ಇದು ಚುನಾವಣಾ ವರ್ಷವಾದ್ದರಿಂದ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರಮುಖ ಪ್ರತಿಪಕ್ಷ ಬಿಜೆಪಿ ನಾಯಕರು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವ ರೂಪದಲ್ಲಿ ರಣತಂತ್ರಗಳನ್ನು ಹೆಣೆದು ಈ ಉಪಚುನಾವಣೆಯಲ್ಲಿ ಪ್ರಚಾರ ನಡೆಸಿದ್ದಾರೆ. ಹಣಬಲ, ತೋಳ್ಬಲದ ಪ್ರದರ್ಶನವೂ ಆಗಿದೆ. ಅಂತಿಮವಾಗಿ ಯಾರ ಸಾಮರ್ಥ್ಯ ಎಷ್ಟುಎಂಬುದು ಗುರುವಾರ ಸ್ಪಷ್ಟವಾಗಿ ಹೊರಬೀಳಲಿದೆ.ಕೊನೆಯ ಕ್ಷಣದವರೆಗೂ ಉಭಯ ಪಕ್ಷಗಳ ಮುಖಂಡರು ಎರಡೂ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂಬ ಅದಮ್ಯ ವಿಶ್ವಾಸವನ್ನೇ ತೋರುತ್ತಿದ್ದಾರೆ. ಹೀಗಾಗಿ, ಫಲಿತಾಂಶ ಸಹಜವಾಗಿಯೇ ಸಾಕಷ್ಟುಕುತೂಹಲ ಕೆರಳಿಸಿದೆ.
ಬೆಂಗಳೂರು(ಏ.13): ಗುಂಡ್ಲೇಪೇಟೆ ಹಾಗೂ ನಂಜನಗೂಡು ವಿಧಾನಸಭೆ ಉಪ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. 2 ಕ್ಷೇತ್ರಗಳ ಸ್ಟ್ರಾಂಗ್ ರೂಂನಿಂದ ಮತಯಂತ್ರಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಚುನಾವಣಾಧಿಕಾರಿಗಳು ಹೊರ ತೆಗೆದಿದ್ದಾರೆ. ಮತ ಕೇಂದ್ರಕ್ಕೆ ತೆರಳುವ ಅರ್ಧ ಕಿಲೋಮೀಟರ್ ದೂರದಲ್ಲೇ ಪೊಲೀಸರು ಎಲ್ಲಾ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾರೆ.
ಇದು ಚುನಾವಣಾ ವರ್ಷವಾದ್ದರಿಂದ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರಮುಖ ಪ್ರತಿಪಕ್ಷ ಬಿಜೆಪಿ ನಾಯಕರು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವ ರೂಪದಲ್ಲಿ ರಣತಂತ್ರಗಳನ್ನು ಹೆಣೆದು ಈ ಉಪಚುನಾವಣೆಯಲ್ಲಿ ಪ್ರಚಾರ ನಡೆಸಿದ್ದಾರೆ. ಹಣಬಲ, ತೋಳ್ಬಲದ ಪ್ರದರ್ಶನವೂ ಆಗಿದೆ. ಅಂತಿಮವಾಗಿ ಯಾರ ಸಾಮರ್ಥ್ಯ ಎಷ್ಟುಎಂಬುದು ಗುರುವಾರ ಸ್ಪಷ್ಟವಾಗಿ ಹೊರಬೀಳಲಿದೆ.
ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರಿಗೆ ನಂಜನಗೂಡು ಮೀಸಲು ಕ್ಷೇತ್ರ ಮಹತ್ವವಾದದ್ದು. ಬಹುಕಾಲದ ಮಿತ್ರರಾಗಿದ್ದ ಹಾಗೂ ಹಳೆ ಮೈಸೂರು ಭಾಗದ ಹಿರಿಯ ದಲಿತ ನಾಯಕ ವಿ.ಶ್ರೀನಿವಾಸಪ್ರಸಾದ್ ಅವರು ಸಡ್ಡು ಹೊಡೆದು ಬಿಜೆಪಿಯಿಂದ ಸ್ಪರ್ಧಿಸಿರುವುದರಿಂದ ತಮ್ಮದು ಅಹಿಂದ ಪರ ಸರ್ಕಾರ ಎಂದೇ ಬಿಂಬಿಸಿಕೊಳ್ಳುವ ಸಿದ್ದರಾಮಯ್ಯ ಅವರಿಗೆ ಈ ಕ್ಷೇತ್ರದಲ್ಲಿನ ಸೋಲು-ಗೆಲುವು ಅವರ ಪ್ರಭಾವವನ್ನು ನಿರ್ಧರಿಸಲಿದೆ. ಇನ್ನು ಗುಂಡ್ಲುಪೇಟೆ ಪ್ರತಿನಿಧಿಸುತ್ತಿದ್ದ ಎಚ್.ಎಸ್.ಮಹದೇವ ಪ್ರಸಾದ್ ಅವರು ಸಿದ್ದರಾಮಯ್ಯ ಅವರ ಆಪ್ತಸ್ನೇಹಿತ. ಮಹದೇವಪ್ರಸಾದ್ ಅವರ ಪತ್ನಿಯನ್ನೇ ಕಣಕ್ಕಿಳಿಸಲಾಗಿದೆ.
