ಸಿಲಿಕಾನ್​ ಸಿಟಿಯಲ್ಲಿ ನಾಳೆ ಹೋಟೆಲ್​ ಗಳಲ್ಲಿ ಊಟ ಸಿಗುವುದಿಲ್ಲ ಇತ್ತ ಮೆಡಿಕಲ್​ಗಳಲ್ಲಿ ಔಷಧಿಯೂ ದೊರೆಯುವುದಿಲ್ಲ. ಈ ಮೂಲಕ ಎರಡು ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿವೆ. ಆದರೆ ಕೇಂದ್ರ ಮತ್ತು ಈ ಸಂಘಟನೆಗಳ ನಡುವಿನ ಜಟಾಪಟಿಯಲ್ಲಿ ಪರದಾಡುವ ಸರದಿ ಮಾತ್ರ ಜನಸಾಮಾನ್ಯರದ್ದು.

ಬೆಂಗಳೂರು (ಮೇ.29): ಸಿಲಿಕಾನ್​ ಸಿಟಿಯಲ್ಲಿ ನಾಳೆ ಹೋಟೆಲ್​ ಗಳಲ್ಲಿ ಊಟ ಸಿಗುವುದಿಲ್ಲ ಇತ್ತ ಮೆಡಿಕಲ್​ಗಳಲ್ಲಿ ಔಷಧಿಯೂ ದೊರೆಯುವುದಿಲ್ಲ. ಈ ಮೂಲಕ ಎರಡು ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿವೆ. ಆದರೆ ಕೇಂದ್ರ ಮತ್ತು ಈ ಸಂಘಟನೆಗಳ ನಡುವಿನ ಜಟಾಪಟಿಯಲ್ಲಿ ಪರದಾಡುವ ಸರದಿ ಮಾತ್ರ ಜನಸಾಮಾನ್ಯರದ್ದು.

ನಾಳೆ ನೀವು ಹೋಟೆಲ್​​ಗಳನ್ನ ನಂಬಿ ಆಫೀಸ್​ಗೆ ಬರೋ ಹಾಗಿಲ್ಲ. ಯಾಕಂದ್ರೆ ಯಾವುದೇ ಹೋಟೆಲ್​ಗಳಲ್ಲಿ ನಾಳೆ ನಿಮಗೆ ಊಟ ಸಿಗುವುದಿಲ್ಲ. ಈ ಮೂಲಕ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಜಿಎಸ್​ಟಿಯನ್ನು ವಿರೋಧೀಸಿ ಹೋಟೆಲ್​ಗಳ ಸಂಘ ದಕ್ಷಿಣ ಭಾರತದಾದ್ಯಂತ ಬಂದ್​ಗೆ ಕರೆ ನೀಡಿದೆ. ಇನ್ನು ಬೆಂಗಳೂರಿನಲ್ಲಿ ಬೃಹತ್​ ಬೆಂಗಳೂರು ಹೋಟೆಲ್​ಗಳ ಸಂಘ ಬಂದ್​ಗೆ ಕರೆ ನೀಡಿದ್ದು, ಎಲ್ಲಾ ಹೋಟೆಲ್​ ಮತ್ತು ಲಾಡ್ಜ್​ಗಳು ಸಂಪೂರ್ಣವಾಗಿ ಬಂದ್​ ಆಗಲಿವೆ. ಇನ್ನು ಈ ಬೃಹತ್​ ಬಂದ್​ಗೆ ಬೇಕರಿ ಮತ್ತು ದಾರಿ ಬದಿಯ ಹೋಟೆಲ್​ಗಳ​ ಸಂಘ ಕೂಡ ಬೆಂಬಲ ನೀಡಿದೆ. ಇನ್ನು ಜಿಎಸ್​ಟಿ ಅಡಿಯಲ್ಲಿ ಎಸಿ ಹೋಟೆಲ್​ಗಳಿಗೆ ಶೇಕಡಾ 12% ರಷ್ಟು ಮತ್ತು ​ ಎಸಿಯೇತರ ಹೋಟೆಲ್​ಗಳಿಗೆ ಶೇಕಡಾ 18% ರಷ್ಟು ತೆರಿಗೆ ವಿಧಿಸಲಾಗ್ತಿದ್ದು, ಜುಲೈ 1ರಿಂದ ಜಿಎಸ್​ಟಿ ಜಾರಿಯಾಗುತ್ತಿದೆ. ಇನ್ನು ಜಿಎಸ್​ಟಿಯ ಈ ತೆರಿಗೆ ಪದ್ಧತಿಯಿಂದಾಗಿ ಒಂದೊಡೆ ಹೋಟೆಲ್​ಗಳಿಗೆ ನಷ್ಟವಾದರೆ ಮತ್ತೊಂದೆಡೆ ಗ್ರಾಹಕರಿಗೂ ಬರೆ ಬೀಳಲಿದೆ ಎಂದು ಆರೋಪಿಸಿ ಬಂದ್​ಗೆ ಕರೆ ನೀಡಲಾಗಿದೆ.

