ಮಸ್ಕತ್‌ನಲ್ಲಿ ಸಂಭ್ರಮದ ಗಣೇಶೋತ್ಸವ ಆಚರಣೆ| ಓಮನ್‌ ದೇಶದ ತುಳು- ಕನ್ನಡ ಬಳಗದಿಂದ ಆಯೋಜನೆ

ಮಸ್ಕತ್‌[ಅ.02]: ಓಮಾನ್‌ನ ತುಳು/ ಕನ್ನಡ ಕಮ್ಯೂನಿಟಿ ವತಿಯಿಂದ ಸೆ.2ರಿಂದ ಸೆ.4ರವರೆಗೆ ಮೂರು ದಿನಗಳ ಕಾಲ ಮಸ್ಕತ್‌ನ ಶಿವನ ದೇವಾಲಯದಲ್ಲಿ 35ನೇ ವರ್ಷದ ಸಂಭ್ರಮದ ಗಣೇಶೋತ್ಸವ ಆಚರಿಸಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೆ.2ರಂದು ಬೆಳಗ್ಗೆ ದೇವಾಲಯದ ಮುಖ್ಯ ಅರ್ಚಕ ಶಂಕರ ನಾರಾಯಣ ಅಡಿಗ ಹಾಗೂ ಗುರುದಾಸ ಪೇಜತಾಯ ನೇತೃತ್ವದ ಅರ್ಚಕರ ತಂಡದಿಂದ ಗಣೇಶಮೂರ್ತಿ ಪ್ರತಿಷ್ಠಾನ ಆಚರಣೆ ನೆರವೇರಿತು. ಈ ಇದೇ ವೇಳೆ ಗಣೇಶನ ಕುರಿತು ಮಂತ್ರ ಹಾಗೂ ಶ್ಲೋಕಗಳನ್ನು ಪಠಿಸಲಾಯಿತು. ಬಳಿಕ ಪಂಚಾಮೃತ ಅಭಿಷೇಕ ಮತ್ತು ಗಣ ಹೋಮ ಮಾಡಲಾಯಿತು. ನಂತರ ಓಂ ಶ್ರೀ ಗಣೇಶ ವೃಂದದಿಂದ ಗಣೇಶ ಸಹಸ್ರನಾಮ ಪಠಿಸಲಾಯಿತು. ನಳಿನಿ ಕಣ್ಣನ್‌ ಹಾಗೂ ಸಂಗೀತ ಶ್ರೀಜಿತಾ ಅವರ ಮಾರ್ಗದರ್ಶನದಲ್ಲಿ ನೃತ್ಯ ಪ್ರದರ್ಶನ ನಡೆಯಿತು. ಓಂ ಶ್ರೀ ಗಣೇಶ ವೃಂದದ ಸದಸ್ಯರು ಭಕ್ತಿಗೀತೆ ಹಾಗೂ ಭಜನೆ ಹಾಡಿದರು.

ಮೂರು ದಿನಗಳ ಕಾಲ ನಡೆದ ಗಣೇಶೋತ್ಸವದಲ್ಲಿ ಭಕ್ತಾದಿಗಳು ಗಣೇಶಮೂರ್ತಿಗೆ ಆರತಿ, ಗಣಹೋಮ, ಪುಷ್ಪಾರ್ಚನೆ, ಮಹಾಪೂಜಾ, ರಂಗ ಪೂಜೆ ಸಲ್ಲಿಸಿದರು. ಕಡೆಯ ದಿನವಾದ ಸೆ.4ರಂದು ರಾತ್ರಿ ಗಣಪತಿ ಬಪ್ಪಾ ಮೋರೆಯ ಮಂಗಳಮೂರ್ತಿ ಮೋರೆಯ ಘೋಷಣೆಗಳೊಂದಿಗೆ ಗಣೇಶಮೂರ್ತಿಯ ವಿಸರ್ಜನಾ ಕಾರ್ಯಕ್ರಮ ಜರುಗಿತು. ಮೂರು ದಿನಗಳ ಕಾಲ ಮಧ್ಯಾಹ್ನ ಮತ್ತು ಸಂಜೆ ಭಕ್ತಾದಿಗಳಿಗಳಿಗೆ ಮಂಗಳೂರು ಶೈಲಿಯ ಪ್ರಸಾದ ವಿತರಿಸಲಾಯಿತು. ಮೂರ್ತಿ ವಿಸರ್ಜನೆ ದಿನ ಮಹಾಪ್ರಸಾದ ನೀಡಲಾಯಿತು.

ಸುಲ್ತಾನೇಟ್‌ ಆಫ್‌ ಓಮಾನ್‌ನ ಭಾರತೀಯ ರಾಯಭಾರಿ ಮುನು ಮಹಾವಾರ್‌, ಇಂಡಿಯನ್‌ ಸೋಸಿಯಲ್‌ ಕ್ಲಬ್‌ನ ಛೇರ್ಮನ್‌ ಡಾ. ಸತೀಶ್‌ ನಂಬಿಯಾರ್‌, ಉದ್ಯಮಿಗಳಾದ ಅನಿಲ್‌ ಖಿಮ್ಜಿ, ಅಶ್ವಿನ್‌ ನಾನ್ಸಿ, ಬಕುಲ್‌ ಬಾಯಿ ಮೆಹ್ತಾ ಸೇರಿದಂತೆ ಹಲವರು ಗಣೇಶೋತ್ಸವ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.

ಮಸ್ಕತ್‌ ಗಣೇಶ ಫೆಸ್ಟಿವಲ್‌ ಕಮಿಟಿಯ ಅಧ್ಯಕ್ಷ ಎಸ್‌.ಕೆ.ಪೂಜಾರಿ, ಸದಸ್ಯರಾದ ಕೋಣಿ ಪ್ರಕಾಶ್‌ ನಾಯ್‌್ಕ, ಕರುಣಾಕರ್‌ ರಾವ್‌, ಕದ್ರಿ ಉಮೇಶ್‌ ಬಂಟ್ವಾಲ್‌, ಶಶಿಧರ್‌ ಶೆಟ್ಟಿಮಲ್ಲಾರ್‌, ನಾಗೇಶ್‌ ಶೆಟ್ಟಿಕಿಣ್ಣಿಗೋಳಿ, ಮಂಗಲದಾಸ್‌ ಕಾಮತ್‌, ಗುರುದಾಸ್‌ ಪೇಜತಾಯ, ರವಿ ಕಾಂಚನ್‌, ಡಾ.ಸಿ.ಕೆ.ಅಂಚನ್‌, ಕಾಶಿನಾಥ್‌ ಎನ್‌.ಅಂಚನ್‌ ಅವರು ಮೂರು ದಿನಗಳ ಈ ಗಣೇಶೋತ್ಸವ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.