ಇನ್ನು ಬಿಜೆಪಿ ದೃಷ್ಟಿಯಿಂದ ನೋಡುವುದಾದರೆ ಹಳೆ ಮೈಸೂರು ಭಾಗದಲ್ಲಿ ಆ ಪಕ್ಷದ ಪ್ರಭಾವ ಕಡಮೆ. ಅದರಲ್ಲೂ ಮೈಸೂರು ಮತ್ತು ಚಾಮರಾಜನಗರ ಭಾಗದಲ್ಲಿ ಹೇಳಿಕೊಳ್ಳುವಂಥ ಪ್ರಭಾವವಿಲ್ಲ. ಮೇಲಾಗಿ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಬಿಜೆಪಿ ಹಿಂದೆ ಯಾವತ್ತೂ ಗೆಲುವು ಸಾಧಿಸಿಲ್ಲ. ಅಷ್ಟರಮಟ್ಟಿಗೆ ಅವು ಬಿಜೆಪಿಗೆ ಸೇರದ ಕ್ಷೇತ್ರಗಳು ಎನ್ನಬಹುದಾಗಿದೆ.
ಆದರೆ, ಆ ಎರಡೂ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಅವರ ವೀರಶೈವ ಲಿಂಗಾಯತ ಸಮುದಾಯದ ಮತದಾರರೂ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ ಎನ್ನುವುದು ಗಮನಾರ್ಹ. ಜತೆಗೆ ನಂಜನಗೂಡು ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿರುವ ಶ್ರೀನಿವಾಸಪ್ರಸಾದ್ ಅವರು ಹಿರಿಯ ದಲಿತ ನಾಯಕ. ಅವರನ್ನು ಕಾಂಗ್ರೆಸ್ಸಿನಿಂದ ಕರೆತಂದು ಕಣಕ್ಕಿಳಿಸಲಾಗಿದೆ. ದಲಿತ ಮತ್ತು ಲಿಂಗಾಯತ ಸಮುದಾಯ ಸೇರಿದ ನಂತರವೂ ಬಿಜೆಪಿ ಗೆಲ್ಲದಿದ್ದಲ್ಲಿ ಅದು ಯಡಿಯೂರಪ್ಪ ಮತ್ತು ಶ್ರೀನಿವಾಸ ಪ್ರಸಾದ್ ಅವರಿಬ್ಬರಿಗೂ ಆಗುವ ಹಿನ್ನಡೆ ಎಂದೇ ಪರಿಗಣಿಸಬೇಕಾಗುತ್ತದೆ.
ಗುಂಡ್ಲುಪೇಟೆ ಕ್ಷೇತ್ರದಲ್ಲೂ ಯಡಿಯೂರಪ್ಪ ಅವರು ಸಾಕಷ್ಟುಪ್ರಚಾರ ನಡೆಸಿದ್ದಾರೆ. ಅನುಕಂಪದ ಅಲೆಯ ವಿರುದ್ಧ ಈಜುವ ಸಾಹಸ ಮಾಡಿದ್ದಾರೆ. ಅನುಕಂಪವನ್ನೂ ಮೀರಿ ತಮ್ಮ ಜತೆ ಮತದಾರರು ಇದ್ದಾರೆ ಎಂಬುದನ್ನು ಬಿಂಬಿಸುವ ಪ್ರಯತ್ನವನ್ನು ಯಡಿಯೂರಪ್ಪ ಮಾಡಿದ್ದಾರೆ. ಎರಡರಲ್ಲಿ ಒಂದನ್ನಾದರೂ ಗೆಲ್ಲುವ ಮೂಲಕ ಪಕ್ಷದ ಸಂಘಟನೆ ಬಲಗೊಂಡಿದೆ ಎಂಬುದನ್ನು ನಿರೂಪಿಸಬೇಕಾದ ಜವಾಬ್ದಾರಿ ಯಡಿಯೂರಪ್ಪ ಅವರ ಮೇಲಿದೆ.
