ಭಾರತೀಯ ಸೇನೆಯ ಪರಾಕ್ರಮಕ್ಕೆ ದಶಕಗಳಿಂದ ಬೆನ್ನೆಲುಬಾಗಿರುವ, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ಗೆ ಈಗ ಹೊಸ ಸಮಸ್ಯೆಯೊಂದು ಎದುರಾಗಿದೆ. 

ಬೆಂಗಳೂರು: ಭಾರತೀಯ ಸೇನೆಯ ಪರಾಕ್ರಮಕ್ಕೆ ದಶಕಗಳಿಂದ ಬೆನ್ನೆಲುಬಾಗಿರುವ, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ಗೆ ಈಗ ಹೊಸ ಸಮಸ್ಯೆಯೊಂದು ಎದುರಾಗಿದೆ. ಹೊಸ ಆರ್ಡರ್‌ಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ, ಎಚ್‌ಎಎಲ್‌ನ ಸಹಸ್ರಾರು ಉದ್ಯೋಗಿಗಳು ಕೆಲಸವಿಲ್ಲದೇ ತಿಂಗಳುಗಳ ಕಾಲ ಕೂರಬೇಕಾದ ಸನ್ನಿವೇಶ
ಸೃಷ್ಟಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು, ಮಹಾರಾಷ್ಟ್ರದ ನಾಸಿಕ್ ಸೇರಿದಂತೆ ದೇಶಾದ್ಯಂತ 9 ಸ್ಥಳಗಳಲ್ಲಿ ಎಚ್‌ಎಎಲ್ ಘಟಕಗಳು ಇವೆ. 9 ಸಾವಿರ ಎಂಜಿನಿಯರ್‌ಗಳು ಸೇರಿದಂತೆ 29,035 ಉದ್ಯೋಗಿಗಳು ಇಲ್ಲಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಬೆಂಗಳೂರು ಹಾಗೂ ನಾಸಿಕ್ ಎರಡೇ ಘಟಕದಲ್ಲಿ 10 ಸಾವಿರ
ನೌಕರರು ಇದ್ದಾರೆ. ಸದ್ಯ ಬೆಂಗಳೂರಿನ ವಿಮಾನ ವಿಭಾಗದಲ್ಲಿ 3000 ಉದ್ಯೋಗಿಗಳಿದ್ದು, ಅವರ ಬಳಿ ಯಾವುದೇ ಆರ್ಡರ್ ಇಲ್ಲ. ಜಾಗ್ವಾರ್ ಹಾಗೂ ಮಿರಾಜ್ ವಿಮಾನ ಮೇಲ್ದರ್ಜೆಗೇರಿಸುವ ಕಾರ್ಯಕ್ರಮ ಪೂರ್ಣಗೊಂಡಿದೆ. 

ತಮ್ಮನ್ನು ಹಗುರ ಯುದ್ಧ ವಿಮಾನ ತೇಜಸ್ ವಿಭಾಗಕ್ಕೆ ವರ್ಗಾವಣೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಉದ್ಯೋಗಿಗಳು ಇದ್ದಾರೆ. ತೇಜಸ್ ವಿಭಾಗದಲ್ಲಿ ಈಗಾಗಲೇ 2000 ಮಂದಿ ಇದ್ದಾರೆ. 108 ಯುದ್ಧ ವಿಮಾನಗಳ ಒಪ್ಪಂದ (ರಫೇಲ್) ಸಿಗಲಿದೆ ಎಂದು ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಆ ವಿಮಾನಗಳ ಸಂಖ್ಯೆ 36ಕ್ಕೆ ಇಳಿಕೆಯಾಯಿತು. ಅವೂ ಹಾರಾಟ ಸ್ಥಿತಿಯಲ್ಲಿ ಬರುತ್ತವೆ ಎಂದು ಎಚ್‌ಎಎಲ್ ನ ಹಿರಿಯ ಅಧಿಕಾರಿಯೊಬ್ಬರು ಕೊರಗುತ್ತಾರೆ. 

ಉದ್ಯೋಗವಿಲ್ಲದೇ ಕುಳಿತಿರುವ ನೌಕರರಿಗೆ ಕೆಲಸ ಕೊಡಲು ಸದ್ಯ ಎಚ್‌ಎಎಲ್‌ಗೆ ಹೆಚ್ಚುವರಿ 83 ತೇಜಸ್ ವಿಮಾನ ಉತ್ಪಾದನೆ ಆದೇಶ
ಸಿಗಬೇಕಾಗಿದೆ. ರಕ್ಷಣಾ ಖರೀದಿ ಮಂಡಳಿ 83 ತೇಜಸ್ ವಿಮಾನಗಳ ಖರೀದಿಗೆ ಒಪ್ಪಿಗೆ ಸೂಚಿಸಿದೆಯಾದರೂ, ಅದು ಆದೇಶವಾಗಲು ಸಮಯ ಹಿಡಿಯುತ್ತದೆ. ಅಲ್ಲಿವರೆಗೂ ನೌಕರರಿಗೆ ಕೆಲಸವಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ. 

ಇದು ಬೆಂಗಳೂರು ಕತೆಯಾದರೆ, ನಾಸಿಕ್ ಘಟಕದಲ್ಲಿರುವ 5000 ಮಂದಿ ನೌಕರರಿಗೆ ಇರುವ ಕೆಲಸ 17 ತಿಂಗಳಲ್ಲಿ ಮುಗಿಯಲಿದೆ. ಆನಂತರ ಅವರಿಗೂ ಕೆಲಸವಿರುವುದಿಲ್ಲ ಎಂದು ಹೇಳಲಾಗಿದೆ.