ಬೆಂಗಳೂರಿಗರೇ ಎಚ್ಚರ – ರಾಜಧಾನಿಗೆ ಕಾಲಿಟ್ಟಿಗೆ ವಿಬ್ರಿಯೋ ಕಾಲರ
ನಾಗರಿಕರೇ ಎಚ್ಚರ...! ಉದ್ಯಾನನಗರಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಾಪತ್ತೆಯಾಗಿದ್ದ ‘ವಿಬ್ರಿಯೋ ಕಾಲರಾ’ ಮಹಾಮಾರಿ ಸೋಂಕು ವಲಸಿಗರ ಮೂಲಕ ಮತ್ತೆ ಬೆಂಗಳೂರಿಗೆ ದಾಂಗುಡಿಯಿಟ್ಟಿದೆ.
ಬೆಂಗಳೂರು : ನಾಗರಿಕರೇ ಎಚ್ಚರ...! ಉದ್ಯಾನನಗರಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಾಪತ್ತೆಯಾಗಿದ್ದ ‘ವಿಬ್ರಿಯೋ ಕಾಲರಾ’ ಮಹಾಮಾರಿ ಸೋಂಕು ವಲಸಿಗರ ಮೂಲಕ ಮತ್ತೆ ಬೆಂಗಳೂರಿಗೆ ದಾಂಗುಡಿಯಿಟ್ಟಿದೆ. ಭಾನುವಾರವಷ್ಟೇ ನಗರದಲ್ಲಿ ಇಬ್ಬರು ವ್ಯಕ್ತಿಗಳು ಕಾಲರಾ ಸೋಂಕಿನಿಂದ ಮೃತಪಟ್ಟಿರುವುದು ಖಚಿತವಾಗಿದೆ. ಆಹಾರ ಹಾಗೂ ನೀರಿನಿಂದ ಹರಡುವ ಸಾಂಕ್ರಾಮಿಕ ಕಾಯಿಲೆ ಬಗ್ಗೆ ವರ್ತೂರು ಸುತ್ತಮುತ್ತಲಿನ ಸಮುದಾಯಗಳು ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. 2014ರ ಫೆಬ್ರುವರಿ ತಿಂಗಳಲ್ಲಿ ಒಬ್ಬ ವ್ಯಕ್ತಿ ವಿಬ್ರಿಯೋ ಕಾಲರಾದಿಂದ ಪತ್ತೆಯಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವೇಳೆ ಐಸೋಲೇಷನ್ ಆಸ್ಪತ್ರೆ ಕಾಯಿಲೆ ಹರಡದಂತೆ ತೀವ್ರ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿತ್ತು. ಬಳಿಕ ನಾಲ್ಕು ವರ್ಷಗಳಿಂದ ಒಂದೂ ಪ್ರಕರಣ ವರದಿಯಾಗಿರಲಿಲ್ಲ.
ಹೀಗಾಗಿ ವಲಸಿಗರಿಂದಲೇ ಕಾಯಿಲೆ ಬೆಂಗಳೂರಿಗೆ ಕಾಲಿಟ್ಟಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಸ್ಸಾಂ ಮೂಲದ ವ್ಯಕ್ತಿಯೊಬ್ಬ ತನ್ನ ಮೂಲ ಸ್ಥಳ ಅಥವಾ ರೈಲಿನ ಅಸ್ವಚ್ಛತೆಯಿಂದ ಹರಡಿರಬಹುದಾದ ‘ವಿಬ್ರಿಯೋ’ ಎಂಬ ಅಪಾಯಕಾರಿ ಕ್ರಿಮಿಯಿಂದ ಹರಡುವ ಕಾಲರಾದಿಂದ ಬಂದಿದ್ದಾನೆ. ವ್ಯಕ್ತಿಯ ಜತೆ ವಾಸಿಸುವ ವ್ಯಕ್ತಿಗಳಿಗೆ ನೀರು ಅಥವಾ ಆಹಾರದ ಮೂಲಕ ಸೋಂಕು ವ್ಯಾಪಿಸಿದೆ. ಸೋಂಕು ಉಂಟಾದ ತಕ್ಷಣ ತೀವ್ರ ವಾಂತಿ-ಭೇದಿ ಉಂಟಾದರೂ ಉಪಚರಿಸದ ಕಾರಣ ತೀವ್ರ ಅಸ್ವಸ್ಥರಾಗಿ ಇಬ್ಬರು ಮೃತಪಟ್ಟಿದ್ದಾರೆ.
