ ಶಿಕ್ಷೆ ನೀಡಲಾಗಿದೆ: ಕುಮಾರ್ ವಿಶ್ವಾಸ್
ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಇಂದು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆಮ್ ಆದ್ಮಿ ಪಕ್ಷವು ದೆಹಲಿಯ ಮೂರು ರಾಜ್ಯಸಭಾ ಸ್ಥಾನಗಳಿಗೆ ಹೆಸರುಗಳನ್ನು ಅಂತಿಮಗೊಳಿಸಿದ್ದು, ರಾಜ್ಯಸಭಾ ಸಂಸದ ಸ್ಥಾನದ ಆಕಾಂಕ್ಷಿಯಾಗಿದ್ದ ಕುಮಾರ್ ವಿಶ್ವಾಸ್'ರನ್ನು ಕೆರಳಿಸಿದೆ.
ಜ. 16 ರಂದು ದೆಹಲಿಯ ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಸಂಜಯ್ ಸಿಂಗ್, ಸುಶೀಲ್ ಗುಪ್ತಾ ಹಾಗೂ ಎನ್.ಡಿ. ಗುಪ್ತಾ ಅವರನ್ನು ಅಭ್ಯರ್ಥಿಗಳಾಗಿ ಪಕ್ಷವು ಘೋಷಿಸಿದೆ.
ಸತ್ಯವನ್ನು ನುಡಿದುದಕ್ಕೆ ನನಗೆ ಶಿಕ್ಷೆ ನೀಡಲಾಗಿದೆ. 'ನಿಮ್ಮನ್ನು ಕೊಲ್ಲಲ್ಲ, ಹುತಾತ್ಮಗೊಳಿಸುತ್ತೇವೆ' ಎಂದು ಕೇಜ್ರಿವಾಲ್ ಹಿಂದೊಮ್ಮೆ ಹೇಳಿದ್ದರು, ಈಗ ನಾನು ಹುತಾತ್ಮನಾಗಿದ್ದೇನೆ ಎಂದು ಕುಮಾರ್ ವಿಶ್ವಾಸ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಕೇಜ್ರಿವಾಲ್ ಜೊತೆ ಭಿನ್ನಾಭಿಪ್ರಾಯವಿಟ್ಟುಕೊಂಡು ಪಕ್ಷದಲ್ಲಿ ಉಳಿಯಲು ಸಾಧ್ಯವಿಲ್ಲ. ಪಕ್ಷದಲ್ಲಿ ಕೇಜ್ರಿವಾಲ್ ಒಪ್ಪಿಗೆಯಿಲ್ಲದೇ ಏನೂ ನಡೆಯುವುದಿಲ್ಲವೆಂದು ಕುಮಾರ್ ವಿಶ್ವಾಸ್ ಹೇಳಿದ್ದಾರೆ.
ಸಂಜಯ್ ಸಿಂಗ್ ಆರಂಭದಿಂದಲೂ ಪಕ್ಷದೊಂದಿಗೆ ಇದ್ದು, ಈಗ ರಾಷ್ಟ್ರೀಯ ವಕ್ತಾರರಾಗಿದ್ದಾರೆ. ಸುಶೀಲ್ ಗುಪ್ತಾ ದೆಹಲಿಯಲ್ಲಿ ಉದ್ಯಮಿಯಾಗಿದ್ದು, ಎನ್.ಡಿ. ಗುಪ್ತಾ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ.
70 ಸದಸ್ಯಬಲದ ದೆಹಲಿ ವಿಧಾನಸಭೆಯಲ್ಲಿ ಆಮ್ ಆದ್ಮಿಯು 67 ಮಂದಿ ಶಾಸಕರನ್ನು ಹೊಂದಿದ್ದು, ರಾಜ್ಯಸಭೆಗೆ ಮೂರೂ ಅಭ್ಯರ್ಥಿಗಳ ಆಯ್ಕೆಯು ಖಚಿತವಾಗಿದೆ.