ಭಾನುವಾರ ರಾಜ್ಯಕ್ಕೆ ಅಮಿತ್ ಶಾ: ಪ್ರವಾಹ, ಕಷ್ಟ ನಷ್ಟ ಪರಿಶೀಲನೆ
ಭಾನುವಾರ ರಾಜ್ಯಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ| ಪ್ರವಾಹ ಪರಿಸ್ಥಿತಿ ವೀಕ್ಷಿಸಲು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ| ಯಡಿಯೂರಪ್ಪ ಜತೆ ವೈಮಾನಿಕ ಸಮೀಕ್ಷೆ ನಡೆಸಲಿರುವ ಶಾ.
ಬೆಂಗಳೂರು\ಬೆಳಗಾವಿ, [ಆ.10]: ಮಹಾಮಳೆಯಿಂದ ತತ್ತರಿಸಿರುವ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಳೆ [ಭಾನುವಾರ] ಭೇಟಿ ನೀಡಲಿದ್ದಾರೆ.
ಭಾನುವಾರ ಮಧ್ಯಾಹ್ನ 2.30ಕ್ಕೆ ಬೆಳಗಾವಿಗೆ ಅಮಿತ್ ಶಾ ಆಗಮಿಸಿ, ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಶಾಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾಥ್ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಭಾನುವಾರದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪ್ರವಾಸ ರದ್ದುಗೊಳಿಸಿದ್ದಾರೆ.
ಸುವರ್ಣ ನ್ಯೂಸ್ ಪ್ರವಾಹ ಪರಿಹಾರ ಅಭಿಯಾನಕ್ಕೆ ದಾರಿ
ವೈಮಾನಿಕ ಸಮೀಕ್ಷೆ ಮುಗಿದ ನಂತರ ಯಡಿಯೂರಪ್ಪನವರು ಅಮಿತ್ ಶಾ ಸಮ್ಮುಖದಲ್ಲೇ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಂಜೆ ಹಿರಿಯ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.
ಇಂದು [ಶನಿವಾರ] ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು. ಇದೀಗ ಶಾ ಆಗಮಿಸುತ್ತಿದ್ದರಿಂದ ಕೇಂದ್ರ ಸರ್ಕಾರ, ರಾಜ್ಯಕ್ಕೆ ನೆರೆ ಪರಿಹಾರ ಪ್ಯಾಕೇಜ್ ಘೋಷಿಸುವ ಸಾಧ್ಯತೆಗಳಿವೆ.
ಸ್ವಾಮಿ ಕಾರ್ಯ ಜತೆ ಸ್ವಕಾರ್ಯ..?
ಹೌದು..ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಸಚಿವ ಸಂಪುಟ ರಚನೆ ಬಗ್ಗೆ ಬಿಎಸ್ ವೈ ಹಾಗು ಶಾ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಯಾಕಂದ್ರೆ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲು ಯಡಿಯೂರಪ್ಪ ಅವರು ಮೊನ್ನೆ ದೆಹಲಿಗೆ ಹೋದಾಗ ಶಾ ಸಿಕ್ಕಿರಲಿಲ್ಲ. ಇದೀಗ ಪ್ರವಾಹ ವೀಕ್ಷಣೆ ಮಾಡಲು ಶಾ ಅವರೇ ರಾಜ್ಯಕ್ಕೆ ಆಗಮಿಸುತ್ತಿದ್ದು, ಇದೇ ಸಿಕ್ಕಿದ್ದೇ ಚಾನ್ಸ್ ಅಂತ ಯಡಿಯೂರಪ್ಪ ಅವರು ಸಂಪುಟ ರಚನೆಗೆ ಬಗ್ಗೆ ಚರ್ಚೆ ನಡೆಸುತ್ತಾರೆ ಎನ್ನಲಾಗಿದೆ.
ಇದಕ್ಕೆ ಪುಷ್ಠಿ ನೀಡುವಂತೆ, ನಿರ್ಮಲಾ ಸೀತಾರಾಮನ್ ಅವರು ಬೆಳಗಾವಿಗೆ ನೆರೆ ಪ್ರವಾಹ ವೀಕ್ಷಿಸಲು ಆಗಮಿಸಿದ್ದಾರೆ. ಆದ್ರೆ ಇವರಿಗೆ ಯಡಿಯೂರಪ್ಪ ಅವರು ಸಾಥ್ ನೀಡಿಲ್ಲ. ಇದೀಗ ಭಾನುವಾರ ಶಾ ಜತೆ ಪ್ರವಾಹ ವೀಕ್ಷಣೆ ಮಾಡಲು ಬಿಎಸ್ ವೈ, ಉತ್ತರ ಕನ್ನಡ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.