ಹೀಗಾಗಿ ಹೊರ ರಾಜ್ಯದಿಂದಲೇ ಕಾಯಿಲೆ ಹರಡಿದೆ ಎಂಬುದು ಬಹುತೇಕ ಖಚಿತವಾಗಿದೆ. ವಿಬ್ರಿಯೋ ಕ್ರಿಮಿ ಸೋಂಕು ತಗುಲಿದ ತಕ್ಷಣ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ನಾಲ್ಕು ಹಂತದಲ್ಲಿ ಕಾಯಿಲೆ ಗುರುತಿಸಬಹುದಾಗಿದ್ದು, ಮೊದಲಿಗೆ ವಾಂತಿ-ಭೇದಿ ಶುರುವಾದ ತಕ್ಷಣ ಒಆರ್ ಎಸ್ ನೀರು ಹೇರಳವಾಗಿ ಕುಡಿಸಬೇಕು. ಈ ವೇಳೆ ನಿರ್ಲಕ್ಷಿಸಿದರೆ ಗಂಭೀರವಾಗಿ ಪರಿಣಮಿಸಿ ಕೆಲವೇ ಗಂಟೆಗಳಲ್ಲೇ ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ಹೋಗುತ್ತದೆ ಎಂದು ಐಸೋಲೇಷನ್ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರ ಡಾ.ಅನ್ಸರ್ ಅಹ್ಮದ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಕಾಲರಾ ಹರಡುವುದು ಹೇಗೆ? : ಕಾಲರಾವು ವಿಬ್ರಿಯೋ ಬ್ಯಾಕ್ಟೀರಿಯಾವು ಕುಡಿಯುವ ನೀರು ಹಾಗೂ ಆಹಾರದ ಮೂಲಕ ಹರಡಬಹುದು. ಸೋಂಕಿತನ ಮಲವು ಸಹ ರೋಗಾಣು ಹರಡಲು ಕಾರಣವಾಗಬಹುದು. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲಿದದ್ದರೆ ಬೇಗ ಹರಡುತ್ತದೆ. ನಿಂತ ನೀರಿನಲ್ಲಿ ಬ್ಯಾಕ್ಟೀರಿಯಾ ಹೆಚ್ಚಾಗಿರುತ್ತವೆ. ಸೋಂಕಿತ ವ್ಯಕ್ತಿಯಿಂದ ಕೈಯಿಂದ ಆಹಾರ ಸೇವಿಸುವುದು. ಮುಟ್ಟುವುದು, ಕೈ ಕುಲುಕುವುದರಿಂದಲೂ ರೋಗ ಹರಡುತ್ತದೆ.
ಇದಕ್ಕೆ ಚಿಕಿತ್ಸೆ ಏನು? : ಕಾಲರಾಗೆ ಸರಳ ಚಿಕಿತ್ಸೆ ಇದೆ. ವಾಂತಿ-ಭೇದಿ ಕಂಡು ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಭೇದಿಯ ಮೂಲಕ ನಷ್ಟವಾದ ದೇಹದ ಜೀವ ದ್ರವ ಮತ್ತು ಲವಣಗಳನ್ನು ದೇಹಕ್ಕೆ ಸೇರಿಸಲು ಒಆರ್ಎಸ್ನಂತಹ ದ್ರವ ಕುಡಿಸಬೇಕು. ಅಥವಾ ಸಕ್ಕರೆ ಮತ್ತು ಉಪ್ಪನ್ನು ಸೇರಿಸಿದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಸಬೇಕು. ಅತಿ ಭೇದಿಗೆ ಇದೇ ಚಿಕಿತ್ಸೆಯಾಗಿದ್ದು, ತೀರಾ ನಿತ್ರಾಣವಾಗಿದ್ದರೆ ರಕ್ತನಾಳಗಳ ಮೂಲಕ ದ್ರಾವಣವನ್ನು ವೈದ್ಯರು ದೇಹಕ್ಕೆ ಸೇರಿಸುತ್ತಾರೆ. ಆ್ಯಂಟಿ ಬಯೋಟಿಕ್ಸ್ ನಿಂದಲೂ ರೋಗದ ತೀವ್ರತೆ ಕಡಿಮೆ ಮಾಡಬಹುದು.
ಸೋಂಕು ತಗುಲಿದ ಸುಮಾರು 20 ಜನರಲ್ಲಿ ಒಬ್ಬರಿಗೆ ತೀವ್ರ ಲಕ್ಷಣಗಳು ಕಂಡುಬರುತ್ತವೆ. ಅತಿಯಾದ ವಾಂತಿ, ಭೇದಿ, ಮತ್ತು ಕಾಲು ಸೆಳೆತ ಕಂಡುಬರುತ್ತದೆ. ಇಂತಹ ವ್ಯಕ್ತಿಗಳಲ್ಲಿ ದೇಹ ನಿರ್ಜಲೀಕರಣ ಆಗುತ್ತದೆ. ಕೆಲವೇ ಗಂಟೆಗಳಲ್ಲೂ ಮರಣ ಹೊಂದಬಹುದು.
ಮುನ್ನೆಚ್ಚರಿಕೆ : ಸುತ್ತಮುತ್ತಲಿನ ವಾತಾವರಣದಲ್ಲಿ ಸೋಂಕು ಕಂಡು ಬಂದಿದ್ದರೆ ಆ ಪ್ರದೇಶದ ವ್ಯಕ್ತಿಗಳು ಮುನ್ನೆಚ್ಚರಿಕೆ ವಹಿಸಬೇಕು ? ಸೋಂಕು ತಗುಲಿದ ವ್ಯಕ್ತಿಗಳಿರುವ ಗುಂಪಿನಲ್ಲಿ ಇರಬಾರದು, ಕುದಿಸದೆ ನೀರು ಕುಡಿಯಬಾರದು ? ಪೂರ್ಣ ಬೆಂದಿರುವ ಆಹಾರ ಮಾತ್ರ ಸೇವಿಸಬೇಕು. ಹಣ್ಣುಗಳನ್ನೂ ಕುದಿಯುವ ನೀರಿನಲ್ಲೇ ತೊಳೆಯಬೇಕು. ? ಪ್ರತಿಯೊಂದು ಪಾತ್ರೆಯನ್ನೂ ಬಿಸಿ ನೀರಿನಲ್ಲಿ ತೊಳೆಯಬೇಕು. ? ಆಹಾರ ಸೇವಿಸುವ ಮೊದಲು ಶುಭ್ರವಾಗಿ ಕೈ ತೊಳೆಯಬೇಕು, ಕಾಲರಾ ಬಂದವರ ವಾಂತಿಯಿಂದ ಮಲಿನವಾದ ಬಟ್ಟೆ ಶುಚಿ ಮಾಡುವಾಗ ಬಾಯಿ, ಮೂಗಿಗೆ ಬಟ್ಟೆ ಮುಚ್ಚಿಕೊಳ್ಳಬೇಕು.