"ಸಚಿವ ಮೇಟಿಯವರು ತಮಗೆ ಸಂಬಂಧಿಕರು, ಹಿರಿಯರು. ಅವರ ಮತ್ತು ನನ್ನ ನಡುವೆ ಅಪ್ಪ-ಮಗಳ ಸಂಬಂಧ ಐತಿ" ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ. ಆದರೆ, ಪೇದೆ ಜೊತೆ ಇದ್ದ ಇತರ ಮೂವರ ಹೆಸರನ್ನು ಹೇಳಲು ನಿರಾಕರಿಸಿರುವ ವಿಜಯಲಕ್ಷ್ಮೀ, ಕಾಲ ಬಂದಾಗ ಹೆಸರು ಬಹಿರಂಗಪಡಿಸುತ್ತೇನೆಂದಿದ್ದಾರೆ.

ಬಾಗಲಕೋಟೆ(ಡಿ. 13): ಸಚಿವ ಎಚ್.ವೈ.ಮೇಟಿ ಅವರ ರಾಸಲೀಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೇಟಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ವಿಜಯಲಕ್ಷ್ಮೀ ಈಗ ಹೊಸ ಹೇಳಿಕೆ ನೀಡಿದ್ದಾರೆ. ಮೇಟಿ ವಿರುದ್ಧ ಮಾತನಾಡಿರುವ ವಿಡಿಯೋದಲ್ಲಿರುವುದು ತಾನೇ ಎಂಬುದನ್ನು ವಿಜಯಲಕ್ಷ್ಮೀ ಒಪ್ಪಿಕೊಂಡಿದ್ದಾರಾದರೂ, ತಾನು ಸ್ವಯಿಚ್ಛೆಯಿಂದ ಅದರಲ್ಲಿ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಗೌಪ್ಯ ಸ್ಥಳದಲ್ಲಿ ತನ್ನನ್ನು ಬಲವಂತವಾಗಿ ಹೇಳಿಕೆ ಕೊಡಿಸಿ ವಿಡಿಯೋ ರೆಕಾರ್ಡ್ ಮಾಡಲಾಯಿತು ಎಂದು ವಿಜಯಲಕ್ಷ್ಮೀ ಆರೋಪಿಸಿದ್ದಾರೆ. ನವೆಂಬರ್ 22ರಂದು ಡಿಆರ್ ಪೇದೆ ಸುಭಾಷ್ ಮುಗಳಖೋಡ್ ಸೇರಿದಂತೆ ನಾಲ್ವರು ವ್ಯಕ್ತಿಗಳು ತನಗೆ ಕೊಲೆ ಬೆದರಿಕೆ ಹಾಕಿ, ಬಲವಂತವಾಗಿ ಮೇಟಿ ವಿರುದ್ಧ ಹೇಳಿಕೆ ರೆಕಾರ್ಡ್ ಮಾಡಿಸಿಕೊಂಡಿದ್ದರು ಎಂದು ವಿಜಯಲಕ್ಷ್ಮೀ ಅವರು ಮಾಧ್ಯಮಗಳೆದುರು ತಿಳಿಸಿದ್ದಾರೆ.

"ಸಚಿವ ಮೇಟಿಯವರು ತಮಗೆ ಸಂಬಂಧಿಕರು, ಹಿರಿಯರು. ಅವರ ಮತ್ತು ನನ್ನ ನಡುವೆ ಅಪ್ಪ-ಮಗಳ ಸಂಬಂಧ ಐತಿ" ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ. ಆದರೆ, ಪೇದೆ ಜೊತೆ ಇದ್ದ ಇತರ ಮೂವರ ಹೆಸರನ್ನು ಹೇಳಲು ನಿರಾಕರಿಸಿರುವ ವಿಜಯಲಕ್ಷ್ಮೀ, ಕಾಲ ಬಂದಾಗ ಹೆಸರು ಬಹಿರಂಗಪಡಿಸುತ್ತೇನೆಂದಿದ್ದಾರೆ.

ಮೊನ್ನೆ, ಅಬಕಾರಿ ಸಚಿವ ಹೆಚ್.ವೈ.ಮೇಟಿಯವರು ತಾವು ಅಮಾಯಕರಾಗಿದ್ದು, ವಿಜಯಲಕ್ಷ್ಮೀ ಜೊತೆ ದುರ್ನಡತೆ ತೋರಿಲ್ಲ ಎಂದು ವಾದಿಸಿದ್ದರು. ಆಕೆ ತನಗೆ ಮಗಳಿದ್ದ ಹಾಗೆ. ಯಾರೋ ಬೇಕಂತಲೇ ತನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆಂದು ಸಚಿವರು ದೂರಿದ್ದರು.