ಗೋಮಾತೆ ಆಮ್ಲಜನಕ ಸೇವಿಸಿ ಆಮ್ಲಜನಕ ಬಿಡ್ತಾಳೆ: ಮುಖ್ಯಮಂತ್ರಿ!
'ಆಮ್ಲಜನಕ ಸೇವಿಸಿ ಆಮ್ಲಜನಕವನ್ನೇ ಬಿಡುವ ಪ್ರಾಣಿ ಗೋವು'| ಮುಖ್ಯಮಂತ್ರಿ ಹೇಳಿಕೆಗೆ ಬೆಚ್ಚಿ ಬಿದ್ದ ಸಭಾಂಗಣ| ಗೋವಿನ ಔಷಧೀಯ ಉತ್ಪನ್ನಗಳ ಸಮಾವೇಶದಲ್ಲಿ ಸಿಎಂ ಹೇಳಿಕೆ| ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅಚ್ಚರಿಯ ಹೇಳಿಕೆ|
ಡೆಹ್ರಾಡೂನ್(ಜು.26): ಗೋಮಾತೆ ಆಮ್ಲಜನಕ ಸೇವಿಸಿ ಮರಳಿ ಆಮ್ಲಜನಕವನ್ನೇ ಬಿಡುವ ಏಕೈಕ ಪ್ರಾಣಿ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.
ಗೋಮೂತ್ರ ಮತ್ತು ಹಾಲು ಸೇರಿದಂತೆ ಗೋವಿನ ಹಲವು ಔಷಧೀಯ ಉತ್ಪನ್ನಗಳ ಕುರಿತು ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ರಾವತ್, ಗೋವು ಆಮ್ಲಜನಕ ಸೇವಿಸಿ ಮರಳಿ ಆಮ್ಲಜನಕವನ್ನೇ ಹೊರಬಿಡುತ್ತದೆ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೇ ಹಸವನ್ನು ಮಸಾಜ್ ಮಾಡುವುದರಿಂದ ಮನುಷ್ಯರ ಉಸಿರಾಟದ ಸಮಸ್ಯೆ ದೂರವಾಗುತ್ತದೆ ಎಂದೂ ಸಿಎಂ ರಾವತ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಭಾಗೇಶ್ವರದ ಗರುಡ ಗಂಗೆ ನೀರು ಕುಡಿಯುವುದರಿಂದ ಗರ್ಭವತಿಯರು ಸಿಜೇರಿಯನ್ ತಪ್ಪಿಸಿಕೊಳ್ಳಬಹುದು ಎಂದು ಉತ್ತರಾಖಂಡ್ ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ಅಜಯ್ ಭಟ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.