ಅನಾಗರಿಕರು...ಬೆಳೆ ನಡುವೆ ಸೆಲ್ಫಿ ಬೇಡ ಎಂದ ರೈತನಿಗೆ ಮಾಡಿದ್ದೇನು?
ಬೆಳೆದು ನಿಂತ ಸೂರ್ಯಕಾಂತಿ ಬೆಳೆ ಸೌಂದರ್ಯಕ್ಕೆ ಮಾರು ಹೋದ ಯುವಕರು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಹೊಲಕ್ಕೆ ಕಾಲಿಟ್ಟ ಯುವಕರು ಮನಬಂದಂತೆ ವರ್ತಿಸತೊಡಗಿದರು. ಇದನ್ನು ಕಂಡ ಹೊಲದ ಮಾಲೀಕ ದಯವಿಟ್ಟು ಬೆಳೆ ಹಾಳು ಮಾಡಬೇಡಿ ಎಂದಿದ್ದಾರೆ. ರೈತನ ಮಾತಿಗೆ ಕಿವಿಗೊಡದ ಯುವಕರು ಅವರ ಮೇಲೆಯೇ ಹಲ್ಲೆ ಮಾಡಿದ್ದಾರೆ.
ಚಾಮರಾಜನಗರ ಜೂನ್ 19: ಬೆಳೆದು ನಿಂತ ಸೂರ್ಯಕಾಂತಿ ಬೆಳೆ ಸೌಂದರ್ಯಕ್ಕೆ ಮಾರು ಹೋದ ಯುವಕರು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಹೊಲಕ್ಕೆ ಕಾಲಿಟ್ಟ ಯುವಕರು ಮನಬಂದಂತೆ ವರ್ತಿಸತೊಡಗಿದರು. ಇದನ್ನು ಕಂಡ ಹೊಲದ ಮಾಲೀಕ ದಯವಿಟ್ಟು ಬೆಳೆ ಹಾಳು ಮಾಡಬೇಡಿ ಎಂದಿದ್ದಾರೆ. ರೈತನ ಮಾತಿಗೆ ಕಿವಿಗೊಡದ ಯುವಕರು ಅವರ ಮೇಲೆಯೇ ಹಲ್ಲೆ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಭೀಮನಬೀಡು ಗ್ರಾಮದ ಬಳಿ ಜಮೀನಿನೊಳಗೆ ಸೆಲ್ಫಿ ತೆಗೆದುಕೊಳ್ಳಬೇಡಿ ಎಂದಿದ್ದಕ್ಕೆ ಯುವಕರ ಗುಂಪೊಂದು ಜಮೀನಿನ ಮಾಲೀಕನ ಮೇಲೆಯೇ ಹಲ್ಲೆ ನಡೆಸಿದೆ. ರಾಷ್ಟ್ರೀಯ ಹೆದ್ದಾರಿ 212 ರ ಬದಿಯ ಜಮೀನಿನಲ್ಲಿ ಬೆಳೆದಿರುವ ಸೂರ್ಯಕಾಂತಿ ಬೆಳೆಯ ನಡುವೆ ಪ್ರಯಾಣಿಕರು ಸೆಲ್ಫಿ ತೆಗೆದುಕೊಳ್ಳುವುದು ಒಂದು ರೀತಿಯಲ್ಲಿ ಕ್ರೇಜ್ ಆಗಿ ಹೋಗಿದೆ. ಪ್ರವಾಸಿಗರು ಇಲ್ಲಿ ರೈತರ ಜಮೀನಿನ ಬಳಿ ಫೋಟೋ ತೆಗೆದುಕೊಳ್ಳುವುದನ್ನು ರೂಢಿಯಠಾಗಿ ಮಾಡಿಕೊಂಡಿದ್ದಾರೆ.
ಅದೇ ರೀತಿ ಕೇರಳದಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ಯುವಕರ ಗುಂಪೊಂದು ಸೂರ್ಯಕಾಂತಿ ಬೆಳೆಯ ನಡುವೆ ಸೆಲ್ಫಿ ತೆಗೆದುಕೊಳ್ಳಲು ಜಮೀನಿಗೆ ನುಗ್ಗಿದೆ. ಈ ವೇಳೆ ಸೂರ್ಯಕಾಂತಿ ಬೆಳೆ ತುಳಿದು ಹಾಳಾಗುತ್ತದೆ ಎಂದು ಸೆಲ್ಫಿ ತೆಗೆದುಕೊಳ್ಳಲು ರೈತ ಬಸವಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಯುವಕರ ತಂಡ ರೈತ ಬಸವಣ್ಣ ನ ಮೇಲೆಯೇ ಮನಬಂದಂತೆ ಹಲ್ಲೆ ನಡೆಸಿದೆ. ವಿಷಯ ತಿಳಿದ ಗ್ರಾಮಸ್ಥರು ರೈತ ಬಸವಣ್ಣನ ಮೇಲೆ ಹಲ್ಲೆ ನಡೆಸಿದ ಯುವಕರನ್ನು ಹಿಡಿದು ಥಳಿಸಿ ಈ ಪೈಕಿ ಮೂವರು ಯುವಕರನ್ನು ಗುಂಡ್ಲುಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ ಉಳಿದ 7 ಮಂದಿ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ.