ವಾಹನ ವಿಮಾ ಸಂಸ್ಥೆಗಳು ಥರ್ಡ್ ಪಾರ್ಟಿ ಪ್ರೀಮಿಯಂ ಮೊತ್ತವನ್ನು ಶೇ. 50ರಿಂದ 68ರಷ್ಟು ಹೆಚ್ಚಳ ಮಾಡಿವೆ. ಏ. 1ರಿಂದ ನೂತನ ವಿಮಾ ಶುಲ್ಕ ಜಾರಿಗೆ ಬರಲಿದೆ. ಇದರಿಂದಾಗಿ, ಲಾರಿ, ಬಸ್, ಮ್ಯಾಕ್ಸಿ, ಕ್ಯಾಬ್ ಸೇರಿ ಇನ್ನಿತರ ವಾಣಿಜ್ಯ ವಾಹನಗಳ ಮಾಲೀಕರ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಹೀಗಾಗಿ ವಿಮಾ ಮೊತ್ತ ಹೆಚ್ಚಳದ ನಿರ್ಧಾರವನ್ನು ಕೈಬಿಡಬೇಕು ಎಂದು ಲಾರಿ ಮಾಲಿಕರ ಬೇಡಿಕೆಯಾಗಿದೆ
ಬೆಂಗಳೂರು (ಮಾ.30): ವಿಮಾ ಕಂಪನಿಗಳ 'ಥರ್ಡ್ ಪಾರ್ಟಿ' ಪ್ರೀಮಿಯಂ ದರ ಏರಿಕೆ ವಿರೋಧ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ. 30ರ ಬೆಳಗ್ಗೆ 6ರಿಂದ ರಾಜ್ಯವು ಸೇರಿದಂತೆ ದಕ್ಷಿಣ ಭಾರತದೆಲ್ಲೆಡೆ ಅನಿರ್ಧಿಷ್ಟಾವಧಿ ಲಾರಿ, ಖಾಸಗಿ ಬಸ್ ಹಾಗೂ ಟ್ಯಾಕ್ಸಿಗಳ ಮುಷ್ಕರಕ್ಕೆ ದಕ್ಷಿಣ ವಲಯ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಕರೆ ನೀಡಿದೆ.
ಇದರಿಂದಾಗಿ ಲಕ್ಷಾಂತರ ಲಾರಿಗಳ ಓಡಾಟ ಸ್ಥಗಿತವಾಗಲಿದ್ದು, ಡೀಸೆಲ್, ಪೆಟ್ರೋಲ್, ಗ್ಯಾಸ್ ಹಾಗೂ ತರಕಾರಿ ಸಾಗಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಏ. 1ರಿಂದ ಅನ್ವಯವಾಗುವಂತೆ ಈ ನಿಯಮ ಜಾರಿಗೆ ತರಲು ವಿಮಾ ಸಂಸ್ಥೆಗಳು ನಿರ್ಧರಿಸಿವೆ.
ಮಾ. 11ರಂದು ನಡೆದ ಸಂಘಟನೆಯ 19ನೇ ಕಾರ್ಯಕಾರಣಿ ಸಮಿತಿಯ ಉನ್ನತ ಮಟ್ಟದ ಸಭೆಯಲ್ಲಿ ಮುಷ್ಕರ ಸಂಬಂಧ ತೀರ್ಮಾನ ಕೈಗೊಳ್ಳಲಾಗಿತ್ತು. ಇದಾದ ನಂತರ ಮನವೊಲಿಸಲು ಹಲವು ಹಂತದ ಪ್ರಯತ್ನ ನಡೆದರೂ ಫಲ ಕೊಟ್ಟಿರಲಿಲ್ಲ.
ಇದೀಗ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಹಾಗೂ ಪಾಂಡಿಚೇರಿ ಲಾರಿ ಮಾಲೀಕರ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿವೆ.
ವಾಹನ ವಿಮಾ ಸಂಸ್ಥೆಗಳು ಥರ್ಡ್ ಪಾರ್ಟಿ ಪ್ರೀಮಿಯಂ ಮೊತ್ತವನ್ನು ಶೇ. 50ರಿಂದ 68ರಷ್ಟು ಹೆಚ್ಚಳ ಮಾಡಿವೆ. ಏ. 1ರಿಂದ ನೂತನ ವಿಮಾ ಶುಲ್ಕ ಜಾರಿಗೆ ಬರಲಿದೆ. ಇದರಿಂದಾಗಿ, ಲಾರಿ, ಬಸ್, ಮ್ಯಾಕ್ಸಿ, ಕ್ಯಾಬ್ ಸೇರಿ ಇನ್ನಿತರ ವಾಣಿಜ್ಯ ವಾಹನಗಳ ಮಾಲೀಕರ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಹೀಗಾಗಿ ವಿಮಾ ಮೊತ್ತ ಹೆಚ್ಚಳದ ನಿರ್ಧಾರವನ್ನು ಕೈಬಿಡಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಷಣ್ಮುಗಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮುಷ್ಕರದ ಅವಧಿಯಲ್ಲಿ ದಕ್ಷಿಣ ಭಾರತಕ್ಕೆ ಬೇರೆ ರಾಜ್ಯಗಳಿಂದಲೂ ಲಾರಿಗಳು ಪ್ರವೇಶಿಸುವುದಿಲ್ಲ ಎಂದು ಕೂಡ ಅವರು ತಿಳಿಸಿದ್ದಾರೆ. ಮಾ. 30ರ ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಆರಂಭವಾಗಲಿದೆ. ಸರ್ಕಾರ ಇನ್ನೂ ಮಾತುಕತೆಗೆ ಆಹ್ವಾನಿಸಿಲ್ಲ. ಡೀಸೆಲ್, ಪೆಟ್ರೋಲ್ ಹಾಗೂ ಅನಿಲ ಸಾಗಣೆ ಲಾರಿಗಳೂ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ ಎಂದಿದ್ದಾರೆ.