ಇದೇ ವೇಳೆ ಹೋಟೆಲ್ ಸಂಘಟನೆಯಲ್ಲಿ ಭಿನ್ನಾಭಿಪ್ರಾಯ ಏರ್ಪಟ್ಟಿದೆ.ರಾಜ್ಯ ಹೋಟೆಲ್ ಮಾಲೀಕರ ಸಂಘಟನೆ ನಾಳಿನ ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ರಾಜ್ಯ ಹೋಟೆಲ್ ಮಾಲೀಕರ ಸಂಘ ನಾಳೆ ಹೋಟೆಲ್ ಗಳನ್ನು ಮುಚ್ಚದಿರಲು ನಿರ್ಧರಿಸಿದೆ.ಬೆಂಗಳೂರು, ತುಮಕೂರು, ಕೋಲಾರ, ಮಂಡ್ಯ, ಬಳ್ಳಾರಿ,ಚಿತ್ರದುರ್ಗದಲ್ಲಿ ಮುಷ್ಕರ ನಡೆಯುವ ಸಾಧ್ಯಗಳಿವೆ.ರಾಜ್ಯ ಹಾಗೂ ನಗರ ಹೋಟೆಲ್ ಸಂಘಟನೆಯಲ್ಲಿ ಒಡಕು ಏರ್ಪಟ್ಟ ಹಿನ್ನೆಲೆಯಲ್ಲಿ ನಾಳಿನ ಮುಷ್ಕರ ನಡೆಯುವುದು ಅನುಮಾನವಾಗಿದೆ.

ಇನ್ನು ಹೋಟೆಲ್​ಗಳ ಬಂದ್​ ನಿರ್ಧಾರ ಬೆನ್ನಲ್ಲೆ ರಾಷ್ಟ್ರವ್ಯಾಪ್ತಿ ಮೆಡಿಕಲ್​ ಶಾಪ್​ಗಳ ಬಂದ್​ಗೂ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರ ಆನ್​ಲೈನ್​​ನಲ್ಲಿ ಔಷಧಗಳ ಮಾರಾಟಕ್ಕೆ ಅವಕಾಶ ನೀಡಿರುವುದನ್ನು ಖಂಡಿಸಿ ರಾಷ್ಟ್ರ ಔಷಧ ವ್ಯಾಪಾರಿಗಳ ಸಂಘ ಬಂದ್​ಗೆ ಕರೆ ನೀಡಿದೆ. ಅಲ್ಲದೆ ಬಂದ್​ಗೆ ಬೆಂಬಲಿಸಿ ಟೌನ್​ಹಾಲ್​ ಮುಂದೆ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಹಾಗೆ ಬೆಂಗಳೂರು ನಗರಾದ್ಯಂತ 8500 ಮತ್ತು ರಾಜ್ಯಾದ್ಯಂತ 28 ಸಾವಿರಕ್ಕೂ ಅಧಿಕ ಮೆಡಿಕಲ್​ ಶಾಪ್​ಗಳು ಕ್ಲೋಸ್​​ ಆಗ್ತಿವೆ. ಆದ್ರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂದಿನಂತೆ ಔಷಧಿ ಲಭ್ಯವಾಗಲಿದೆ. ಇನ್ನು ಆನ್​ಲೈನ್​ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಮೆಡಿಕಲ್​ ಶಾಪ್​ಗಳಿಗೆ ನಷ್ಟವುಂಟಾಗಲಿದೆ ಎಂದು ಔಷಧ ವ್ಯಾಪಾರ ಸಂಘಟಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಈ ಹಿನ್ನೆಲೆಯಲ್ಲಿ ಬಂದ್​ಗೆ ಕರೆ ನೀಡಲಾಗಿದೆ