ಕೇಂದ್ರದಿಂದ ಕೇರಳಕ್ಕೆ 90,000 ಟನ್ ಆಹಾರ ಧಾನ್ಯ
ಕೇಂದ್ರದಿಂದ ಪ್ರವಾಹ ಪೀಡಿತ ಕೇರಳಕ್ಕೆ ಆಹಾರ ಧಾನ್ಯಗಳನ್ನು ರವಾನೆ ಮಾಡುವುದಾಗಿ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚೊವ ರಾಂ ವಿಲಾಸ್ ಪಾಸ್ವಾನ್ ಘೋಷಿಸಿದ್ದಾರೆ.
ನವದೆಹಲಿ: ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ನಿಟ್ಟಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು ಕೇರಳಕ್ಕೆ ಆಹಾರ ಧಾನ್ಯಗಳ ಪೂರೈಕೆ ಮಾಡಲು ಕೇಂದ್ರ ನಿರ್ಧರಿಸಿದೆ.
ಪರಿಹಾರ ಕಾರ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಕೇರಳಕ್ಕೆ 89540 ಟನ್ ಆಹಾರಧಾನ್ಯ ಮತ್ತು 100 ಟನ್ ದ್ವಿದಳ ಧಾನ್ಯ ರವಾನಿಸಲಾಗುವುದು ಎಂದು ಕೇಂದ್ರ ನಾಗರಿಕ ಪೂರೈಕೆ ಖಾತೆ ಸಚಿವ ರಾಂ ವಿಲಾಸ್ ಪಾಸ್ವಾನ್ ಘೋಷಿಸಿದ್ದಾರೆ.
ಆಹಾರ ಭದ್ರತಾ ಕಾಯ್ದೆ ವ್ಯಾಪ್ತಿಗೆ ಬರದ ಜನರಿಗೆ ಇದರಿಂದ ನೆರವಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
600 ಕೋಟಿ ನೆರವು
ಪ್ರವಾಹ ಪೀಡಿತ ಕೇರಳಕ್ಕೆ ಕೇಂದ್ರ ಸರ್ಕಾರ ಮಂಗಳವಾರ 600 ಕೋಟಿ ರು. ಬಿಡುಗಡೆ ಮಾಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಈ ನೆರವನ್ನು ಘೋಷಿಸಲಾಗಿದೆ. ಕೇರಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು 500 ಕೋಟಿ ರು. ನೆರವು ಪ್ರಕಟಿಸಿದ್ದರು. ಜೊತೆಗೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು 100 ಕೋಟಿ ರು. ನೆರವು ಘೋಷಿಸಿದ್ದರು. ಆ ಹಣವನ್ನು ಇದೀಗ ಬಿಡುಗಡೆ ಮಾಡಲಾಗಿದೆ.